India Monsoon Report: ನಿರೀಕ್ಷೆಗೂ ಮೊದಲೇ ಶೇ.100ರಷ್ಟು ಆವರಿಸಿದ ಮುಂಗಾರು, ಈ ರಾಜ್ಯಗಳಿಗೆ ಭಾರೀ ಮಳೆ: ಐಎಂಡಿ
ನವದೆಹಲಿ, ಜುಲೈ 03: ಭಾರತದಲ್ಲಿ ಕೆಲವು ದಿನಗಳ ಹಿಂದಷ್ಟೇ ನೈಋತ್ಯ ಮುಂಗಾರು ಮಳೆಯು ಶೇಕಡಾ 80ರಷ್ಟು ಆವರಿಸಿತ್ತು. ಇದೀಗ ಅವಧಿಗೂ ಮೊದಲೇ ದೇಶವನ್ನು ಮುಂಗಾರು ಆವರಿಸಿಕೊಂಡಿದೆ. ಈ ಮೂಲಕ ದೇಶದ ವಿವಿಧ ರಾಜ್ಯಗಳಲ್ಲಿ ವ್ಯಾಪಕ ಭಾರಿ ಮಳೆ ಸುರಿಸಿ ಪ್ರವಾಹ, ನೆರೆ ಭೀತಿ ಸೃಷ್ಟಿಸಿದೆ. ಮುಂದಿನ ಐದು ದಿನಗಳು ಸಹ ದೇಶದೆಲ್ಲಡೆ ಧಾರಾಕಾರ ಮಳೆಯಾಗುವ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆ ಪ್ರಕಾರ, ಪ್ರತಿ ವರ್ಷದಂತೆ ಈ ವರ್ಷ ವಾಡಿಕೆ ಜುಲೈ 8ರಂದು ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಮುಂಗಾರು ಸಕ್ರಿಯಗೊಳ್ಳಬೇಕು. ಆದರೆ 6 ದಿನಗಳ ಮುನ್ನವೇ ಅಂದರೆ ಜುಲೈ 02ರಂದೇ ಶೇಕಡಾ 100ರಷ್ಟು ಪ್ರದೇಶವನ್ನು ಆವರಿಸಿದೆ. ಬಹುತೇಕ ಎಲ್ಲ ಭಾಗಗಳಲ್ಲೂ ತುಂತುರು-ಸಾಧಾರಣ, ಸಾಧಾರಣದಿಂದ ಭಾರಿ, ಅತೀ ಭಾರಿ ಮಳೆ ಸುರಿಯುತ್ತಿದೆ.

ಉತ್ತರ ಭಾರತದ ರಾಜ್ಯಗಳಾದ ರಾಜಸ್ಥಾನ್, ಪಂಜಾಬ್ ಮತ್ತು ಹರಿಯಾಣದ ಹಲವು ಭಾಗಗಳಲ್ಲಿ ಮಳೆ ದಾಖಲಾಗುತ್ತಿದೆ. ಉತ್ತರ ಪ್ರದೇಶದ ಪೂರ್ವ ಮತ್ತು ಬಿಹಾರದ ದಕ್ಷಿಣ ಭಾಗಗಳಲ್ಲಿ ಅತ್ಯಧಿಕ ಮಳೆ ದಾಖಲಾಗಲಿದೆ. ಇವುಗಳನ್ನು ಹೊರತುಪಡಿಸಿ ಮುಂಗಾರು ಸಾಮಾನ್ಯವಾಗಿರುತ್ತದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.
ಮುಂಗಾರು ಮಳೆಯ ತೀವ್ರತೆ ಕುರಿತು ಪ್ರತಿಕ್ರಿಯಿಸಿರುವ ಐಎಂಡಿ ಹಿರಿಯ ವಿಜ್ಞಾನಿ ಡಾ. ನರೇಶ್ ಕುಮಾರ್ ಅವರು, ಕೆಲವು ದಿನಗಳ ಹಿಂದೆ ದೇಶದ ಶೇಕಡಾ 80 ಭಾಗ ಆವರಿಸಿದ್ದ ಮುಂಗಾರು ಮಳೆ ಅವಧಿಗೂ ಮುನ್ನವೇ ಇಂದು ಇಡೀ ದೇಶವನ್ನು ಆವರಿಸಿದೆ. ಸಾಮಾನ್ಯವಾಗಿ ಜುಲೈ 8ರಂದು ಈ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ ಸರಾಸರಿ ದಿನಾಂಕಕ್ಕಿಂತ ಮೊದಲೇ ದೇಶಾದ್ಯಂತ ಮುಂಗಾರು ಆವರಿಸಿದೆ ಎಂದು ಹೇಳಿದರು.

ಗುಜರಾತಿನಲ್ಲಿ ಪ್ರವಾಹ ಪರಿಸ್ಥಿತಿ: ಅಮಿತ್ ಶಾ ಅಭಯ
ಇನ್ನೂ ದೇಶದ ಈಶಾನ್ಯ ರಾಜ್ಯಗಳಲ್ಲಿ ಮಾನ್ಸೂನ್ ವಿಶೇಷವಾಗಿ ಸಕ್ರಿಯವಾಗಿದ್ದು, ಮುಂದಿನ ಐದು ದಿನಗಳಲ್ಲಿ ಭಾರೀ ಮಳೆ ಬರುವ ಸಂಭವವಿದೆ. ಗುಜರಾತ್ ರಾಜ್ಯದಲ್ಲಿ ಭೀಕರ ಮಳೆ ಸುರಿದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ಪರಿಹಾರ ಕಾರ್ಯಗಳು, ಹಾನಿ ಬಗ್ಗೆ ಭಾನುವಾರ ಚರ್ಚಿಸಿದರು.
ಮಳೆ, ನೆರೆಯಿಂದಾಗಿ ಸಂಕಷ್ಟದ ಗುಜರಾತ್ ಜನರೊಂದಿಗೆ ನಾವಿದ್ದೇವೆ ಎಂದು ಕೇಂದ್ರ ಸರ್ಕಾರ ನಿಂತಿದೆ ಎಂದು ಅವರು ಭರವಸೆ ನೀಡಿದರು. ಭಾರೀ ಮಳೆಯಿಂದ ಗುಜರಾತ್ನ ಹಲವು ಭಾಗಗಳು ಜಲಾವೃತವಾಗಿವೆ. ತಗ್ಗು ಪ್ರದೇಶ ಮನೆಗಳು ನೀರುಪಾಲಾಗಿವೆ. ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನ ನಿರಂತರ ಮಳೆಗೆ ತತ್ತರಿಸಿದ್ದಾರೆ.
ಇನ್ನೂ ವಾಯುವ್ಯ ಭಾಗದ ಉತ್ತರ ಪ್ರದೇಶ ಮತ್ತಿತರೆ ಭಾಗಗಳಲ್ಲಿ ಚಂಡಮಾರುತದ ಪರಿಚಲನೆ ಇದೆ. ಮತ್ತೊಂದು ಚಂಡಮಾರುತದ ಪರಿಚಲನೆಯು ದಕ್ಷಿಣ ಬಂಗಾಳಕೊಲ್ಲಿ ಸಮುದ್ರದ ಮಧ್ಯ ಭಾಗಗಳಲ್ಲಿ ಸೃಷ್ಟಿಯಾಗಿದೆ. ಇವುಗಳು ಇನ್ನು ಸಣ್ಣ ಪ್ರಮಾಣದಲ್ಲಿವೆ. ಇನ್ನು ಗುಜರಾತ್ ಪಶ್ಚಿಮ ಬಂಗಾಳ, ಉತ್ತರಾಖಂಡ ಹಾಗೂ ಬಿಹಾರದ ಕೆಲವೆಡೆ ಇಂದು ಸೋಮವಾರವು ಸಹ ಭಾರೀ ಮಳೆ ಆಗಲಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.
ನೀಗಿದ ಮಳೆ ಕೊರತೆ
ಮುಂಗಾರು ಆರಂಭದ ಜೂನ್ ತಿಂಗಳಿಯೇ ದೇಶದ ನಾನಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ನಾನಾ ಕಡೆಗಳಲ್ಲಿ ಮಳೆ ಕೊರತೆ ಸೃಷ್ಟಿಯಾಗಿತ್ತು. ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದ್ದರಿಂದ ರೈತರು ಕಂಗಾಲಾಗಿದ್ದರು. ಬಿತ್ತನೆಗೆ, ಇನ್ನಿತರ ಕೃಷಿ ಚಟುವಟಿಕೆಗಳಲ್ಲಿ ಹಿನ್ನಡೆಯಾಗಿತ್ತು. ಬಿಹಾರ ರಾಜ್ಯದಲ್ಲಿ ಶೇಕಡಾ 69 ಹಾಗೂ ಕೇರಳದಲ್ಲಿ ಶೇಕಡಾ 60ರಷ್ಟು ಮಳೆಯ ಅಭಾವ ಉಂಟಾಗಿತ್ತು. ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಜಾರ್ಖಂಡ್, ಆಂಧ್ರಪ್ರದೇಶ ರಾಜ್ಯಗಳಲ್ಲಿ ಸಹಿತ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದೇ ಕೊರತೆ ಆಗಿತ್ತು.
ಕರ್ನಾಟಕ ಕರಾವಳಿಗೆ ಮಳೆ ವರದಾನ
ಕರ್ನಾಟಕದ ಒಳಡನಾಡಿನ ಒಂದೆರಡು ಜಿಲ್ಲೆಗಳು ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆ ತೀವ್ರತೆ ವ್ಯಾಪಕವಾಗಿರುವುದರಿಂದ ಮುಂದಿನ ಐದು ದಿನವೂ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಜೋರು ಮಳೆ ಆಗುತ್ತಿದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣದಿಂದ ಉತ್ತಮ ಮಳೆ ಕಂಡು ಬರುತ್ತಿದೆ.












Click it and Unblock the Notifications