ವರ್ಷದ ಮೊದಲ ಮನ್ ಕೀ ಬಾತ್ ನಲ್ಲಿ ಶಿವಕುಮಾರ ಸ್ವಾಮೀಜಿ, ನೇತಾಜಿಯನ್ನು ನೆನೆದ ಮೋದಿ
ಸುಭಾಷ್ ಚಂದ್ರ ಬೋಸ್ ಧೀರೋದಾತ್ತ ಯೋಧ ಹಾಗೂ ನುರಿತ ಸಂಘಟಕರು ಎಂದು ಭಾನುವಾರ ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ನಮ್ಮ ಸರಕಾರವು ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ಕಡತ ಬಹಿರಂಗ ಪಡಿಸುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದೆ ಎಂದು ತಮ್ಮ ಮನ್ ಕೀ ಬಾತ್ ನಲ್ಲಿ ಹೇಳಿದ್ದಾರೆ.
ವರ್ಷದ ಮೊದಲ ಮನ್ ಕೀ ಬಾತ್ ನಲ್ಲಿ ಮಾತನಾಡಿದ ಅವರು, ಸುಭಾಷ್ ಬಾಬು ಅವರನ್ನು ಧೀರೋದಾತ್ತ ಯೋಧ ಅಂತಲೇ ಯಾವಾಗಲೂ ನೆನಪಿಸಿಕೊಳ್ಳುತ್ತೇವೆ. ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ದಿಲ್ಲಿ ಚಲೋ, ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ನೀಡುತ್ತೇನೆ ಎಂಬ ಹೇಳಿಕೆಗಳ ಮೂಲಕ ಪ್ರತಿ ಭಾರತೀಯನನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದ್ದರು ಎಂದಿದ್ದಾರೆ.
ನೇತಾಜಿಗೆ ಸಂಬಂಧಿಸಿದ ಕಡತಗಳನ್ನು ಬಹಿರಂಗ ಪಡಿಸುವಂತೆ ಬಹಳ ವರ್ಷಗಳಿಂದ ಬೇಡಿಕೆ ಇತ್ತು. ನಾವು ಆ ಬೇಡಿಕೆಯನ್ನು ಪೂರ್ತಿಗೊಳಿಸಿದೆವು ಎಂಬ ಸಂತೋಷ ಇದೆ ಎಂದ ಅವರು, ನಾನು ಯಾವಾಗಲೂ ರೇಡಿಯೋವನ್ನು ಜನರೊಂದಿಗಿನ ಸಂವಹನಕ್ಕೆ ಮುಖ್ಯ ಉಪಕರಣ ಎಂದು ಭಾವಿಸುತ್ತೇನೆ. ಅದೇ ರೀತಿ ನೇತಾಜಿಗೆ ಕೂಡ ರೇಡಿಯೋ ಜತೆಗೆ ನಿಕಟ ನಂಟಿತ್ತು. ದೇಶದ ಜನರ ಜತೆಗೆ ಸಂವಹನಕ್ಕೆ ರೇಡಿಯೋವನ್ನೇ ಬಳಸಿಕೊಂಡರು ಎಂದಿದ್ದಾರೆ.

ಆಜಾದ್ ಹಿಂದ್ ರೇಡಿಯೊ ಆರಂಭ
1942ರಲ್ಲಿ ಸುಭಾಷ್ ಚಂದ್ರ ಬೋಸ್ ಆಜಾದ್ ಹಿಂದ್ ರೇಡಿಯೊ ಆರಂಭಿಸಿದ್ದರು. ಆ ಮೂಲಕ ದೇಶದ ಜನರು ಹಾಗೂ ಆಜಾದ್ ಹಿಂದ್ ಫೌಜ್ ನ ಸೈನಿಕರ ಜತೆಗೆ ಸಂವಹನ ನಡೆಸುತ್ತಿದ್ದರು ಎಂದ ಮೋದಿ, ಜನವರಿ 23ರಂದೇ ದೆಹಲಿಯ ಕೆಂಪು ಕೋಟೆಯಲ್ಲಿ ನೇತಾಜಿ ಅವರ ಸಂಗ್ರಹಾಲಯ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.

ಸಂದರ್ಶಕರಿಗೆ ಸ್ಪೂರ್ತಿ ಆಗಲಿದೆ
ಜನವರಿ 23ರಂದು ಇಡೀ ದೇಶ ನೇತಾಜಿ ಜನ್ಮ ದಿನ ಆಚರಿಸಿದೆ ಮತ್ತು ಅದೇ ದಿನ ಸ್ವಾತಂತ್ರ್ಯ ಹೋರಾಟಗಾರರ ಸಂಗ್ರಹಾಲಯ ಉದ್ಘಾಟನೆ ಮಾಡಲು ನನಗೆ ಅವಕಾಶ ಸಿಕ್ಕಿತು. 'ಕ್ರಾಂತಿ ಮಂದಿರ್'ನಲ್ಲಿ ನೇತಾಜಿಗೆ ಸಂಬಂಧಿಸಿದ ಸ್ಮರಣೆಗಳನ್ನು ನೋಡುವಾಗ, ನೇತಾಜಿ ಕುಟುಂಬದವರು ನನಗೆ ವಿಶೇಷ ಕ್ಯಾಪ್ ನೀಡಿದರು. ಅದನ್ನು ಮ್ಯೂಸಿಯಂನಲ್ಲೇ ಇಟ್ಟಿದ್ದೇನೆ. ಸಂದರ್ಶಕರಿಗೆ ಅದರಿಂದ ಸ್ಫೂರ್ತಿ ದೊರೆಯುತ್ತದೆ ಎಂದಿದ್ದಾರೆ.

ಆಜಾದ್ ಹಿಂದ್ ಸರಕಾರಕ್ಕೆ ಎಪ್ಪತ್ತೈದು ವರ್ಷ ತುಂಬಿದ ಸಂಭ್ರಮ
ಕಳೆದ ತಿಂಗಳು ಅಂಡಮಾನ್-ನಿಕೋಬಾರ್ ದ್ವೀಪಕ್ಕೆ ಹೋಗಿಬಂದೆ. ಎಪ್ಪತ್ತೈದು ವರ್ಷದ ಹಿಂದೆ ಎಲ್ಲಿ ನೇತಾಜಿ ರಾಷ್ಟ್ರ ಧ್ವಜವನ್ನು ಹಾರಿಸಿದ್ದರೋ ಅದೇ ಜಾಗದಲ್ಲಿ ಧ್ವಜ ಹಾರಿಸಿದೆ. ಅದೇ ರೀತಿ ಕಳೆದ ವರ್ಷ ಅಕ್ಟೋಬರ್ ನಲ್ಲಿ ಕೆಂಪು ಕೋಟೆಯಲ್ಲಿ ಧ್ವಜ ಹಾರಿಸಿದಾಗಲೂ ಎಲ್ಲರೂ ಅಚ್ಚರಿಗೊಳಗಾದರು. ಆಗಸ್ಟ್ ಹದಿನೈದರಂದು ಮಾತ್ರ ಧ್ವಜ ಹಾರಿಸುವ ಪರಿಪಾಠ ಇದೆ. ಆದರೆ ಅದು ಆಜಾದ್ ಹಿಂದ್ ಸರಕಾರ್ ರಚನೆಯಾದ ಎಪ್ಪತ್ತೈದನೇ ವರ್ಷದ ಸಂಭ್ರಮಕ್ಕೆ ಹಾಗೆ ಮಾಡಲಾಗಿತ್ತು ಎಂದಿದ್ದಾರೆ.

ಸಾಮಾಜಿಕ, ಶೈಕ್ಷಣಿಕ ಏಳ್ಗೆಗೆ ದುಡಿದ ಮಹಾನ್ ವ್ಯಕ್ತಿ
ಇದೇ ವೇಳೆ ಕರ್ನಾಟಕದ ಸಿದ್ದಗಂಗಾ ಮಠ ಶಿವಕುಮಾರ ಸ್ವಾಮೀಜಿಯನ್ನು ನೆನೆದ ಪ್ರಧಾನಿ, ಅವರು ತಮ್ಮ ಇಡೀ ಜೀವನವನ್ನು ಸಾಮಾಜಿಕ ಸೇವೆಗೆ ಮುಡುಪಾಗಿಟ್ಟರು. ಸಾವಿರಾರು ಮಂದಿಯ ಸಾಮಾಜಿಕ, ಶೈಕ್ಷಣಿಕ ಏಳ್ಗೆ ಹಾಗೂ ಕಲ್ಯಾಣಕ್ಕಾಗಿ ದುಡಿದ ಮಹಾನ್ ವ್ಯಕ್ತಿ ಅವರು. ಜನರಿಗೆ ಆಹಾರ, ಸೂರು, ಶಿಕ್ಷಣ ಹಾಗೂ ಆಧ್ಯಾತ್ಮಿಕ ಜ್ಞಾನ ದೊರೆಯಬೇಕು ಎಂಬುದು ಶಿವಕುಮಾರ ಸ್ವಾಮೀಜಿ ಅವರ ಆದ್ಯತೆಯಾಗಿತ್ತು ಎಂದು ಅವರು ಹೇಳಿದ್ದಾರೆ.












Click it and Unblock the Notifications