PM Modi on Manipur: ಭಾರತವು ನಿಮ್ಮ ಜೊತೆಗಿದೆ- ಮಣಿಪುರದ ಜನತೆಗೆ ಪ್ರಧಾನಿ ಮೋದಿ ಭರವಸೆ
ನವದೆಹಲಿ, ಆಗಸ್ಟ್ 10: ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಮಾತನಾಡಿದ ಪ್ರಧಾನಿ ಮೋದಿ, 'ಭಾರತವು ಮಣಿಪುರದ ಜೊತೆಗಿದೆ' ಎಂದು ಭರವಸೆ ನೀಡಿದರು.
ಮಣಿಪುರದಲ್ಲಿ ಗಲಭೆಗೆ ಕಾರಣರಾದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿದೆ. ಇದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿವೆ ಎಂದು ಅವರು ಹೇಳಿದರು.

ಮುಂಬರುವ ಸಮಯದಲ್ಲಿ ಮಣಿಪುರದಲ್ಲಿ ಶಾಂತಿಯನ್ನು ಮರುಸ್ಥಾಪಿಸಲಾಗುವುದು ಎಂದು ನಾನು ಜನರಿಗೆ ಭರವಸೆ ನೀಡಲು ಬಯಸುತ್ತೇನೆ ಎಂದು ಪ್ರಧಾನಿ ಭರವಸೆ ನೀಡಿದರು.
ಮಣಿಪುರದ ಮಹಿಳೆಯರು ಮತ್ತು ಹೆಣ್ಣುಮಕ್ಕಳೊಂದಿಗೆ ಭಾರತವು ನಿಲ್ಲಲಿದೆ ಎಂದು ಅವರು ತಿಳಿಸಿದರು.
'ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಮಣಿಪುರದ ಪರಿಸ್ಥಿತಿಯ ಬಗ್ಗೆ ಈಗಾಗಲೇ ವಿವರಿಸಿದ್ದಾರೆ' ಎಂದು ಪ್ರಧಾನಿ ಮೋದಿ ತಿಳಿಸಿದರು.

ಈ ಸದನದಲ್ಲಿ ಭಾರತ ಮಾತೆಯ ಬಗ್ಗೆ ಏನೇ ಹೇಳಿದರೂ ಅದು ದೇಶದ ಜನರ ಭಾವನೆಗಳಿಗೆ ಧಕ್ಕೆ ತಂದಿದೆ. ಕೆಲವರು 'ಮಾ ಭಾರತಿ' ಸಾವಿನ ಬಗ್ಗೆ ಮಾತನಾಡಿದ್ದಾರೆ, ಇದಕ್ಕಿಂತ ದುರದೃಷ್ಟಕರ ಏನಿದೆ ಎಂದು ಮೋದಿ ಹೇಳಿದರು.
ಕಾಂಗ್ರೆಸ್ನ ಸಮಸ್ಯೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಅವರು ಪದೇ ಪದೇ ವಿಫಲ ಉತ್ಪನ್ನವನ್ನು ಹೊರತರುತ್ತಾರೆ. ಪ್ರತಿ ಬಾರಿಯೂ ಅವರ ಉಡಾವಣೆ ವಿಫಲವಾಗುತ್ತದೆ ಎಂದು ಮೋದಿ ತಿಳಿಸಿದರು.
ಈ ಅವಿಶ್ವಾಸ ನಿರ್ಣಯ ಮಂಡನೆ ಮೂಲಕ ಮೋದಿ ಸರ್ಕಾರ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವುದನ್ನು ನೀವು ದೃಢಪಡಿಸಿದ್ದೀರಿ ಎಂದು ಹೇಳಿದರು.

'ನನ್ನ ಮೂರನೇ ಅವಧಿಯಲ್ಲಿ ಭಾರತವು ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ನಾನು ಭರವಸೆ ನೀಡುತ್ತೇನೆ. ಪ್ರತಿಪಕ್ಷಗಳು ಏನನ್ನೂ ಮಾಡಲು ಸಾಧ್ಯವಿಲ್ಲ' ಎಂದು ಪ್ರಧಾನಿ ತಿಳಿಸಿದರು.
'ಭಾರತದ ಜನರು 30 ವರ್ಷಗಳ ನಂತರ ಪೂರ್ಣ ಬಹುಮತದ ಸರ್ಕಾರವನ್ನು ನೀಡಿದ್ದಾರೆ. ಆದರೆ ಬಡ ಕುಟುಂಬದ ಮಗ ಪ್ರಧಾನಿಯಾದದ್ದು ಹೇಗೆ ಎಂಬುದನ್ನು ಅರಗಿಸಿಕೊಳ್ಳಲು ಕಾಂಗ್ರೆಸ್ಗೆ ಸಾಧ್ಯವಾಗುತ್ತಿಲ್ಲ' ಎಂದು ಪ್ರಧಾನಿ ಮೋದಿ ಹೇಳಿದರು.
ಅವರಿಗೆ ದೇಶಕ್ಕಿಂತ ಪಕ್ಷ ದೊಡ್ಡದು, ದೇಶಕ್ಕಿಂತ ಮೊದಲು ಪಕ್ಷವೇ ತಮ್ಮ ಆದ್ಯತೆ ಎಂಬುದನ್ನು ಪ್ರತಿಪಕ್ಷಗಳು ಸಾಬೀತುಪಡಿಸಿವೆ. ಬಡವರ ಹಸಿವಿನ ಬಗ್ಗೆ ನಿಮಗೆ ಚಿಂತೆಯಿಲ್ಲ, ಅಧಿಕಾರದ ಹಸಿವು ನಿಮ್ಮ ಮನಸ್ಸಿನಲ್ಲಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ ಎಂಬುದಾಗಿ ನರೇಂದ್ರ ಮೋದಿ ತಿಳಿಸಿದರು.












Click it and Unblock the Notifications