ಉತ್ತರ ಪ್ರದೇಶ ಕಸ್ ಗಂಜ್ ನಲ್ಲಿ ಹಿಂಸಾಚಾರ, ಒಂಬತ್ತು ಮಂದಿ ಬಂಧನ
ಉತ್ತರಪ್ರದೇಶದ ಕಸ್ ಗಂಜ್ ಜಿಲ್ಲೆಯಲ್ಲಿ ಶನಿವಾರ ಹಿಂಸಾಚಾರ ನಡೆದಿದೆ. ಎರಡು ಗುಂಪುಗಳ ಮಧ್ಯದ ಘರ್ಷಣೆಯಲ್ಲಿ ಶುಕ್ರವಾರ ಗುಂಡು ಹಾರಿಸಿ, ಚಂದನ್ ಗುಪ್ತಾ ಎಂಬಾತನ ಹತ್ಯೆ ಆಗಿತ್ತು. ಆತನ ಅಂತ್ಯಸಂಸ್ಕಾರ ಮುಗಿಸಿ, ಹಿಂತಿರುಗುವಾಗ ಐದು ಮಳಿಗೆಗಳಿಗೆ ಬೆಂಕಿ ಇಡಲಾಗಿತ್ತು.
ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಸ್ಥಳಕ್ಕೆ ಧಾವಿಸಿದರೂ ಅಷ್ಟರಲ್ಲಾಗಲೇ ಹಲವು ಆಸ್ತಿಗಳಿಗೆ ಹಾನಿಯಾಗಿತ್ತು. ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ಟ್ವೀಟ್ ಮಾಡಿದ್ದಾರೆ. ವಿಶೇಷ ತಂಡವೊಂದನ್ನು ರಚಿಸಿ, ತಪ್ಪಿತಸ್ಥರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇಪ್ಪತ್ತೆರಡು ವರ್ಷದ ಚಂದನ್ ಗುಪ್ತಾ ಎದೆಗೆ ಗುಂಡು ತಗುಲಿ ಮೃತಪಟ್ಟಿದ್ದರು. ಪಕ್ಕದ ಅಲಿಘಡ ಜಿಲ್ಲೆಯಲ್ಲಿ ಕಾಲಿಗೆ ಗುಂಡು ತಗುಲಿದ್ದರಿಂದ ನೌಷಾದ್ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ಗುಂಪುಗಳು ಕಸ್ ಗಂಜ್ ಪಟ್ಟಣದಲ್ಲಿ ಪರಸ್ಪರರ ಮೇಲೆ ಕಲ್ಲು ತೂರಾಟ ನಡೆಸಿದ್ದವು.

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಟಿಟ್ಟರ್ ಖಾತೆಯಲ್ಲಿ, ಶಾಂತಿ- ಸೌಹಾರ್ದ ಕಾಪಾಡುವಂತೆ ಹೇಳಿದ್ದಾರೆ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.












Click it and Unblock the Notifications