ಆಮ್ ಆದ್ಮಿ ಅಧಿಕಾರಕ್ಕೆ: ತಾಜಾ ಬೆಳವಣಿಗೆಗಳೇನು?
ನವದೆಹಲಿ, ಡಿ. 26: ಭಿನ್ನರಾಗಗಳೆಲ್ಲವೂ ಕ್ಷೀಣವಾಗಿದ್ದು, ಆಮ್ ಆದ್ಮಿ ಪಕ್ಷಕ್ಕೆ ಅಧಿಕಾರದ ಕುರ್ಚಿಯೇರುವುದು ಸರಾಗವಾಗಿದೆ. ಪಕ್ಷದ ಸಂಸ್ಥಾಪಕ ಅರವಿಂದ್ ಕೇಜ್ರಿವಾಲಾರು ದೆಹಲಿಯ ಭಾವಿ ಮುಖ್ಯಮಂತ್ರಿಯಾಗುವುದು ದಿಟವಾಗಿದೆ.
ಇದರ ಬೆನ್ನಿಗೇ ದಿಲ್ಲಿ ರಾಜಕಾರಣದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಹೆಚ್ಚು ಶಾಸಕರನ್ನು ಹೊಂದಿದ್ದರೂ ಸರಳ ಬಹುಮತದ ಕೊರತೆಯಿಂದಾಗಿ ಅಧಿಕಾರ ಬೇಡವೆಂದ ಬಿಜೆಪಿ ಹೆಚ್ಚು ಮಾತನಾಡದೆ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.
ಆದರೆ ಆಮ್ ಆದ್ಮಿ ಅರವಿಂದ್ ಕೇಜ್ರಿವಾಲಾರು ಅಧಿಕಾರಕ್ಕೆ ಬಂದ 15ನೇ ದಿನದೊಳಗಾಗಿ ಜನ ಲೋಕಪಾಲ್ ಮಸೂದೆಯನ್ನು ಜಾರಿಗೊಳಿಸುವುದು ದಿಟ ಎಂದಿದ್ದಾರೆ. ಇದರಿಂದ ದಿಲ್ಲಿಯ ಕಡುಚಳಿಯಲ್ಲೂ ಕಾಂಗ್ರೆಸ್ ಗಡಗಡ ಎನ್ನುತ್ತಿದೆ. ಕೇಜ್ರಿವಾಲಾರು ಜನ ಲೋಕಪಾಲ್ ಮಸೂದೆ ಜಾರಿಗೆ ಅಂಕಿತವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕರು ಹೆಗಲು ಮುಟ್ಟಿ ಅಂಗೈ ನೋಡಿಕೊಂಡಿದ್ದಾರೆ.
ಹಗ್ಗ ಕೊಟ್ಟು 'ಕೈ' ಕಟ್ಟಿಸಿಕೊಂಡ ಕಥೆ
ಬಾಹ್ಯ ಬೆಂಬಲ ನೀಡಿದ ತಪ್ಪಿಗೆ ಇವಯ್ಯ ನಮ್ಮನ್ನೇ ಮೊದಲು ಒಳಗೆ ತಳ್ಳಿಸುವ ಪ್ರೋಗ್ರಾಂ ಇಟ್ಟುಕೊಂಡಂತಿದೆ ಎಂದು ಕಾಂಗೈ ನಾಯಕರು ಗರಂ ಆಗಿದೆ. ದ್ವೇಷ ರಾಜಕಾರಣ ಮಾಡಿದರೆ ಅಷ್ಟೇಯಾ! ಖೇಲ್ ಖತಂ ನಾಟಕ್ ಬಂದ್ ಆಗುತ್ತದೆ. ಬಾಹ್ಯ ಬೆಂಬಲ ನೀಡುರುವುದರ ಬಗ್ಗೆ ಮತ್ತೆ ಯೋಚಿಸಬೇಕಾಗುತ್ತದೆ, ಹುಷಾರು ಎಂದು ಕಾಂಗ್ರೆಸ್ ಕೇಜ್ರಿವಾಲಾರನ್ನು ಎಚ್ಚರಿಸಿದೆ.

ಸೋಮವಾರದಿಂದ ದಿಲ್ಲಿ ಮಹಾಜನತೆಗೆ ಉಚಿತ ನೀರು
ಹೌದು, 'ಮಾತು ತಪ್ಪದ ಮಗ' ಎನಿಸಿಕೊಳ್ಳಲು ಮನಸು ಮಾಡಿರುವ ಕೇಜ್ರಿವಾಲಾರು ಶನಿವಾರ ತಾವು ಅಧಿಕಾರ ವಹಿಸಿಕೊಳ್ಳೂವುದು ಖಚಿತ. ಅದಾಗುತ್ತಿದ್ದಂತೆ ಚುನಾವಣೆ ವೇಳೆ ನೀಡಿದ್ದ ವಾಗ್ದಾನದಂತೆ 24 ಗಂಟೆಯಲ್ಲಿ ನಿಮ್ಮ ನಿಮ್ಮ ಮನೆಯ ನಲ್ಲಿಗಳಲ್ಲಿ ಪ್ರತಿ ದಿನಾ 700 ಲೀಟರು ಉಚಿತ ನೀರು ಹರಿಯಲಿದೆ ಎಂದು ಭಗೀರತ ಶಪಥ ಮಾಡಿದ್ದಾರೆ.

ಕೇಜ್ರಿವಾಲಾ ದಿಲ್ಲಿ ಮಹಾಜನತೆಗೆ ಅಭಯ'ಹಸ್ತ'
ಇನ್ನು ವಿದ್ಯತ್ ಸರಬರಾಜು ಕಂಪನಿಗಳ ಲೆಕ್ಕಾಚಾರದ ಬಗ್ಗೆ ತೀವ್ರ ಗುಮಾನಿ ಹೊಂದಿರುವ ಕೇಜ್ರಿವಾಲಾರು ಅಧಿಕಾರಕ್ಕೆ ಬರುತ್ತಿದ್ದಂತೆ ಮೊದಲು ಈ ಕಂಪನಿಗಳ ಲೆಕ್ಕಪುಸ್ತಕಗಳನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ.
ಜತೆಗೆ 'ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಭವಿಷ್ಯದಲ್ಲಿ ರಾಷ್ಟ್ರದ ರಾಜಧಾನಿಗೆ ಒಳ್ಳೆಯ ದಿನಗಳು ಬರಲಿವೆ. ನಾವೆಲ್ಲವನ್ನೂ ಸುಗಮವಾಗಿ ನಡೆಸಿಕೊಂಡು ಹೋಗುತ್ತೇವೆ ಎಂದು ಕೇಜ್ರಿವಾಲಾರು ದಿಲ್ಲಿ ಮಹಾಜನತೆಗೆ ಅಭಯ'ಹಸ್ತ' ನೀಡಿದ್ದಾರೆ.

ಇನ್ನುಳಿದಂತೆ: ಏಕಾಂಗಿಯಾಗಿ ಎಲ್ಲ ಯೋಜನೆ ಜಾರಿ
* ಶನಿವಾರ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಕೇಜ್ರಿವಾಲಾ ಮತ್ತು ತಂಡದಿಂದ ಪ್ರಮಾಣ ಸ್ವೀಕಾರ.
* ಜನವರಿ 3ಕ್ಕೆ ಬಹುಮತ ಸಾಬೀತು. ಅಂದರೆ ಗೊಂದಲಕ್ಕೀಡಾದ ಮತದಾರ ವಿಧಾನಸಭೆಯನ್ನು ಡೋಲಾಯಮಾನಗೊಳಿಸಿದ 27 ದಿನಗಳ ಸುದೀರ್ಘ ಕಾಲಾವಕಾಶದಲ್ಲಿ ಆಮ್ ಆದ್ಮಿಗೆ ಬಹುಮತ ಸಾಬೀತು ಪಡೆಸುವ ಯೋಗ ಒದಗಿದೆ.
* ಕೇಜ್ರಿವಾಲ್ ಜತೆ ಮೊದಲ ಬಾರಿ ಶಾಸಕರಾಗಿರುವ ಮನೀಶ್ ಸಿಸೋದಿಯಾ, ಸೌರಭ್ ಭಾರದ್ವಾಜ, ಸೋಮನಾಥ ಭಾರತಿ, ರಾಖೀ ಬಿರ್ಲಾ, ಸತ್ಯೇಂದ್ರ ಜೈನ್ ಮತ್ತು ಗಿರೀಶ್ ಸೋನಿ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
* ಕಾಂಗ್ರೆಸ್ ಪಕ್ಷವು ಬಾಹ್ಯ ಬೆಂಬಲ ಪ್ರಕಟಿಸಿದ್ದರೂ ಆ ಪಕ್ಷದ ಅನುಮತಿಗಾಗಿ ಕಾಯದೇ ಆಮ್ ಆದ್ಮಿ ಪಕ್ಷವು ಏಕಾಂಗಿಯಾಗಿ ಎಲ್ಲ ಯೋಜನೆಗಳನ್ನು ಜಾರಿಗೊಳಿಸಲಿದೆ- ಕೇಜ್ರಿವಾಲಾ.

AAP ಬಹುಮತ ಸಾಬೀತು ಹೇಗೆ?
ದೆಹಲಿ ವಿಧಾನಸಭೆ ಒಟ್ಟು ಬಲಾಬಲ: 70
ಸರಳ ಬಹುಮತಕ್ಕೆ ಬೇಕಾದ್ದು: 36
ಬಿಜೆಪಿ: 32
ಆಮ್ ಆದ್ಮಿ: 28
ಕಾಂಗ್ರೆಸ್: 8
ಇತರರು: 2












Click it and Unblock the Notifications