ಪತ್ರಕರ್ತ ಶುಜಾತ್ ಬುಖಾರಿ ಯಾರು? ಅವರನ್ನು ಕೊಂದಿದ್ದೇಕೆ?
ಶ್ರೀನಗರ, ಜೂನ್ 15: ಜಮ್ಮು-ಕಾಶ್ಮೀರದ ಶ್ರಿನಗರದಲ್ಲಿ ನಿನ್ನೆ(ಜೂನ್ 14) ನಡೆದ ಪತ್ರಕರ್ತ ಶುಜಾತ್ ಬುಖಾರಿ(50) ಅವರ ಹತ್ಯೆ ಪ್ರಕರಣ ದೇಶದಾದ್ಯಂತ ಆಘಾತ ಮೂಡಿಸಿದೆ. ರಂಜಾನ್ ಹಬ್ಬಕ್ಕೂ ಮುನ್ನ ಇಂಥ ಘಟನೆ ನಡೆದಿರುವುದು ಕಾಶ್ಮಿರದ ಜನರನ್ನು ಆತಂಕದಲ್ಲಿ ಮುಳುಗಿಸಿದೆ.
18 ವರ್ಷಗಳಿಂದಲೂ ಪೊಲೀಸ್ ರಕ್ಷಣೆಯಲ್ಲೇ ಇದ್ದ ಬುಖಾರಿ ಅವರನ್ನು ಕೊಂದಿದ್ದು ಯಾರು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಸಿಸಿಟಿವಿ ಕ್ಯಾಮೆರಾ ಫೂಟೇಜ್ ಪ್ರಕಾರ ಅವರನ್ನು ಮೂವರು ದುಷ್ಕರ್ಮಿಗಳು ಸೇರಿ ಗುಂಡಿಕ್ಕಿ ಕೊಂದಿದ್ದಾರೆ. ಅವರ ಕಚೇರಿಯ ಎದುರಲ್ಲೇ ಈ ಘಟನೆ ನಡೆದಿದ್ದು, ಭದ್ರತಾ ಲೋಪವನ್ನು ಎತ್ತಿಹಿಡಿದಿದೆ.
ಅಷ್ಟಕ್ಕೂ ಈ ಶುಜಾತ್ ಬುಖಕಾರಿ ಯಾರು? ಅವರನ್ನು ಕೊಲ್ಲುವ ಮಟ್ಟಿನ ದ್ವೇಷವಿದ್ದುದು ಯಾರಿಗೆ? ಕೊಲ್ಲುವಂಥ ತಪ್ಪು ಕೆಲಸವನ್ನು ಶುಜಾತ್ ಮಾಡಿದ್ದರೆ? ಕಾಶ್ಮೀರದಲ್ಲಿ ಶಾಮತಿ ನೆಲೆಗೊಳ್ಳಬೇಕು ಎಂಬ ಅವರ ಇರಾದೆ ಮತ್ತು ಅದರೆಡೆಗಿನ ಅವರ ಹೋರಾಟವೇ ಅವರಿಗಿಂದು ಮರಣದ ಉಡುಗೊರೆ ನೀಡಿತೆ?

ಯಾರು ಶುಜಾತ್ ಬುಖಾರಿ?
ಕಾಶ್ಮೀರದ ಪ್ರಸಿದ್ಧ ದಿನಪತ್ರಿಕೆಗಳಲ್ಲೊಂದಾದ 'ರೈಸಿಂಗ್ ಕಾಶ್ಮೀರ' ಸಂಪಾದಕ ಶುಜಾತ್ ಬುಖಾರಿ. ಕಾಶ್ಮೀರದ ಮೇಲೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಕಾಶ್ಮೀರದಲ್ಲಿ ಶಾಂತಿ ನೆಲೆಸಬೇಕು ಎಂಬ ಕಾರಣಕ್ಕಾಗಿಯೇ ಅವರು ಸಾಕಷ್ಟು ಹೋರಾಟ ನಡೆಸಿದ್ದರು. 50 ವರ್ಷದ ಬುಖಾರಿ ಹಲವು ವರ್ಷಗಳ ಕಾಲ 'ದಿ ಹಿಂದು' ಪತ್ರಿಕೆಯಲ್ಲಿಯೂ ಕೆಲಸ ಮಾಡಿದ್ದರು. ಅಷ್ಟೇ ಅಲ್ಲ, ಪಾಕಿಸ್ತಾನ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧದ ಕುರಿತು ಸಾಕಷ್ಟು ಜ್ಞಾನ ಹೊಂದಿದ್ದ ಅವರು ಟ್ರ್ಯಾಕ್ ಟು ಪ್ರೊಸೆಸ್ ನ ಭಾಗವಾಗಿದ್ದರು. ಕಳೆದ 15 ವರ್ಷಗಳಿಂದ ರೈಸಿಂಗ್ ಕಾಶ್ಮೀರದ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವರು ಕಾಶ್ಮೀರಿ ಮತ್ತು ಉರ್ದು ಭಾಷೆಯಲ್ಲೂ ಬರೆಯುತ್ತಿದ್ದರು. ಕಾಶ್ಮೀರದ ಅತ್ಯಂತ ದೊಡ್ಡ ಸಾಂಸ್ಕೃತಿಕ ಸಂಸ್ಥೆಯಾದ ಅಡ್ಬಿ ಮರ್ಕಾಜ್ ಕಮ್ರಾಜ್ ನ ಅಧ್ಯಕ್ಷರೂ ಆಗಿದ್ದರು.

ಹತ್ಯೆ ಮಾಡುವಂಥ ಯಾವ ತಪ್ಪು ಮಾಡಿದ್ದರು ಬುಖಾರಿ?
ಕಾಶ್ಮೀರದಲ್ಲಿ ಶಾಂತಿ ನೆಲೆಸಬೇಕು ಎಂದು ಬಯಸಿದ್ದೇ ಅವರ ಹತ್ಯೆಗೆ ಕಾರಣವಾಯಿತೇ? ಕಳೆದ 18 ವರ್ಷಗಳ ಹಿಂದೆಯೇ ಅವರ ಮೇಲೆ ಹತ್ಯೆಯ ಪ್ರಯತ್ನಗಳು ನಡೆದಿತ್ತು. ಆ ಘಟನೆಯ ನಂತರ ಅವರಿಗೆ ವಿಶೇಷ ಭದ್ರತೆಯನ್ನೂ ನೀಡಲಾಗಿತ್ತು. ಆದರೆ ಭದ್ರತೆಯ ಹೊರತಾಗಿಯೂ, ಈದ್ ಸಂಭ್ರಮದ ನಡುವಲ್ಲಿ ಇಂಥ ರಕ್ತದೋಕುಳಿಗೆ ಕಾಶ್ಮೀರ ಸಾಕ್ಷಿಯಾಗಿದೆ. ಕಾಶ್ಮೀರದ ಜನರಿಗೆ ನ್ಯಾಯ ದೊರಕಬೇಕು, ಶಾಂತಿ ನೆಲಸಬೇಕು ಎಂಬ ಅವರ ಮನಸ್ಥಿತಿಯೇ ಕೆಲವರಲ್ಲಿ ಅವರ ಬಗ್ಗೆ ದ್ವೇಷ ಹುಟ್ಟಿಸಿತ್ತು. ಅವರ ಹತ್ಯೆಗೆ ಇದೇ ಕಾರಣವಾಗಿದ್ದಿರಬಹುದು ಎಂದು ಅಂದಾಜಿಸಲಾಗಿದೆ.

ಹತ್ಯೆ ಮಾಡಿದ್ದು ಯಾರು?
ಬುಖಾರಿ ಹತ್ಯೆಯನ್ನು ಮಾಡಿದ್ದು ಯಾರು ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಅವರ ಕಚೇರಿಯ ಹೊರಗಡೆಯೇ ಹತ್ಯೆ ನಡೆದಿದ್ದು, ಬಳಿಯಿದ್ದ ಸಿಸಿಟಿವಿ ಫೂಟೇಜ್ ನಲ್ಲಿ ಮೂವರು ದುಷ್ಕರ್ಮಿಗಳು ಬುಖಾರಿ ಮೇಲೆ ಗುಂದಿನ ದಾಳಿ ನಡೆಸಿದ್ದು ತಿಳಿದುಬಂದಿದೆ. ಆದರೆ ಇವರ ಕುರಿತು ಮಾಹಿತಿ ಲಭ್ಯವಾಗಿಲ್ಲ. ಶ್ರೀನಗರ ಪೊಲಿಸರು ಸಗ್ಥಳೀಯರ ಸಹಾಯದ ಮೂಲಕ ಅಪರಾಧಿಗಳ ಪತ್ತೆಗೆ ಬಲೆಬೀಸಿದ್ದಾರೆ.

ಕಂಬನಿ ಮಿಡಿದ ಗಣ್ಯರು
ಶುಜಾತ್ ಹತ್ಯೆಯನ್ನು ದೇಶದಾದ್ಯಂತ ಗಣ್ಯರು ಖಂಡಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಅವರ ಹತ್ಯೆಯ ಕುರಿತು ಆಕ್ರೋಶ ವ್ಯಕ್ತವಾಗಿದೆ. ಜಮ್ಮು ಕಾಶ್ಮಿರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಗೃಹಸಚಿವ ರಾಜನಾಥ್ ಸಿಂಗ್, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ನೂರಾರು ಗಣ್ಯರು ಬುಖಾರಿ ಅವರ ಹತ್ಯೆಯನ್ನು ಖಂಡಿಸಿ, ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಜೊತೆಗೆ ಬುಖಾರಿ ಅವರ ಧೈರ್ಯ ಮತ್ತು ಕಾಶ್ಮೀರದ ಬಗೆಗಿನ ಪ್ರೀತಿಯನ್ನು ಸ್ಮರಿಸಿದ್ದಾರೆ.












Click it and Unblock the Notifications