Delhi Election: ದೆಹಲಿ ಸ್ಲಂ ರಾಜಕೀಯ! ಬಿಜೆಪಿಗೆ ಮತಹಾಕುವುದು ಆತ್ಮಹತ್ಯೆ ಮಾಡಿಕೊಂಡಂತೆ ಎಂದ ಕೇಜ್ರಿವಾಲ್
ದೆಹಲಿ ವಿಧಾನಸಭಾ ಚುನಾವಣೆ ಅಖಾಡ ರಂಗೇರಿದ್ದು, ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷಗಳ ನಡುವೆ ದಿನಕ್ಕೊಂದು ವಿಚಾರಕ್ಕೆ ಕಿತ್ತಾಟ ನಡೆಯುತ್ತಲೇ ಇದೆ. ಆಮ್ ಆದ್ಮಿ ಪಕ್ಷ ಪ್ರತಿ ದಿನ ಬಿಜೆಪಿ ಮೇಲೆ ಒಂದೊಂದು ಆರೋಪ ಮಾಡುತ್ತಲೇ ಇದ್ದು, ಬಿಜೆಪಿ ಕೂಡ ಅದಕ್ಕೆ ಉತ್ತರ ಕೊಡುತ್ತಲೇ ಬಂದಿದೆ. ಇದೀಗ ದೆಹಲಿಯಲ್ಲಿ ಸ್ಲಂ ರಾಜಕೀಯ ಕೂಡ ಶುರುವಾಗಿದೆ.
ಬಿಜೆಪಿ ಮತ್ತು ಎಎಪಿ ನಡುವೆ ಈಗ ದೆಹಲಿ ಸ್ಲಂ ವಿಚಾರದಲ್ಲಿ ಜಗಳ ಆರಂಭವಾಗಿದೆ. ಭಾನುವಾರ ತಮ್ಮ ಚುನಾವಣಾ ಭಾಷಣದಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್ ಬಿಜೆಪಿಯವರು ಸ್ಲಂ ನಿವಾಸಿಗಳನ್ನು ಹುಳಗಳು ಎಂದು ಪರಿಗಣಿಸಿದ್ದಾರೆ. ತಮ್ಮ ಸ್ನೇಹಿತನಿಗೆ ಇಲ್ಲಿನ ಭೂಮಿಯನ್ನು ಕೊಡಲು ಇಲ್ಲಿನ ಜನರನ್ನು ಹೊರಹಾಕಲು ಯೋಜನೆ ಹಾಕಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಶನಿವಾರ ಸಂಜೆ ಜುಗ್ಗಿ ಬಸ್ತಿ ಪ್ರಧಾನ ಸಮ್ಮೇಳನದಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ "ಕಲುಷಿತ ನೀರು ಸರಬರಾಜು, ಕಸದ ರಾಶಿ, ಶೌಚಾಲಯದಂತಹ ಮೂಲ ಸೌಕರ್ಯಗಳ ಕೊರತೆಯಲ್ಲೇ ಕೊಳಗೇರಿ ನಿವಾಸಿಗಳು ಬದುಕುವಂತೆ ಮಾಡುವ ಮೂಲಕ ಎಎಪಿ ಇಲ್ಲಿನ ಜನರಿಗೆ ದ್ರೋಹ ಮಾಡಿದ್ದಾರೆ" ಎಂದು ಆರೋಪಿಸಿದ ಬಳಿಕ ಈ ವಾಗ್ವಾದ ಶುರುವಾಗಿದೆ.
ಭಾನುವಾರ ಬೆಳಿಗ್ಗೆ ಶಕುರ್ ಬಸ್ತಿಯಲ್ಲಿರುವ ಕೊಳಗೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೇಜ್ರಿವಾಲ್, ಒಂದು ವೇಳೆ ಬಿಜೆಪಿಗೆ ಮತ ಹಾಕಿದರೆ ಕೊಳಗೇರಿ ನಿವಾಸಿಗಳು ತಮ್ಮ ಆತ್ಮಹತ್ಯೆ ಪತ್ರಕ್ಕೆ ಸಹಿ ಹಾಕಿದಂತೆ. 2024ರ ಸೆಪ್ಟಂಬರ್ ನಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಭೂ ಅಭಿವೃದ್ಧಿಗಾಗಿ ಟೆಂಡರ್ ಕರೆದಿದ್ದು ಕೊಳಗೇರಿಯನ್ನು ಕೆಡವಲು ಯೋಜನೆ ಹೊಂದಿದ್ದಾರೆ ಎಂದು ಆರೋಪಿಸಿದರು.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಏನಾದರೂ ಅಧಿಕಾರಕ್ಕೆ ಬಂದರೆ, ದೆಹಲಿಯಲ್ಲಿರುವ ಎಲ್ಲಾ ಕೊಳಗೇರಿಗಳನ್ನು ಒಂದು ವರ್ಷದೊಳಗೆ ಕೆರವಲಾಗುವುದು ಎಂದು ಅವರು ಹೇಳಿದ್ದಾರೆ. ಅವರಿಗೆ ಮೊದಲು ನಿಮ್ಮ ಮತ ಬೇಕು, ಬಳಿಕ ನಿಮ್ಮ ಭೂಮಿ ಬೇಕಾಗಿದೆ" ಎಂದು ಹೇಳಿದರು.
ಬಿಜೆಪಿ ಕೊಳಗೇರಿಗಳಲ್ಲಿ ಮನೆಗಳನ್ನು ನೀಡುವುದಾಗಿ ಭರವಸೆ ನೀಡಿದೆ, ಅವರು ಒಂದೇ ಸ್ಥಳದಲ್ಲಿ ಮನೆಗಳನ್ನು ನೀಡುವುದಾಗಿ ಹೇಳಿದ್ದಾರೆ. ಮನೆಗಳು ನಿಮಗಾಗಿ ಎಂದು ಹೇಳುತ್ತಿಲ್ಲ, ಅವರ ಸ್ನೇಹಿತನಿಗೆ ಭೂಮಿಯನ್ನು ನೀಡಲು ಈ ರೀತಿ ಭರವಸೆ ನೀಡಿದ್ದಾರೆ ಎಂದರು.
ಕೇಜ್ರಿವಾಲ್ಗೆ ಬಿಜೆಪಿ ತಿರುಗೇಟು
ಕೇಜ್ರಿವಾಲ್ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದ್ದು, ಅವರನ್ನು ಹಾಸ್ಯನಟ ಎಂದು ಕರೆದಿದೆ. ಬಿಜೆಪಿ ನಾಯಕ ಹರ್ದೀಪ್ ಪುರಿ ಅರವಿಂದ್ ಕೇಜ್ರಿವಾಲ್ ಅವರಿಗೆ ವರ್ಷದ ಹಾಸ್ಯನಟ ಪ್ರಶಸ್ತಿ ನೀಡಬೇಕು ಎಂದಿದ್ದಾರೆ. ಇತ್ತೀಚೆಗೆ ಅವರು ತಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ ಎಂದರು.












Click it and Unblock the Notifications