ಅಧಿಕಾರ ಇದ್ರೂ ನಿರುದ್ಯೋಗಿಯಂತಾದ ಅಡ್ವಾಣಿ
ನವದೆಹಲಿ, ಆ.26: ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ ಅವರನ್ನು ಪಕ್ಷದ ಸಂಸದೀಯ ಮಂಡಳಿಯಿಂದ ಹೊರಹಾಕಲಾಗಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಅಧಿಕಾರ ಸ್ವೀಕರಿಸಿದ ಮೇಲೆ ಬಿಜೆಪಿ ತೆಗೆದುಕೊಂಡ ಪ್ರಮುಖ ನಿರ್ಧಾರ ಇದಾಗಿದೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಮೂರು ಬಾರಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜೆಪಿ ನಡ್ಡಾ ಅವರನ್ನು ಪಕ್ಷದ ಉನ್ನತ ನಿರ್ಣಾಯಕ ಮಂಡಳಿಗೆ ಆಯ್ಕೆ ಮಾಡಲಾಗಿದೆ.
ಆದರೆ, ಎಲ್.ಕೆ ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ ಅವರ ಹಿರಿತನವನ್ನು ಮನ್ನಿಸಿ ಅವರಿಬ್ಬರಿಗೂ ಹೊಸ ಹುದ್ದೆ ಸೃಷ್ಟಿಸಲಾಗಿದೆ. ಪಕ್ಷದಲ್ಲಿ 'ಮಾರ್ಗದರ್ಶಕ ಮಂಡಳಿ' ಸ್ಥಾಪಿಸಲಾಗಿದ್ದು, ಈ ಇಬ್ಬರು ಹಿರಿಯರು ಅದರ ಸದಸ್ಯರಾಗಿ ಪಕ್ಷಕ್ಕೆ ಮಾರ್ಗದರ್ಶನ ಮಾಡಲಿದ್ದಾರಂತೆ. ಆದರೆ, ನಿರ್ಣಾಯಕ ಮಂಡಳಿಯೇ ಅಂತಿಮ ನಿರ್ಧಾರ ಕೈಗೊಳ್ಳುವುದು ಖಾತ್ರಿಯಾಗಿದೆ. ವಿಶೇಷವೆಂದರೆ, ಮಾರ್ಗದರ್ಶಕ ಮಂಡಳಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ, ರಾಜನಾಥ್ ಅವರ ಹೆಸರೂ ಸೇರಿಸಲಾಗಿದೆ.

ಅಡ್ವಾಣಿ ಅವರಿಗೆ ಸ್ಥಾನ ನೀಡದಿರಲು ಕಾರಣವೇನು? ಎಂಬ ಸರಳ ಪ್ರಶ್ನೆಗೆ ಬಿಜೆಪಿ ಸಿದ್ಧ ಉತ್ತರ ಇಟ್ಟುಕೊಂಡಿದೆ. 75 ವರ್ಷ ಮೀರಿದ ಮುಖಂಡರನ್ನು ಪಕ್ಷದ ಸಂಸದೀಯ ಮಂಡಳಿ, ಮೋದಿ ಕ್ಯಾಬಿನೆಟ್ ಗೆ ತೆಗೆದುಕೊಳ್ಳದಿರಲು ಈ ಮೊದಲೇ ನಿರ್ಧರಿಸಲಾಗಿತ್ತು ಎನ್ನಲಾಗಿದೆ.
ಆದರೆ, ಅಡ್ವಾಣಿ ಅಭಿಮಾನಿಗಳು ಮಾತ್ರ. ಪಕ್ಷದ ನಿರ್ಧಾರದಿಂದ ಬೇಜಾರಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ಅವರನ್ನು ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಯಿತು. ಅಡ್ವಾಣಿ ಅವರು ತಮ್ಮ ಇಷ್ಟದ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ನೀಡಲಿಲ್ಲ. ಮೋದಿ ಕ್ಯಾಬಿನೆಟ್ ನಲ್ಲಿ ಸ್ಥಾನವೂ ಸಿಗಲಿಲ್ಲ. ಲೋಕಸಭಾ ಸ್ಪೀಕರ್, ಪಕ್ಷದ ಅಧ್ಯಕ್ಷ, ಎನ್ ಡಿಎ ಮುಖ್ಯಸ್ಥ ಸ್ಥಾನಮಾನವೂ ಇಲ್ಲ ಈಗ ಸಂಸದೀಯ ಮಂಡಳಿಯಿಂದಲೂ ಅಡ್ವಾಣಿ ಅವರಿಗೆ ಕೊಕ್ ನೀಡಲಾಗಿದೆ.
12 ಜನ ಸದಸ್ಯರ ಸಂಸದೀಯ ಮಂಡಳಿಯ ಸದಸ್ಯರು:
* ಅಮಿತ್ ಶಾ
* ನರೇಂದ್ರ ಮೋದಿ
* ರಾಜನಾಥ್ ಸಿಂಗ್
* ಅರುಣ್ ಜೇಟ್ಲಿ
* ಸುಷ್ಮಾ ಸ್ವರಾಜ್
* ವೆಂಕಯ್ಯ ನಾಯ್ಡು
* ನಿತಿನ್ ಗಡ್ಕರಿ
* ಅನಂತಕುಮಾರ್
* ತಾವರ್ ಚಂದ್ ಗೆಹ್ಲೋಟ್
* ಶಿವರಾಜ್ ಸಿಂಗ್ ಚೌಹಾಣ್
* ಜೆಪಿ ನಡ್ಡಾ
* ರಾಮಲಾಲ್
ಬಿಜೆಪಿಯ ಮಾರ್ಗದರ್ಶಕ ಮಂಡಳಿ ಸ್ಥಾಪನೆ ಬಗ್ಗೆ ತಕ್ಷಣವೇ ಪ್ರತಿಕ್ರಿಯಿಸಿರುವ ಕಾಂಗ್ರೆಸ, ' ಇದು ಮಾರ್ಗದರ್ಶಕ ಮಂಡಳಿ ಅಲ್ಲ ಮೂಕ ದರ್ಶಕ ಮಂಡಳಿ ಎಂದು ಹೇಳಿದೆ.












Click it and Unblock the Notifications