ಕಾಮಾಲೆ ಕಣ್ಣೋರಿಗೆ ಮೋದಿ ಅಭಿವೃದ್ದಿಯಲ್ಲಿ ಕಾಣೋದು ಬರೀ ಹಳದಿ
ಟೀಕಾಕಾರರು ಅದೆಷ್ಟೇ ಅಂಧರಾಗಿ ಟೀಕಿಸಲಿ, ಆದರೆ ಕೇಂದ್ರದಲ್ಲಿ NDA ಸರಕಾರ ಬಂದ ನಂತರ ಕೆಲವೊಂದು ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಜನರ ಕೈಗೆಟುಕುವ ಸರಕಾರವಾಗಿ ಕೆಲಸ ಮಾಡುತ್ತಿರುವುದು ನಮಗೆ ಗೋಚರಿಸುತ್ತಿದೆ.
ಒಂದೊಂದೇ ವಿಭಾಗದ ಉದಾಹರಣೆಗಳನ್ನು ನೋಡುತ್ತಾ ಹೋದರೆ ಇದು ನಮ್ಮ ಅರಿವಿಗೆ ಬರುತ್ತಿದೆ. ಪ್ರಧಾನಿ ಮೋದಿಯವರು ಕೊಟ್ಟ ಅಚ್ಚೇ ದಿನದ ಭರವಸೆಗಳು ಕೊಂಚಮಟ್ಟಿಗೆ ಸಾಕಾರಗೊಳ್ಳುತ್ತಿವೆ.
ಸಾಮಾಜಿಕ ತಾಣದ ಮೂಲಕ ಸರಕಾರ ಜನ ಸಾಮಾನ್ಯರನ್ನು ಮುಟ್ಟುವ ಕೆಲಸ ಮಾಡುತ್ತಿದೆ. ಆದರೆ ಇಲ್ಲೂ ವ್ಯವಸ್ಥೆ ಹಾಳು ಮಾಡಲು ಕೆಲ ವಿಘ್ನ ಸಂತೋಷಿಗಳು ತುದಿಗಾಲಲ್ಲಿ ನಿಂತಿರುತ್ತಾರೆ. ಸಹಾಯ ಬೇಕಾಗಿರುವಂತೆ ನಟಿಸಿ, ಉತ್ತಮ ಕಾರ್ಯಕ್ಕೆ ಅಡ್ಡಿಪಡಿಸುತ್ತಿರುವುದು ವಿಷಾದನೀಯ.
ಅದೇ ರೀತಿ, ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡುವ ನೌಕರ ವರ್ಗಕ್ಕೆ ಕನಿಷ್ಠ 1500 ರಿಯಲ್ ಅಥವಾ ಧಿರಮ್, ದೇಶಗಳಿಗೆ ಅನುಗುಣವಾಗಿ ತತ್ಸಮಾನ ವೇತನ ನೀಡಬೇಕೆಂದು ಕಂಪೆನಿಗಳ ಸಂದರ್ಶನದ ಸಮಯದಲ್ಲೇ ತಾಕೀತು ಮಾಡಲಾಗಿರುತ್ತೆ.
ಆದರೆ ಉತ್ತರಪ್ರದೇಶ, ಬಿಹಾರದ ನಿವಾಸಿಗಳು ಅಧಿಕಾರಿಗಳು ಕಣ್ಣಿಗೆ ಮಣ್ಣೆರೆಚಿ 700/800 ರಿಯಲ್ ಗಳಿಗೆ ಕೆಲಸ ಮಾಡಲು ತೆರಳುತ್ತಿರುವುದು , ಯಾವುದೇ ಒಂದು ವ್ಯವಸ್ಥೆಯನ್ನು ಸರಿಪಡಿಸಲು ಹೊರಟವರಿಗೆ ಈ ವಿದ್ಯಮಾನ ಹಿನ್ನಡೆ ಅಂತಾನೇ ಹೇಳಬಹುದು.
ವಿಪರ್ಯಾಸವೆಂದರೆ ಇದೇ ಜನಗಳು, ದುಡಿಯಲು ಹೋದ ದೇಶದಲ್ಲಿ ನಮ್ಮ ಪ್ರಧಾನಿ ಸರಿ ಇಲ್ಲ, ದೇಶ ಸರಿ ಇಲ್ಲ ಎಂಬ ಸರ್ಟಿಫಿಕೇಟುಗಳನ್ನು ನೀಡುತ್ತಿರುತ್ತಾರೆ. ಮುಂದಿನ ಪುಟದಲ್ಲಿ ಓದಿ..

ಸುಷ್ಮಾ ಸ್ವರಾಜ್
ವಿದೇಶದಲ್ಲಿ ಅಂದರೆ ಅನಿವಾಸಿ ಭಾರತೀಯರು ಯಾವುದೇ ಸಂಕಷ್ಟಕ್ಕೆ ಒಳಗಾದಾಗ ಟ್ವೀಟ್ ಮಾಡಿದರೆ ಸಾಕು ತತ್ ಕ್ಷಣ ಪ್ರತಿಕ್ರಿಯೆ ನೀಡುವ ಸುಷ್ಮಾ ಸ್ವರಾಜ್ ಟ್ವಿಟ್ಟರ್ ಹ್ಯಾಂಡಲ್, ಎಲ್ಲರ ಮೆಚ್ಚುಗೆಗೆ ಕಾರಣವಾಗುತ್ತಿದೆ. ನೀವು ಟ್ವಿಟ್ಟರ್ ಬಳಕೆದಾರರಾಗಿದ್ದಲ್ಲಿ , ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಖಾತೆಯನ್ನೊಮ್ಮೆ ಗಮನಿಸಿ, ದಿನಂಪ್ರತಿ ಅದೆಷ್ಟೋ ಜನ ಸಹಾಯ ಪಡೆದು ಧನ್ಯವಾದ ಸಲ್ಲಿಸುವ ಟ್ವೀಟ್ ಗಳು ಕಾಣಸಿಗುತ್ತವೆ.

ಸುರೇಶ್ ಪ್ರಭು
ಇನ್ನು ರೈಲ್ವೇ ಇಲಾಖೆಯ ಸಚಿವ ಸುರೇಶ್ ಪ್ರಭು ಟ್ವಿಟ್ಟರ್ ಹ್ಯಾಂಡಲ್ ಅಂತೂ ತುಂಬಾನೇ ಸುದ್ದಿಯಲ್ಲಿದೆ. ವ್ಯವಸ್ಥೆ ಸರಿಪಡಿಸಲು ಆಗ್ರಹಿಸಿ ಅಥವಾ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಿ ಬರುವ ಟ್ವೀಟ್ ಗಳಿಗೆ 5 ರಿಂದ 30 ನಿಮಿಷಗಳೊಗಾಗಿ ಪರಿಹಾರ ದೊರಕಿಸಿಕೊಡಲಾಗುತ್ತಿದೆ. ಅಷ್ಟರಮಟ್ಟಿಗೆ ಕಾರ್ಯಕ್ಷಮತೆ ಹೊಂದಿರುವ ರೈಲ್ವೇ ಇಲಾಖೆಯನ್ನು ಕಂಡಿದ್ದು ಬಹುಷಃ ಇದೇ ಮೊದಲು. ದಿವಸಕ್ಕೆ 4ರಿಂದ 5 ಸಾವಿರ ಟ್ವೀಟ್ ಗಳು ಈ ಟ್ವಿಟ್ಟರ್ ಹ್ಯಾಂಡಲ್ ಬಳಸಿ ಸಹಾಯ ನಿರೀಕ್ಷಿಸಿ ಬರುವಂತದ್ದು. ಆದರೆ ಇಲ್ಲೂ ಕೂಡಾ ದಿನಕ್ಕೆ 5ರಿಂದ 6 ಫೇಕ್ ಟ್ವೀಟ್ ಗಳು ಈ ಇಲಾಖೆಯ ಸಿಬ್ಬಂದಿಗಳ ನೆಮ್ಮದಿ ಕೆಡಿಸುತ್ತಿವೆ.

ಸ್ಮೃತಿ ಇರಾನಿ
ಅದೇ ರೀತಿ ಮಾನವ ಸಂಪನ್ಮೂಲಗಳ ಅಭಿವೃದ್ಧಿ ಇಲಾಖೆ ಸಚಿವೆ ಸ್ಮ್ರತಿ ಇರಾನಿಯವರ ಟ್ವಿಟ್ಟರ್ ಹ್ಯಾಂಡಲ್ ಉತ್ತಮವಾಗಿ ಪ್ರತಿಕ್ರಿಯೆ ನೀಡುತ್ತಿದೆ, ಯಾವುದೇ ಶೈಕ್ಷಣಿಕ ಇಲಾಖೆ, ಮಾಹಿತಿ ಸಂಬಂಧ ಸಂಪರ್ಕಿಸಿದರೆ ಉತ್ತರ ಕೊಡುವಮಟ್ಟಿಗೆ ಕಾರ್ಯ ಸನ್ನದ್ಧವಾಗಿದೆ .

ನಿತಿನ್ ಗಡ್ಕರಿ ಟ್ವಿಟ್ಟರ್ ಹ್ಯಾಂಡಲ್
ಇದೇ ರೀತಿ ಎಲ್ಲಾ ವಿಭಾಗಗಳು ಕಾರ್ಯ ಪ್ರವೃತವಾದರೆ, ಸರಕಾರ ಜನಸಾಮಾನ್ಯರಿಗೆ ಸುಲಭದಲ್ಲಿ ಸಿಗುವಂತಾಗುತ್ತದೆ. ಇನ್ನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡದ ಸಚಿವ ನಿತಿನ್ ಗಡ್ಕರಿ ಟ್ವಿಟ್ಟರ್ ಹ್ಯಾಂಡಲ್ ಕಾರ್ಯ ಪ್ರವೃತ್ತವಾಗಬೇಕಿದೆ .ಅದೇ ರೀತಿ ಅನೇಕ ಸಚಿವರು ಸಾಮಾಜಿಕ ತಾಣದ ಮೂಲಕ ಜನರಿಗೆ ಸ್ಪಂದಿಸುವ ಕೆಲಸವಾಗಬೇಕಿದೆ.

ಪ್ರಜ್ಞಾವಂತರು ಯೋಚಿಸಬೇಕಿದೆ
ಈ ರೀತಿಯ ವ್ಯವಸ್ಥೆ ಬಲಗೊಳ್ಳುತ್ತಿರುವಂತೆ, ಒಂದು ಕಡೆಯಿಂದ ನಮ್ಮ ಸರಕಾರಗಳು ಕೊಡಮಾಡಿದ ವ್ಯವಸ್ಥೆಯನ್ನು ದುರುಪಯೋಗಪಡಿಸದಂತೆ ಹಾಗೂ ಮುಂದಿನ ದಿನಗಳಲ್ಲಿ ಸರಕಾರ ಬದಲಾದರೂ ವ್ಯವಸ್ಥೆ ಚೆನ್ನಾಗಿರುವಂತೆ ನೋಡಿಕೊಳ್ಳುವ ಭಾರ ದೇಶದ ಪ್ರತಿಯೊಬ್ಬ ಪ್ರಜೆಯ ಮೇಲಿದೆ. ಈ ನಿಟ್ಟಿನಲ್ಲಿ ಪ್ರಜ್ಞಾವಂತರು ಯೋಚಿಸಬೇಕಿದೆ.












Click it and Unblock the Notifications