ಮಾಜಿ ಯೋಧರ ಬೇಡಿಕೆಗೆ ಸರ್ಕಾರ ಯಾಕೆ ಒಪ್ಪುತ್ತಿಲ್ಲ?
ನವದೆಹಲಿ, ಆಗಸ್ಟ್. 28: ಒಂದೆಡೆ ಸರ್ಕಾರ ಮತ್ತು ನಾಗರಿಕರು ಭಾರತ ಪಾಕಿಸ್ತಾನದ ವಿರುದ್ಧ ಯುದ್ಧ ಗೆದ್ದ 50 ನೇ ವರ್ಷದ ಸಂಭ್ರಮ ಆಚರಣೆ ಮಾಡುತ್ತಿದ್ದರೆ ಇನ್ನೊಂದೆಡೆ ದೆಹಲಿಯ ಜಂತರ್ ಮಂಥರ್ ನಲ್ಲಿ ಮಾಜಿ ಸೈನಿಕರ ಪ್ರತಿಭಟನೆ ಮುಂದುವರಿದಿದೆ.
ಏಕ ಹುದ್ದೆ, ಏಕ ಪಿಂಚಿಣಿ ಯೋಜನೆ ಜಾರಿಗೆ ಆಗ್ರಹಿಸಿ ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ಸೈನಿಕರು ಸರ್ಕಾರದ ಸಂಭ್ರಮ ಆಚರಣೆಯನ್ನು ಬಹಿಷ್ಕಾರ ಮಾಡಿದ್ದಾರೆ.[ಇಂಡೋ-ಪಾಕ್ ಯುದ್ಧಕ್ಕೆ 50 ವರ್ಷ, ಯೋಧರಿಗೆ ಮೋದಿ ನಮನ]
ಗುರುವಾರ ಮಾಜಿ ಸೈನಿಕರೊಂದಿಗೆ ನಡೆದ ಮಾತುಕತೆ ವಿಫಲವಾಗಿದೆ. ಸೈನ್ಯದ ಚೀಫ್ ಜನರಲ್ ದಲ್ಬೀರ್ ಸಿಂಗ್ ಅವರ ಬಳಿಯೂ ಪರಿಹಾರ ಸೂತ್ರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಹಾಗಾದರೆ ಯೋಜನೆ ಜಾರಿ ಸಂಬಂಧ ಸರ್ಕಾರದ ನಿಲುವೇನು? ಸೈನಿಕರ ವಾದವೇನು? ಯೋಜನೆ ಜಾರಿಯಾದರೆ ಯಾವ ಸಮಸ್ಯೆ ಉಂಟಾಗುತ್ತದೆ? ಎಂಬ ಎಲ್ಲ ಅಂಶಗಳ ಮೇಲೆ ಗಮನ ಹರಿಸಬೇಕಾಗುತ್ತದೆ.

ಪರಿಹಾರ ಯಾಕೆ ಸಾಧ್ಯವಾಗುತ್ತಿಲ್ಲ?
ಕೇಂದ್ರ ಸರ್ಕಾರ ಪೆನ್ಶನ್ ಹೆಚ್ಚು ಮಾಡುವ ಪ್ರಕ್ರಿಯೆಯನ್ನು 5 ವರ್ಷಕ್ಕೆ ಸೀಮಿತ ಮಾಡಿದೆ. ಆದರೆ ಮಾಜಿ ಸೈನಿಕರು ಇದನ್ನು ಒಂದು ವರ್ಷಕ್ಕೆ ಇಳಿಸಬೇಕು ಎಂದು ಪ್ರತಿಭಟನೆ ಮಾಡುತ್ತಿದ್ದಾರೆ.

ಉಪವಾಸ ಬಿಟ್ಟು ಮಾತುಕತೆಗೆ ಬನ್ನಿ
ಕೆಲ ಮಾಜಿ ಸೈನಿಕರು ಕೈಗೊಂಡಿರುವ ಉಪವಾಸವನ್ನು ಕೈ ಬಿಟ್ಟು ಮಾತುಕತೆಗೆ ಬರಬೇಕು. ಹೊಂದಾಣಿಕೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂಬುದು ಸರ್ಕಾರದ ವಾದ.

ಬೊಕ್ಕಸಕ್ಕೆ ಹೊರೆ
ಈ ಬಗೆಯ ಅನಿರೀಕ್ಷಿತ ಬದಲಾವಣೆಗಳು ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಿ ಪರಿಣಮಿಸುವ ಸಾಧ್ಯತೆಗಳಿರುತ್ತದೆ. ಅಲ್ಲದೇ ಮಾನದಂಡದ ಬಗ್ಗೆಯೂ ಗೊಂದಲ ಏರ್ಪಡುವ ಸಂಭವವಿರುತ್ತದೆ ಎಂದು ಸರ್ಕಾರ ಹೇಳುತ್ತಿದೆ.

ನಿರೀಕ್ಷೆ ಹುಸಿಯಾಯಿತೆ?
ಪಾಕಿಸ್ತಾನದ ವಿರುದ್ಧ ಯುದ್ಧ ಗೆದ್ದ ಸಂಭ್ರಮವನ್ನು ಆಚರಿಸುವ ವೇಳೆ ಸರ್ಕಾರ ಯೋಜನೆ ಘೋಷಣೆ ಮಾಡಲಿದೆ ಎಂದು ಮಾಜಿ ಸೈನಿಕರು ನಂಬಿಕೊಂಡಿದ್ದರು. ಆದರೆ ಅದೀಗ ಹುಸಿಯಾಗಿದೆ.

ಪ್ರತಿಭಟನೆ ಮುಂದುವರಿಯಲಿದೆ
ಆಗಸ್ಟ್ 28 ಸಂಜೆ ಒಳಗೆ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳದಿದ್ದರೆ ಪ್ರತಿಭಟನೆ ಮುಂದುವರಿಯಲಿದೆ. ಮತ್ತಷ್ಟು ಡಸೈನಿಕರು ಪ್ರತಿಭಟನೆಗೆ ಕೈ ಜೋಡಿಸಿದ್ದು ಸರ್ಕಾರ ಯವ ಕ್ರಮದ ಮೂಲಕ ಪರಿಹಾರ ಕಂಡುಕೊಳ್ಳುತ್ತದೆ ಎಂಬುದನ್ನು ನೋಡಬೇಕಿದೆ.












Click it and Unblock the Notifications