ಮುಂಗಾರು ಅಂತ್ಯ ಸೂಚನೆ; ಈ ರಾಜ್ಯಗಳಲ್ಲಿ ಇನ್ನೂ ಕೆಲ ದಿನ ಮಳೆ
ನವದೆಹಲಿ, ಅಕ್ಟೋಬರ್ 06: ವಾಯವ್ಯ ಭಾರತದ ಕೆಲವು ರಾಜ್ಯಗಳಲ್ಲಿ ಬುಧವಾರದಿಂದ ನೈಋತ್ಯ ಮುಂಗಾರು ಅಂತ್ಯಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದ್ದು, ಇನ್ನೂ ಕೆಲವು ರಾಜ್ಯಗಳಲ್ಲಿ ಮಳೆ ಮುಂದುವರೆಯುವ ಸಾಧ್ಯತೆಯಿರುವುದಾಗಿ ತಿಳಿಸಿದೆ.
ಇದೇ ಅವಧಿಯಲ್ಲಿ ನೈಋತ್ಯ ಬಂಗಾಳ ಕೊಲ್ಲಿಯಲ್ಲಿನ ಚಂಡಮಾರುತ ಪರಿಚಲನೆಯು ದಕ್ಷಿಣದ ಕಡೆಗೆ ಇರಲಿದೆ. ಹೀಗಾಗಿ ಈಶಾನ್ಯ ಪ್ರದೇಶಗಳಲ್ಲಿ ಮಳೆ ಕಡಿಮೆಯಾಗಲಿದ್ದು, ದಕ್ಷಿಣದ ರಾಜ್ಯಗಳೆಡೆಗೆ ಮಾರುತಗಳು ಚಲಿಸಲಿವೆ ಎಂದು ಹೇಳಿದೆ.
ಈ ಹವಾಮಾನ ವ್ಯವಸ್ಥೆಗಳ ಪ್ರಭಾವದಡಿಯಲ್ಲಿ, ತಮಿಳುನಾಡು ಹಾಗೂ ಕೇರಳದಲ್ಲಿ ಅಕ್ಟೋಬರ್ 6ರಂದು ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದಲ್ಲಿ ಅಕ್ಟೋಬರ್ 5ರಿಂದ 7ರವರೆಗೂ ಅಧಿಕ ಮಳೆಯಾಗುವ ಸಾಧ್ಯತೆಯಿರುವುದಾಗಿ ತಿಳಿಸಿದೆ. ಕರ್ನಾಟಕದ ಉತ್ತರ ಒಳನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಬುಧವಾರ ಅಧಿಕ ಮಳೆಯಾಗುವುದಾಗಿ ಇಲಾಖೆ ಮುನ್ಸೂಚನೆ ನೀಡಿದೆ.

ಚಂಡಮಾರುತದ ಪರಿಚಲನೆಯು ಪಶ್ಚಿಮ ಬಂಗಾಳ ಹಾಗೂ ನೆರೆಹೊರೆಯಲ್ಲಿದ್ದು, ಸಮುದ್ರ ಮಟ್ಟಕ್ಕಿಂತ 4.5 ಕಿ.ಮೀವರೆಗೆ ವಿಸ್ತರಿಸಿದೆ. ಅದರ ಪ್ರಭಾವದಡಿಯಲ್ಲಿ ಅಸ್ಸಾಂ, ತ್ರಿಪುರಾದಲ್ಲಿ ಅಕ್ಟೋಬರ್ 6ರಂದು ವ್ಯಾಪಕ ಮಳೆಯಾಗಲಿದೆ ಎಂದು ತಿಳಿಸಿದೆ.
ಈಚೆಗಷ್ಟೆ ಎರಡು ಚಂಡಮಾರುತಗಳ ಪ್ರಭಾವದಿಂದ ಬಹುಪಾಲು ರಾಜ್ಯಗಳು ಭಾರೀ ಮಳೆಯನ್ನು ಪಡೆದಿದ್ದವು. ಗುಲಾಬ್ ಹಾಗೂ ಶಾಹೀನ್ ಚಂಡಮಾರುತದಿಂದಾಗಿ ಮುಂಗಾರು ಅಂತ್ಯದ ಅವಧಿಯಲ್ಲಿಯೂ ಮಳೆ ಪ್ರಭಾವ ಜೋರಾಗಿತ್ತು.
ಇದೀಗ ಮುಂಗಾರು ಅಂತ್ಯವಾಗುತ್ತಿದ್ದು, ಅಕ್ಟೋಬರ್ 9ರವರೆಗೂ ಕೆಲವು ರಾಜ್ಯಗಳಲ್ಲಿ ಮಳೆ ಮುಂದುವರೆಯುವುದಾಗಿ ತಿಳಿಸಿದೆ. ಕರ್ನಾಟಕದ ದಕ್ಷಿಣ ಒಳನಾಡು, ಕೇರಳ, ತಮಿಳುನಾಡು, ಪುದುಚೇರಿ, ಕಾರೈಕಲ್, ಮಧ್ಯ ಮಹಾರಾಷ್ಟ್ರ, ದಕ್ಷಿಣ ಕೊಂಕಣ, ಗೋವಾ, ದಕ್ಷಿಣ ಅಸ್ಸಾಂ, ಮೇಘಾಲಯ, ತ್ರಿಪುರ ಹಾಗೂ ದಕ್ಷಿಣ ಭಾಗದ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿರುವುದಾಗಿ ತಿಳಿಸಿದೆ. ಆಂಧ್ರದ ಕರಾವಳಿ, ರಾಯಲಸೀಮೆ ಹಾಗೂ ಕರ್ನಾಟಕ ಕರಾವಳಿಯಲ್ಲಿ ಅಧಿಕ ಮಳೆ ಮುನ್ಸೂಚನೆ ನೀಡಲಾಗಿದೆ.

ಉತ್ತರಾಖಂಡ, ಪಂಜಾಬ್, ಹರಿಯಾಣ, ಪೂರ್ವ ಉತ್ತರ ಪ್ರದೇಶ, ವಾಯವ್ಯ ರಾಜಸ್ಥಾನ, ದಕ್ಷಿಣ ಮಧ್ಯ ಪ್ರದೇಶ, ವಿದರ್ಭ, ಛತ್ತೀಸ್ಗಡ, ಬಿಹಾರ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ, ಸಿಕ್ಕಿಂ, ಅಂಡಮಾನ್ ನಿಕೋಬಾರ್, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾದಲ್ಲಿ ಗುಡುಗು ಮಿಂಚುಸಹಿತ ಮಳೆಯಾಗುವುದಾಗಿ ತಿಳಿಸಿದೆ.
ನೈಋತ್ಯ ಬಂಗಾಳಕೊಲ್ಲಿ ಹಾಗೂ ತಮಿಳುನಾಡು ಕರಾವಳಿ ತೀರಗಳಲ್ಲಿ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ರವಾನಿಸಲಾಗಿದೆ.
ಅಕ್ಟೋಬರ್ 6ರಿಂದ ಮುಂಗಾರು ಅಂತ್ಯ:
ಅಕ್ಟೋಬರ್ 6ರ ವೇಳೆಗೆ ದೇಶದ ವಾಯವ್ಯ ಭಾಗದಲ್ಲಿ ನೈಋತ್ಯ ಮುಂಗಾರು ಅಂತ್ಯವಾಗಲು ಹವಾಮಾನ ಪರಿಸ್ಥಿತಿ ಅನುಕೂಲಕರವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಅಕ್ಟೋಬರ್ 1ರಿಂದ ದೇಶದ ಹಲವು ಭಾಗಗಳಲ್ಲಿ ಅಧಿಕ ಮಳೆ ಆರಂಭವಾಗಲಿದೆ. ಅಕ್ಟೋಬರ್ 4ರವರೆಗೂ ಅಧಿಕ ಮಳೆ ದಾಖಲಾಗಲಿದೆ. ಅಕ್ಟೋಬರ್ 6ರ ವೇಳೆಗೆ ವಾಯವ್ಯ ರಾಜ್ಯಗಳಲ್ಲಿ ಮುಂಗಾರು ಅಂತ್ಯವಾಗುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ತಿಳಿಸಿದೆ.
ಮುಂಗಾರು ಅವಧಿಯಲ್ಲಿ ಸಾಮಾನ್ಯ ಪ್ರಮಾಣದ ಮಳೆ:
ಈ ಮುಂಗಾರು ಋತುವಿನಲ್ಲಿ, ಜೂನ್ 1ರಿಂದ ಸೆಪ್ಟೆಂಬರ್ 30ರವರೆಗೆ ಒಟ್ಟಾರೆಯಾಗಿ 87 ಸೆ.ಮೀ.ನಷ್ಟು ದೀರ್ಘಾವಧಿಯ ಸರಾಸರಿ ಮಳೆ ದಾಖಲಾಗಿದೆ. ನೈಋತ್ಯ ಮುಂಗಾರು ಅವಧಿಯಲ್ಲಿ ಸಾಮಾನ್ಯ ಮಟ್ಟದಲ್ಲಿ ಮಳೆ ದಾಖಲಾಗಿದೆ. ಮುಂಗಾರು ದೀರ್ಘಾವಧಿ ಮಳೆ (ದೀರ್ಘಾವಧಿ ಸರಾಸರಿ ಮಳೆ ಪ್ರಮಾಣದ 96- 106%) ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಮೃತ್ಯುಂಜಯ ಮಹೋಪಾತ್ರ ಮಾಹಿತಿ ಒದಗಿಸಿದ್ದಾರೆ.
ಅಕ್ಟೋಬರ್ನಿಂದ ಡಿಸೆಂಬರ್ವರೆಗೆ ದೇಶದ ದಕ್ಷಿಣ ರಾಜ್ಯಗಳಲ್ಲಿ ಈಶಾನ್ಯ ಮುಂಗಾರು ಅವಧಿಯಲ್ಲಿ ಕೂಡ ಸಾಮಾನ್ಯ ಮಳೆ ದಾಖಲಾಗಲಿದೆ ಎಂದು ತಿಳಿಸಿದ್ದಾರೆ.












Click it and Unblock the Notifications