ರಫೇಲ್ ಖರೀದಿ ಬಗ್ಗೆ ಜಂಟಿ ಸದನ ಸಮಿತಿ ತನಿಖೆಗಾಗಿ ಕಾಂಗ್ರೆಸ್ ನಿಂದ ಅಭಿಯಾನ
ರಫೇಲ್ ಯುದ್ಧ ವಿಮಾನ ಖರೀದಿ ವಿಚಾರವಾಗಿ ಇತ್ತೀಚೆಗೆ ಸುಪ್ರೀಂ ಕೋರ್ಟ್ ತನ್ನ ಅಭಿಪ್ರಾಯವನ್ನು ತಿಳಿಸಿದೆ. ಆದರೆ ಕೇಂದ್ರ ಸರಕಾರವು ವಿಮಾನ ಖರೀದಿ ವ್ಯವಹಾರದ ಮಾಹಿತಿ ಮುಚ್ಚಿದ ಲಕೋಟೆಯಲ್ಲಿ ನೀಡುವ ಮೂಲಕ ಹಲವು ಮಾಹಿತಿಯನ್ನು ಮುಚ್ಚಿಟ್ಟಿದೆ ಎಂಬುದು ಕಾಂಗ್ರೆಸ್ ಆರೋಪ. ಇದೀಗ ವಿಮಾನ ಖರೀದಿಗೆ ಸಂಬಂಧಿಸಿದಂತೆ ಜಂಟಿ ಸದನ ಸಮಿತಿಯಿಂದ ತನಿಖೆ ಆಗಬೇಕು ಎಂಬ ಧ್ವನಿ ಜೋರಾಗಿ ಕೇಳಿಬರುತ್ತಿದೆ.
ನರೇಂದ್ರ ಮೋದಿ ಸರಕಾರವು ಫ್ರಾನ್ಸ್ ಜತೆಗೆ ಮಾಡಿಕೊಂಡ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಬಗ್ಗೆ ಜಂಟಿ ಸದನ ಸಮಿತಿ (ಜೆಪಿಸಿ)ಯಿಂದ ತನಿಖೆ ಆಗಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತಿದ್ದು, ಇದಕ್ಕೆ ಬೆಂಬಲ ಸೂಚಿಸಬೇಕು ಎಂದು ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ. ಡಿಸೆಂಬರ್ 18ಕ್ಕೆ 50 ಸಾವಿರಕ್ಕೂ ಹೆಚ್ಚು ಮಂದಿ ಈ ಆನ್ ಲೈನ್ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.
ರಫೇಲ್ ಮೌಲ್ಯ ನಿರ್ಧಾರ ನಮ್ಮ ಕೆಲಸವಲ್ಲ: ಕೋರ್ಟ್ ಹೇಳಿದ್ದೇನು?
ಈ ಸಂಖ್ಯೆಯನ್ನು 75 ಸಾವಿರಕ್ಕೆ ತಲುಪಿಸುವ ಗುರಿ ಹಾಕಿಕೊಳ್ಳಲಾಗಿದೆ. ರಾಜನ್ ಕೊಚ್ಚಾರ್ ಈ ಅಭಿಯಾನ ಆರಂಭಿಸಿದ್ದು, "ರಫೇಲ್ ಬಗ್ಗೆ ಭಾರತವು ಸತ್ಯ ತಿಳಿದುಕೊಳ್ಳುವ ಅಗತ್ಯವಿದೆ" ಎಂಬ ಶೀರ್ಷಿಕೆ ಅಡಿಯಲ್ಲಿ ಆನ್ ಲೈನ್ ಅಭಿಯಾನ ಆರಂಭಿಸಿದ್ದಾರೆ. ಯಾವ ಕಾರಣಕ್ಕಾಗಿ ಈ ವ್ಯವಹಾರದ ಬಗ್ಗೆ ತನಿಖೆ ಆಗಬೇಕು ಎಂಬುದನ್ನು ಪಟ್ಟಿ ಮಾಡಲಾಗಿದ್ದು, ವಿವರ ಇಂತಿದೆ.
ನೀತಿ-ನಿಯಮಾವಳಿ ಗಾಳಿಗೆ ತೂರಲಾಗಿದೆ
ದರ, ಯುದ್ಧ ವಿಮಾನದ ಸಂಖ್ಯೆ, ಪಾಲುದಾರರು ಮುಂತಾದ ಎಲ್ಲ ಮುಖ್ಯ ನಿರ್ಧಾರಗಳನ್ನು ಒಬ್ಬರೇ ವ್ಯಕ್ತಿ ತೆಗೆದುಕೊಂಡಿದ್ದಾರೆ- ಶ್ರೀ ನರೇಂದ್ರ ಮೋದಿ, ಈಗಾಗಲೇ ಇರುವ ನೀತಿ, ನಿಯಮಾವಳಿಗಳು, ಅದರಲ್ಲೂ ಉನ್ನತ ಮಟ್ಟದ, ಭದ್ರತೆ ವಿಚಾರದಲ್ಲಿನ ಸಂಪುಟ ಸಮಿತಿಯನ್ನು ಮೀರಲಾಗಿದೆ.
ವಿಮಾನ ಖರೀದಿ ಬೆಲೆಯಲ್ಲಿ ತಲಾ 300% ಹೆಚ್ಚಳ
ಈ ಹಿಂದಿನ ಸರಕಾರ ಮಾಡಿಕೊಂಡಿದ್ದ ಕರಾರಿಗಿಂತ ಯುದ್ಧ ವಿಮಾನ ಖರೀದಿ ಬೆಲೆಯಲ್ಲಿ ತಲಾ 300% ಹೆಚ್ಚಿನ ಮೊತ್ತಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇಷ್ಟು ಮೊತ್ತ ಏರಿಕೆಗೆ ಕಾರಣ ಏನು ಎಂಬ ಬಗ್ಗೆ ಒಪ್ಪಿಗೆ ಆಗಬಹುದಾದ ಕಾರಣವನ್ನು ಕೂಡ ಈ ಸರಕಾರ ನೀಡಿಲ್ಲ. ಅದರ ಬದಲು ಇಡೀ ವ್ಯವಹಾರದಲ್ಲಿ ರಹಸ್ಯ ಮಾಡುತ್ತಿದೆ. ಮೊತ್ತದ ವಿವರ ನೀಡಲು ಸಾಧ್ಯವಿಲ್ಲ. ಹಾಗೆ ಮಾಡಿದರೆ 'ರಾಷ್ಟ್ರೀಯ ಭದ್ರತೆ'ಗೆ ಧಕ್ಕೆ ಆಗುತ್ತದೆ ಎನ್ನಲಾಗುತ್ತಿದೆ. ಇದರಿಂದ ಈ ವ್ಯವಹಾರದಲ್ಲಿ ಭ್ರಷ್ಟಾಚಾರದ ಬಗ್ಗೆ ಇನ್ನಷ್ಟು ಅನುಮಾನ ಮೂಡುತ್ತದೆ ಹಾಗೂ ಸ್ವತಂತ್ರವಾಗಿ ಪರಿಶೀಲನೆ ಆಗಬೇಕು ಎನಿಸುತ್ತದೆ.
ರಾಹುಲ್ ಗಾಂಧಿ ಭಾಷಣವೂ ಮತ್ತು ರಫೇಲ್ ಫೈಟರ್ ಜೆಟ್ ಮೌಲ್ಯವೂ!
ರಿಲಯನ್ಸ್ ಡಿಫೆನ್ಸ್ ಗೆ 1,30,000 ಕೋಟಿ ಲಾಭ
45 ಸಾವಿರ ಕೋಟಿ ರುಪಾಯಿಗೂ ಹೆಚ್ಚು ಸಾಲ ಹೊತ್ತಿರುವ ಅನಿಲ್ ಅಂಬಾನಿ ಸಮೂಹವು ಆಫ್ ಸೆಟ್ ಪಾಲುದಾರ ಕಂಪನಿ ಆಗಿದ್ದು, 30 ಸಾವಿರ ಕೋಟಿ ಮೌಲ್ಯದ ವ್ಯವಹಾರ ಈ ಸಮೂಹದ ಜತೆಗೆ ಮಾಡಬೇಕಾಗುತ್ತದೆ. ವಿದೇಶದಲ್ಲಿರುವ ವಿಮಾನ ತಯಾರಕರು ರಫೇಲ್ ಗಾಗಿ ಭಾರತದ ಪಾಲುದಾರ ಕಂಪನಿಯಿಂದ ಅಷ್ಟು ದೊಡ್ಡ ವ್ಯವಹಾರ ಮಾಡಬೇಕು. ಅದಕ್ಕೆ ಬದಲಿಯಾಗಿ ಭಾರತ ವಿಮಾನ ಖರೀದಿಸುತ್ತದೆ.
ತನ್ನ ಹೂಡಿಕೆದಾರರಿಗೆ ರಿಲಯನ್ಸ್ ಡಿಫೆನ್ಸ್ ನೀಡಿದ ಮಾಹಿತಿ ಪ್ರಕಾರ, ಮೂವತ್ತಾರು ರಫೇಲ್ ವಿಮಾನಗಳಿಗೆ ಬಿಡಿ ಭಾಗಗಳು ಒದಗಿಸುವುದು, ನಿರ್ವಹಣೆ ವೆಚ್ಚ ಇವೆಲ್ಲ ಸೇರಿ ಮುಂದಿನ ಐವತ್ತು ವರ್ಷಗಳಲ್ಲಿ ಒಂದು ಲಕ್ಷ ಕೋಟಿ ರುಪಾಯಿಯಷ್ಟು ಅನುಕೂಲ ಪಡೆಯುತ್ತದೆ. ಅಲ್ಲಿಗೆ ಅನಿಲ್ ಅಂಬಾನಿಯ ರಿಲಯನ್ಸ್ ಡಿಫೆನ್ಸ್ ಗೆ ಆಗುವ ಒಟ್ಟು ಅನುಕೂಲ 1,00,000 ಕೋಟಿ + 30,000 ಕೋಟಿ = 1,30,000 ಕೋಟಿ.
ರಫೇಲ್ ವಿವಾದದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆರು ಸಂಗತಿಗಳು
ಸಮಯಾವಕಾಶ ಮುಂದಕ್ಕೆ ಹೋಯಿತು
ಮೂಲ ಒಪ್ಪಂದದ ಪ್ರಕಾರ 126 ರಫೇಲ್ ಯುದ್ಧ ವಿಮಾನ ಖರೀದಿ ಮಾಡಬೇಕಿತ್ತು. ಆದರೆ ಅದನ್ನು 36ಕ್ಕೆ ಇಳಿಸುವ ಮೂಲಕ ರಾಷ್ಟ್ರೀಯ ಭದ್ರತೆ ವಿಚಾರವಾಗಿ ಪ್ರಧಾನಿಗಳು ರಾಜೀ ಮಾಡಿಕೊಂಡಿದ್ದಾರೆ. ಮೂರು ವರ್ಷದಲ್ಲಿ ಭಾರತೀಯ ವಾಯುಸೇನೆಗೆ ಯುದ್ಧ ವಿಮಾನ ಬೇಕಿತ್ತು. ಆದರೆ ಒಪ್ಪಂದದಲ್ಲಿ ಮಾಡಿಕೊಂಡ ಬದಲಾವಣೆಯಿಂದಾಗಿ ಡೆಲಿವರಿ ಸಮಯ ಮುಂದಕ್ಕೆ ಹೋಗಿದೆ. ಇದರಿಂದಾಗಿ ಭಾರತೀಯ ವಾಯುಸೇನೆಗೆ ಅಗತ್ಯ ಸನ್ನಿವೇಶಕ್ಕೆ ಸಿದ್ಧತೆಯೇ ಇಲ್ಲದಂತಾಗಿದೆ.
ಅಲ್ಲದೆ, ಈಗಾಗಲೇ ವಾಯುಸೇನೆಯು 126 ವಿಮಾನದ ಅಗತ್ಯ ಇದೆ ಎಂದು ತಿಳಿಸಿದ್ದರೂ 36 ವಿಮಾನಗಳನ್ನು ಮಾತ್ರ ಖರೀದಿಗೆ ನಿರ್ಧರಿಸಿ, ವಾಯುಸೇನೆ ನಿರ್ಧಾರಕ್ಕೆ ಅವಮಾನ ಮಾಡಿದಂತಾಗಿದೆ. ಜತೆಗೆ ವಾಯುಸೇನೆ ರಕ್ಷಣಾ ವ್ಯವಸ್ಥೆಯಲ್ಲಿ ಎದುರಾಳಿಗಳನ್ನು ಸಮರ್ಥವಾಗಿ ಎದುರಿಸಬೇಕಾದ ಸನ್ನಿವೇಶಕ್ಕೆ ಬೇಕಾದ ಸಿದ್ಧತೆ ಇಲ್ಲದಂತಾಗಿದೆ.
ಬಿಜೆಪಿ ಹಿಂದೆ ಕೂಡ ರಫೇಲ್ ನಂಥ ಅಗ್ನಿ ಪರೀಕ್ಷೆ ಎದುರಿಸಿತ್ತು!
ಮೇಕ್ ಇನ್ ಇಂಡಿಯಾ ಘೋಷಣೆಗೆ ಅಣಕ
ಹಾರಾಟಕ್ಕೆ ಸಿದ್ಧವಾಗಿರುವ ಫ್ರಾನ್ಸ್ ನಿರ್ಮಿತ ಯುದ್ಧ ವಿಮಾನ ಖರೀದಿಗೆ ಮುಂದಾಗುವ ಮೂಲಕ ತಮ್ಮದೇ ಘೋಷಣೆಯಾದ 'ಮೇಕ್ ಇನ್ ಇಂಡಿಯಾ'ದ ಅಣಕಿಸಿದಂತಾಗಿ ಪ್ರಧಾನಿ ನರೇಂದ್ರ ಮೋದಿ. ಅತ್ಯಾಧುನಿಕ ವಿಮಾನ ತಯಾರಿಯಲ್ಲಿ ಸ್ವಾವಲಂಬಿ ಆಗಬಹುದಾಗಿದ್ದ ಅವಕಾಶ ತಪ್ಪಿದೆ. ಜತೆಗೆ ವೈಮಾಂತರಿಕ್ಷ ತಂತ್ರಜ್ಞಾನದಲ್ಲಿ ಹತ್ತು ವರ್ಷ ಹಿಂದಕ್ಕೆ ಉಳಿದಂತಾಗಿದೆ. ಈ ಹಂತದಲ್ಲಿ ನೀತಿಯ ಯು ಟರ್ನ್ ತೆಗೆದುಕೊಳ್ಳುವ ಮೂಲಕ ವಿದೇಶೀ ವಿಮಾನ ತಯಾರಕರಿಗೆ ಅನುಕೂಲ ಮಾಡಿಕೊಡಲಾಗಿದೆ.
ಎಚ್ ಎಎಲ್ ಗೆ ಸರಿಪಡಿಸಲಾಗದಷ್ಟು ಹಾನಿ
126 ವಿಮಾನಗಳನ್ನು ರದ್ದು ಮಾಡಿದರಲ್ಲಾ ಅದರಲ್ಲಿ 108 ವಿಮಾನಗಳು ಎಚ್ ಎಎಲ್ ನಲ್ಲಿ ತಯಾರಾಗಬೇಕಿತ್ತು. ತಂತ್ರಜ್ಞಾನ ವರ್ಗಾವಣೆ ಆಗುವ ಮೂಲಕ ಭಾರತದಲ್ಲೇ ಆ ವಿಮಾನಗಳು ತಯಾರಾಗಿದ್ದರೆ ಎಚ್ ಎಎಲ್ ಗೆ ಅನುಕೂಲ ಆಗುತ್ತಿತ್ತು. ಆದರೆ ಈಗ ಈಗ ಎಚ್ ಎಎಲ್ ಗೆ ಸರಿಪಡಿಸಲಾಗದ ಹಾನಿಯಾಗಿದೆ. ಸಾರ್ವಜನಿಕ ಸ್ವಾಮ್ಯದ ಎಚ್ ಎಎಲ್ ನಾಶದಿಂದ ಅನುಕೂಲ ಆಗಿದ್ದು ವಿದೇಶಿ ವಿಮಾನ ತಯಾರಕರಿಗೆ ಹಾಗೂ ರಿಲಯನ್ಸ್ ಡಿಫೆನ್ಸ್ ಅಂತಹ ಭಾರತದ ಖಾಸಗಿ ಕಂಪನಿಗಳಿಗೆ.