ಅದು ಅಪ್ಪುಗೆಯಲ್ಲ, ಮೋದಿಗೆ ನೀಡಿದ ಶಾಕ್: ಶಿವಸೇನಾ ವಿಶ್ಲೇಷಣೆ
ನವದೆಹಲಿ, ಜುಲೈ 21: ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿಗೆ ನೀಡಿರುವುದು ಅಪ್ಪುಗೆಯಲ್ಲ, ಆದರೆ ಅದು ಅವರಿಗೆ ನೀಡಿದ ಶಾಕ್ ಎಂದು ಶಿವಸೇನಾ ವಿಶ್ಲೇಷಿಸಿದೆ.
ರಾಹುಲ್ ಗಾಂಧಿ ಅವರು ನೈಜ ರಾಜಕೀಯ ಶಾಲೆಯಿಂದ ಪದವೀಧರರಾಗಿದ್ದಾರೆ ಎಂಬುದನ್ನು ಇದು ಸ್ಪಷ್ಟಪಡಿಸಿದೆ ಎಂದು ಶಿವಸೇನಾದ ಮುಖಂಡ ಸಂಜಯ್ ರಾವತ್ ಪ್ರಶಂಸಿಸಿದ್ದಾರೆ.
ಇದೊಂದು ನಾಟಕ ಎಂದು ಜನರು ಹೇಳುತ್ತಿದ್ದಾರೆ. ಆದರೆ, ರಾಜಕೀಯದಲ್ಲಿ ನಾಟಕ ಇದ್ದಿದ್ದೇ ಎಂದಿದ್ದಾರೆ.

ಅವಿಶ್ವಾಸ ನಿರ್ಣಯ ಸಂದರ್ಭದಲ್ಲಿ ಬಿಜೆಪಿಗೆ ಬೆಂಬಲ ನೀಡುವುದಾಗಿ ಹೇಳಿದ್ದ ಶಿವಸೇನಾ, ಕೊನೆಯ ಹಂತದಲ್ಲಿ ತನ್ನ ನಿಲುವು ಬದಲಿಸಿ ಕಲಾಪದಿಂದ ಹೊರಗುಳಿಯುವ ಮೂಲಕ ಬಿಜೆಪಿಗೆ ಅಚ್ಚರಿ ಮೂಡಿಸಿತ್ತು.
ಅಮಿತ್ ಶಾ ಮತ್ತು ಉದ್ಧವ್ ಠಾಕ್ರೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು, ಶಿವಸೇನಾ ತನಗೆ ಬೆಂಬಲ ನೀಡಲಿದೆ ಎಂದು ಬಿಜೆಪಿಯ ಕೆಲವು ಹಿರಿಯ ಸಚಿವರು ಹೇಳಿದ್ದರು. ಆದರೆ, ಶುಕ್ರವಾರ ಬೆಳಿಗ್ಗೆ ಸಭೆ ನಡೆಸಿದ್ದ ಸೇನಾದ ಮುಖಂಡರು ಅವಿಶ್ವಾಸ ನಿರ್ಣಯದಿಂದ ದೂರವೇ ಉಳಿಯಲು ನಿರ್ಧರಿಸಿದ್ದರು.
ಪಕ್ಷದ ದಿಟ್ಟ ನಿರ್ಧಾರಕ್ಕಾಗಿ ರಾವತ್, ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಹೊಗಳಿದ್ದಾರೆ.
'ಶಿವಸೇನಾ ನಿರ್ಧಾರ ತೆಗೆದುಕೊಂಡಿತ್ತು. ಅಂತಹ ನಿರ್ಧಾರ ತೆಗೆದುಕೊಳ್ಳಲು ಧೈರ್ಯ ದಿಟ್ಟತನ ಬೇಕು. ಅದನ್ನು ತಾವು ಹೊಂದಿರುವುದನ್ನು ಉದ್ಧವ್ ಠಾಕ್ರೆ ಪ್ರದರ್ಶಿಸಿದರು ಎಂದು ರಾವತ್ ಹೇಳಿದ್ದಾರೆ.
'ದೇಶವನ್ನು ಆಳುತ್ತಿರುವವರು ಕಟುಕರು. ಅವರು ಪ್ರಾಣಿಗಳನ್ನು ರಕ್ಷಿಸುತ್ತಾರೆ ಆದರೆ, ಮನುಷ್ಯರನ್ನಲ್ಲ' ಎಂದು ಶಿವಸೇನಾ ತನ್ನ ಮುಖವಾಣಿ 'ಸಾಮ್ನಾ'ದಲ್ಲಿ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದೆ.












Click it and Unblock the Notifications