ತೆಲಂಗಾಣ ಕಾಂಗ್ರೆಸ್ಗೆ ಹಣ ನೀಡಲು 'ಚುನಾವಣಾ ತೆರಿಗೆ' ವಿಧಿಸುತ್ತಿರುವ ಕರ್ನಾಟಕ ಸರ್ಕಾರ: ಬಿಆರ್ಎಸ್ ನಾಯಕ ಕೆಟಿಆರ್ ಗಂಭೀರ ಆರೋಪ
ಬೆಂಗಳೂರು, ಸೆಪ್ಟೆಂಬರ್ 30: ತೆಲಂಗಾಣ ಕಾಂಗ್ರೆಸ್ಗೆ ಹಣ ನೀಡಲು ಕರ್ನಾಟಕ ಸರ್ಕಾರ 'ಚುನಾವಣಾ ತೆರಿಗೆ' ವಿಧಿಸುತ್ತಿದೆ ಎಂಬ ಗಂಭೀರ ಆರೋಪವನ್ನು ಬಿಆರ್ಎಸ್ ನಾಯಕ ಕೆಟಿ ರಾಮರಾವ್ ಮಾಡಿದ್ದಾರೆ.
ಬೆಂಗಳೂರಿನ ಬಿಲ್ಡರ್ಗಳ ಮೇಲೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು 'ಚುನಾವಣಾ ತೆರಿಗೆ' ವಿಧಿಸುತ್ತಿದೆ. ಇದು ಕಾಂಗ್ರೆಸ್ ಸರ್ಕಾರದ ತಂತ್ರವಾಗಿದೆ. ಈ ತೆರಿಗೆಯಿಂದ ಪಡೆದ ಹಣವನ್ನು ತೆಲಂಗಾಣ ಕಾಂಗ್ರೆಸ್ಗೆ ನೀಡಲು ಕರ್ನಾಟಕ ಸರ್ಕಾರ ಮುಂದಾಗಿದೆ ಎಂದು ಕೆಟಿಆರ್ ಆರೋಪಿಸಿದ್ದಾರೆ.

ಈ ಕುರಿತು 'X' ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿರುವ ಅವರು, 'ಇದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಕರ್ನಾಟಕದಲ್ಲಿ ಹೊಸದಾಗಿ ಚುನಾಯಿತವಾಗಿರುವ ಕಾಂಗ್ರೆಸ್ ಸರ್ಕಾರವು ತೆಲಂಗಾಣ ಕಾಂಗ್ರೆಸ್ಗೆ ಹಣ ನೀಡಲು ಮುಂದಾಗಿದೆ. ಈ ಹಣವನ್ನು ತೆಲಂಗಾಣ ವಿಧಾನಸಭೆ ಚುನಾವಣೆಗೆ ಬಳಸಿಕೊಳ್ಳುವುದು ಕಾಂಗ್ರೆಸ್ ತಂತ್ರವಾಗಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.
'ಬೆಂಗಳೂರಿನ ಬಿಲ್ಡರ್ಗಳಿಗೆ ಪ್ರತಿ ಚದರ ಅಡಿಗೆ ₹ 500 ರಷ್ಟು ಚುನಾವಣಾ ತೆರಿಗೆಯನ್ನು ವಿಧಿಸಲು ಕರ್ನಾಟಕ ಸರ್ಕಾರ ಪ್ರಾರಂಭಿಸಿದೆ' ಎಂದು ಪೋಸ್ಟ್ ಮಾಡಿದ್ದಾರೆ.
'ಹಳೆಯ ಚಾಳಿಗಳು ಸತ್ತುಹೋಗುವುದು ಕಷ್ಟ. ಗ್ರ್ಯಾಂಡ್ ಓಲ್ಡ್ ಪಾರ್ಟಿಯು ಹಗರಣಗಳ ಶ್ರೀಮಂತ ಪರಂಪರೆಯನ್ನೇ ಹೊಂದಿದೆ. ಅದಕ್ಕಾಗಿಯೇ ಅದನ್ನು ಸ್ಕ್ಯಾಮ್ಗ್ರೆಸ್ ಎಂಬುದಾಗಿ ಮರುನಾಮಕರಣ ಮಾಡಲಾಗಿದೆ' ಎಂದು ಅವರು ಟೀಕಿಸಿದ್ದಾರೆ.
'ಅವರು ಎಷ್ಟೇ ಹಣವನ್ನು ಸುರಿದರೂ ತೆಲಂಗಾಣದ ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. ತೆಲಂಗಾಣದಲ್ಲಿ ಜನರು ಸ್ಕ್ಯಾಮ್ಗ್ರೆಸ್ಗೆ ಮನ್ನಣೆ ನೀಡುವುದಿಲ್ಲ' ಎಂದು ಅವರು ಹೇಳಿದ್ದಾರೆ.
ತೆಲಂಗಾಣ ರಚನೆಯ ಹೇಳಿಕೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರನ್ನೂ ಕೆಟಿ ರಾಮರಾವ್ ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಧಾನಿ ರಾಜ್ಯದ ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.
'ಪ್ರಧಾನಿ ನರೇಂದ್ರ ಮೋದಿ ಅವರು ತೆಲಂಗಾಣ ಜನತೆಗೆ ಉತ್ತರ ನೀಡಬೇಕು. ಭಾಷಣದ ಮೂಲಕ ಜನರ ಕ್ಷಮೆಯಾಚಿಸಬೇಕು' ಎಂದು ಕೆಟಿಆರ್ ಒತ್ತಾಯಿಸಿದ್ದಾರೆ.
ಈ ವರ್ಷ ಕೊನೆಯಲ್ಲಿ ತೆಲಂಗಾಣ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಅಕ್ಟೋಬರ್ 1 ರಂದು ಮಹಬೂಬ್ನಗರದಲ್ಲಿ ಬಿಜೆಪಿ ಆಯೋಜಿಸುವ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ.
ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಆರ್ಎಸ್ ಮತ್ತು ಕಾಂಗ್ರೆಸ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಸಹ ಪೈಪೋಟಿ ನೀಡಬಹುದು ಎಂದು ಅಂದಾಜಿಸಲಾಗಿದೆ.
ತೆಲಂಗಾಣ ಚುನಾವಣೆಯು ಬಿಜೆಪಿ ನೇತೃತ್ವದ ಎನ್ಡಿಎಗೆ ನಿರ್ಣಾಯಕವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. 2024 ರ ಲೋಕಸಭೆ ಚುನಾವಣೆಗೆ ಮೊದಲು ಇದು ಎಲ್ಲ ಪಕ್ಷಗಳಿಗೂ ಅಗ್ನಿಪರೀಕ್ಷೆಯಾಗಿ ಹೊರಹೊಮ್ಮಿದೆ. ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ಗಢ ವಿಧಾನಸಭೆ ಚುನಾವಣೆಗಳು ಈ ವರ್ಷದ ಕೊನೆಯಲ್ಲಿ ನಡೆಯಲಿದೆ.












Click it and Unblock the Notifications