ಮಣಿಪುರ ಚುನಾವಣೆ ನಡುವೆ ಹಿಂಸಾಚಾರ: ಇಬ್ಬರು ಸಾವು
ಇಂಫಾಲ್, ಮಾರ್ಚ್ 05: ಮಣಿಪುರದಲ್ಲಿ ಕೊನೆಯ ಹಂತದ ಮತದಾನ ನಡೆಯುತ್ತಿದ್ದು ಈ ನಡುವೆ ಮಣಿಪುರದ ಕೆಲವೆಡೆ ಹಿಂಸಾಚಾರ ಭುಗಿಲೆದ್ದಿದೆ. ಚುನಾವಣೆ ನಡುವೆ ನಡೆದ ಹಿಂಸಾಚಾರದಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಮೊದಲ ಘಟನೆ ತೌಬಲ್ ಜಿಲ್ಲೆಯಲ್ಲಿ ಮತ್ತು ಎರಡನೆಯದು ಸೇನಾಪತಿ ಜಿಲ್ಲೆಯಲ್ಲಿ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಬಿಜೆಪಿ ಬೆಂಬಲಿಗನನ್ನು ಕಾಂಗ್ರೆಸ್ ಕಾರ್ಯಕರ್ತನೊಬ್ಬ ಗುಂಡಿಕ್ಕಿ ಹತ್ಯೆಗೈದಿದ್ದು, ಉಚ್ಛಾಟಿತ ಕೇಸರಿ ಪಕ್ಷದ ನಾಯಕನ ನಿವಾಸದ ಹೊರಗೆ ಕಚ್ಚಾ ಬಾಂಬ್ ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. 25 ವರ್ಷದ ಎಲ್ ಅಮುಬಾ ಸಿಂಗ್ ಅವರು ಶನಿವಾರ ಮುಂಜಾನೆ ಬುಲೆಟ್ ಗಾಯಗಳಿಂದ ಇಲ್ಲಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಲ್ ಅಮುಬಾ ಸಿಂಗ್ ಇತರ ಬಿಜೆಪಿ ಕಾರ್ಯಕರ್ತರೊಂದಿಗೆ ಮುಂಜಾನೆ ತೌಬಲ್ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತನ ನಿವಾಸಕ್ಕೆ ಹೋಗಿದ್ದು, ಪ್ರಚಾರಕ್ಕೆ ನಿಗದಿತ ಸಮಯ ಮುಗಿದಿರುವುದರಿಂದ ಪ್ರಚಾರವನ್ನು ನಿಲ್ಲಿಸುವಂತೆ ಹೇಳಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. ಈ ವಿಷಯದ ಬಗ್ಗೆ ವಾಗ್ವಾದದ ಸಂದರ್ಭದಲ್ಲಿ, ಕಾಂಗ್ರೆಸ್ ಕಾರ್ಯಕರ್ತ ಎಲ್ ಅಮುಬಾ ಸಿಂಗ್ ಮೇಲೆ ಗುಂಡು ಹಾರಿಸಿದ್ದಾನೆ ಎಂದು ವರದಿಯಾಗಿದೆ.

ಇನ್ನೂ ಕಾಂಗ್ರೆಸ್ ಕಾರ್ಯಕರ್ತನ ಬಂಧನವಾಗಿಲ್ಲ
ಗುಂಡು ತಗುಲಿದ ಬಳಿಕ ಎಲ್ ಅಮುಬಾ ಸಿಂಗ್ರನ್ನು ಮೊದಲು ಜಿಲ್ಲೆಯ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ನಂತರ ಇಂಫಾಲ್ನಲ್ಲಿರುವ ಮತ್ತೊಂದು ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ ಎಂದು ಎಂದು ಅಧಿಕಾರಿ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಇನ್ನು ಎಲ್ ಅಮುಬಾ ಸಿಂಗ್ ಮೇಲೆ ಕಾಂಗ್ರೆಸ್ ಕಾರ್ಯಕರ್ತ ಗುಂಡು ಹಾರಿಸಿದ ಹಿನ್ನೆಲೆ ಆಕ್ರೋಶಿತ ಬಿಜೆಪಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಮಾಹಿತಿ ಲಭಿಸಿದೆ. ಈ ಸಂದರ್ಭದಲ್ಲಿ ಗುಂಡು ಹಾರಿಸಿದ ಕಾಂಗ್ರೆಸ್ ಕಾರ್ಯಕರ್ತ ಸೇರಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಆದರೆ ಈವರೆಗೂ ಈ ಕಾಂಗ್ರೆಸ್ ಕಾರ್ಯಕರ್ತನನ್ನು ಬಂಧನ ಮಾಡಿಲ್ಲ. ಹಾಗೆಯೇ ಈ ಬಗ್ಗೆ ಅಧಿಕ ಮಾಹಿತಿಯನ್ನು ಅಧಿಕಾರಿಗಳು ನೀಡಿಲ್ಲ.
ಇನ್ನು ಮೊದಲ ಘಟನೆ ತೌಬಲ್ ಜಿಲ್ಲೆಯಲ್ಲಿ ಮತ್ತು ಎರಡನೆಯದು ಸೇನಾಪತಿ ಜಿಲ್ಲೆಯಲ್ಲಿ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಸೇನಾಪತಿ ಜಿಲ್ಲೆಯಲ್ಲಿ ಘಟನೆ ನಡೆದಿದೆ ಎಂಬ ಬಗ್ಗೆ ಹಲವಾರು ಮಾಧ್ಯಮಗಳು ವರದಿ ಮಾಡಿದ್ದು, ಈ ಜಿಲ್ಲೆಯಲ್ಲೂ ಬಿಜೆಪಿ ಕಾರ್ಯಕರ್ತ ಸಾವನ್ನಪ್ಪಿರುವುದಾಗಿ ವರದಿ ಆಗಿದೆ.
ಮಣಿಪುರ ವಿಧಾನಸಭೆ ಚುನಾವಣೆ
ಫೆಬ್ರವರಿ 28 ರಂದು ಆರು ಜಿಲ್ಲೆಗಳ ಇತರ 38 ಕ್ಷೇತ್ರಗಳಲ್ಲಿ ನಡೆದ ಮೊದಲ ಹಂತದ ಮತದಾನವು ಹಿಂಸಾಚಾರದ ಘಟನೆಗಳನ್ನು ಕಂಡು ಬಂದಿದೆ. ಮೂರು ಜಿಲ್ಲೆಗಳ 12 ಮತದಾನ ಕೇಂದ್ರಗಳಲ್ಲಿ ಮರು ಮತದಾನಕ್ಕೆ ಆದೇಶಿಸಲಾಗಿದೆ. ಚುರಾಚಂದ್ಪುರ, ಕಾಂಗ್ಪೋಕ್ಪಿ ಮತ್ತು ಇಂಫಾಲ್ ಪೂರ್ವ ಈ ಜಿಲ್ಲೆಗಳಲ್ಲಿ ಸೇರಿದೆ. ಫೆಬ್ರವರಿ 28 ರಂದು ನಡೆದ ಮೊದಲ ಹಂತದ ಮತದಾನದ ವೇಳೆ ದುಷ್ಕರ್ಮಿಗಳು ಇವಿಎಂಗಳನ್ನು ಹಾನಿಗೊಳಿಸಿದ್ದು, ಈ ಕ್ಷೇತ್ರಗಳಲ್ಲಿ ಶನಿವಾರವೂ ಮತದಾನ ನಡೆಯುತ್ತಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.
ಮಣಿಪುರದಲ್ಲಿ ಎರಡನೇ ಮತ್ತು ಕೊನೆಯ ಹಂತದ ವಿಧಾನಸಭೆ ಚುನಾವಣೆಗೆ ಆರು ಜಿಲ್ಲೆಗಳ 22 ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ. ಒಟ್ಟು 8.38 ಲಕ್ಷ ಮತದಾರರು ತೌಬಲ್, ಚಾಂಡೆಲ್, ಉಖ್ರುಲ್, ಸೇನಾಪತಿ, ತಮೆಂಗ್ಲಾಂಗ್ ಮತ್ತು ಜಿರಿಬಾಮ್ ಜಿಲ್ಲೆಗಳಲ್ಲಿ ಮತದಾನ ಹಕ್ಕನ್ನು ಹೊಂದಿದ್ದಾರೆ ಎಂದು ಚುನಾವಣಾ ಅಧಿಕಾರಿ (ಸಿಇಒ) ರಾಜೇಶ್ ಅಗರ್ವಾಲ್ ತಿಳಿಸಿದ್ದಾರೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications