ಅಪಾಯಕಾರಿ ದೇಶ ನೆರೆಯಲ್ಲಿ ಮಗ್ಗುಲ ಮುಳ್ಳಾಗಿ ಇರುವುದೇ ದೌರ್ಭಾಗ್ಯ
Recommended Video

ಪುಲ್ವಾಮಾ ಘಟನೆಯ ನಂತರ ಪಾಕಿಸ್ತಾನದ ಜೊತೆ ಯಾವುದೇ ಮಾತುಕತೆ ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಮಾತುಕತೆಯ ಬಗ್ಗೆ ಹೇಳುವುದಾದರೆ, ಈ ಹಿಂದಿನ ಸರಕಾರಕ್ಕಿಂತ ಎನ್ಡಿಎ ಮೈತ್ರಿಕೂಟವೇ ತಮ್ಮ ಅಧಿಕಾರದಲ್ಲಿ ಪಾಕ್ ಜೊತೆ ಸ್ನೇಹಹಸ್ತ ಚಾಚಿದ್ದು ಜಾಸ್ತಿ.
ವಾಜಪೇಯಿ ಪ್ರಧಾನಿಯಾಗಿದ್ದಾಗ ಲಾಹೋರ್ ಗೆ ಬಸ್ ಹೊರಡಿಸಿ ಸ್ನೇಹದ ಇಂಗಿತ ವ್ಯಕ್ತಪಡಿಸಿದರು. ಪರ್ವೇಜ್ ಮುಷರಫ್ ಜತೆ ಆಗ್ರಾ ಒಪ್ಪಂದವೂ ಆಯಿತು. ಆದರೆ ಸ್ನೇಹ ಉಳಿಯಲಿಲ್ಲ. ನರೇಂದ್ರ ಮೋದಿ ಪ್ರಧಾನಿಯಾಗುತ್ತಿದ್ದಂತೆ ನವಾಜ್ ಷರೀಫ್ ರನ್ನು ತಮ್ಮ ಪ್ರಮಾಣ ವಚನಕ್ಕೇ ಆಮಂತ್ರಿಸುವ ಮೂಲಕ ಪಾಕ್ ಜತೆಗಿನ ಸ್ನೇಹದ ಬಯಕೆಯ ಆತುರ ತೋರಿದರು.
ತಮ್ಮ ಅನುಯಾಯಿಗಳು ಪಾಕ್ ದ್ವೇಷಿಗಳು ಅನ್ನೋದು ಗೊತ್ತಿದ್ದೂ ಮೋದಿ ಪಾಕಿಸ್ತಾನಕ್ಕೆ ಸರ್ಪ್ರೈಜ್ ವಿಸಿಟ್ ಕೊಟ್ಟು, ಷರೀಫರನ್ನು ಆಲಂಗಿಸಿಕೊಂಡರು. ಅವರ ತಾಯಿಗೆ ಉಡುಗೆಯ ಕೊಡುಗೆ ನೀಡಿದರು. ವಾಜಪೇಯಿ ಮತ್ತು ಮೋದಿಯವರ ಅಧಿಕಾರಾವಧಿಯ ನಡುವೆ ಹತ್ತು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ನೇತೃತ್ವದ ಸರ್ಕಾರದ ಪ್ರಧಾನಿ ಡಾ.ಮನಮೋಹನ ಸಿಂಗ್ ಒಮ್ಮೆಯೂ ಪಾಕಿಸ್ತಾನಕ್ಕೆ ಭೇಟಿ ಮಾಡಲಿಲ್ಲ ಎಂಬುದು ಗಮನಾರ್ಹ.

ಇದೇ ಸಂದರ್ಭದಲ್ಲಿ ಕಟ್ಟರ್ ಬಲಪಂಥೀಯ ಪಕ್ಷದ ಕಟ್ಟರ್ ಹಿಂದುತ್ವವಾದಿ ನಾಯಕ ಮೋದಿ ಪಾಕಿಸ್ತಾನದ ಜತೆ ಸ್ನೇಹಕ್ಕಾಗಿ ಪ್ರಯತ್ನಿಸಿದ್ದಂತೂ ಸುಳ್ಳಲ್ಲ. ಆದರೂ ಪಠಾಣ್ ಕೋಟ್ ವಾಯುನೆಲೆಯ ಮೇಲಿನ ಭೀಕರ ದಾಳಿ ನಡೆಯಿತು,
ಉರಿಯಲ್ಲಿ ನಮ್ಮ ಸೈನಿಕರನ್ನು ಕೊಲ್ಲಲಾಯಿತು, ಈಗ ಫುಲ್ವಾಮಾ ಘಟನೆ ನಡೆದಿದೆ. ಇಮ್ರಾನ್ ಖಾನ್ ಪುಲ್ವಾಮಾ ಘಟನೆಯ ನಂತರ ಮತ್ತೆ ಮಾತುಕತೆಯ ಪ್ರಸ್ತಾಪ ಇಡುತ್ತಿದ್ದಾರೆ. ಭಾರತ ಪಾಕಿಸ್ತಾನದೆಡೆಗೆ ಸ್ನೇಹಹಸ್ತ ಚಾಚಿದಾಗೆಲ್ಲ ಅಕ್ಷರಧಾಮ, ಪಾರ್ಲಿಮೆಂಟ್ ದಾಳಿಯಂಥ ಭೀಕರ ಘಟನೆಗಳು ನಡೆದಿವೆ.

ಪಾಕಿಸ್ತಾನದ ರಾಜಕೀಯ ನಾಯಕರುಗಳಿಗೆ ಸಂಬಂಧ ಸುಧಾರಿಸಿಕೊಳ್ಳುವ ಆಸಕ್ತಿ ಇದ್ದಂತೆ ಆಗಾಗ ಕಾಣಿಸಿದರೂ ಅಲ್ಲಿನ ಧಾರ್ಮಿಕ ಮೂಲಭೂತವಾದಿಗಳ ಕೈಸೆರೆಯಲ್ಲಿರುವ ಸೇನೆ, ಐಎಸ್ಐಗಳು ಅವಕಾಶ ಕೊಡುವುದಿಲ್ಲ. ಪಾಕಿಸ್ತಾನದ ದೊಡ್ಡ ಸಮಸ್ಯೆಯೇನೆಂದರೆ ಭಾರತದ ಹಾಗೆ ಅಲ್ಲಿ ಪ್ರಜಾಪ್ರಭುತ್ವಕ್ಕೆ ಅರ್ಥವಿಲ್ಲ.
ಅಲ್ಲಿನ ಪ್ರಧಾನಿಗಳು ಯಾರದ್ದೋ ಕೈಗೊಂಬೆಗಳು ಅಷ್ಟೆ. ಅವತ್ತಿನ ಷರೀಫು, ಇವತ್ತಿನ ಇಮ್ರಾನ್ ಎಲ್ಲರೂ ಅಷ್ಟೆ. ಇಂಥ ಅರಾಜಕ, ಮೂಲಭೂತವಾದಿ, ಅಪಾಯಕಾರಿ ದೇಶ ನಮ್ಮ ನೆರೆಯಲ್ಲಿ ಮಗ್ಗುಲ ಮುಳ್ಳಾಗಿ ಇರುವುದೇ ನಮ್ಮ ದೌರ್ಭಾಗ್ಯ.












Click it and Unblock the Notifications