ಕೇಂದ್ರ ಸರ್ಕಾರವು ಕೊರೊನಾ ವೈರಸ್ ವಲಯಗಳನ್ನು ವಿಂಗಡಿಸಿದ್ದು ಹೇಗೆ?
ಮುಂಬೈ, ಮೇ.01: ಭಾರತ ಲಾಕ್ ಡೌನ್ ಮುಂದುವರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ದೇಶದಲ್ಲಿ ಕೆಂಪು, ಕಿತ್ತಳೆ ಹಾಗೂ ಹಸಿರು ವಲಯಗಳನ್ನಾಗಿ ವಿಂಗಡಿಸಿದೆ. ನೊವೆಲ್ ಕೊರೊನಾ ವೈರಸ್ ಸೋಂಕಿತರು ಹೆಚ್ಚಿನ ಪ್ರಮಾಣದಲ್ಲಿರುವ ಪ್ರದೇಶಗಳನ್ನು ಕೆಂಪು ವಲಯ ಎಂದು ಗುರುತಿಸಲಾಗಿದೆ.
ದೇಶದಲ್ಲಿ 130 ಕೆಂಪು ವಲಯಗಳನ್ನು ಕೇಂದ್ರ ಸರ್ಕಾರವು ಪಟ್ಟಿ ಮಾಡಿದೆ. ಈ ಪೈಕಿ ರಾಷ್ಟ್ರ ರಾಜಧಾನಿ ನವದೆಹಲಿಯ ಎಲ್ಲಾ ಜಿಲ್ಲೆಗಳನ್ನು ಕೆಂಪು ವಲಯದ ಪಟ್ಟಿಗೆ ಸೇರ್ಪಡೆಗೊಳಿಸಿದೆ. ಜಾರ್ಖಂಡ್ ನಲ್ಲಿ ರಾಂಚಿಯನ್ನಷ್ಟೇ ಕೆಂಪು ವಲಯ ಎಂದು ಗುರುತಿಸಿದೆ.
ಗುರುವಾರ 76 ಕೊರೊನಾ ವೈರಸ್ ಸೋಂಕಿತರು ಕಂಡು ಬಂದ ನವದೆಹಲಿಯನ್ನು ಸಂಪೂರ್ಣ ಕೆಂಪು ವಲಯ ಎಂದು ಘೋಷಿಸಲಾಗಿದೆ. ನವದೆಹಲಿಯೊಂದರಲ್ಲೇ 3,515ಕ್ಕೂ ಅಧಿಕ ಮಂದಿಗೆ ಮಹಾಮಾರಿ ಅಂಟಿಕೊಂಡಿರುವುದು ದೃಢಪಟ್ಟಿದೆ.

ಕೆಂಪು ವಲಯಗಳ ವಿಶೇಷಗಳೇನು?:
ದೇಶದಲ್ಲಿ ಅತಿಹೆಚ್ಚು ಕೊರೊನಾ ವೈರಸ್ ಸೋಂಕಿತರನ್ನು ಹೊಂದಿರುವ ಅಥವಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಜಿಲ್ಲೆಗಳನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಕೆಂಪು ವಲಯಗಳು ಎಂದು ಗುರುತಿಸಲಾಗುತ್ತಿದೆ. ಕೊರೊನಾ ಶಂಕಿತರು ಹೆಚ್ಚಾಗಿರುವ ವಲಯಗಳನ್ನು ಕಿತ್ತಳೆ ಹಾಗೂ ಸೋಂಕಿತರೇ ಇಲ್ಲದ ಪ್ರದೇಶವನ್ನು ಹಸಿರುವ ವಲಯ ಎಂದು ಗುರುತಿಸಲಾಗಿದೆ.
ಕೇಂದ್ರ ಸರ್ಕಾರವು ದೇಶದಲ್ಲಿ 130 ಕೆಂಪು ವಲಯ, 284 ಕಿತ್ತಳೆ ವಲಯ ಹಾಗೂ 319 ಹಸಿರು ವಲಯಗಳೆಂದು ಪಟ್ಟಿ ಮಾಡಿದೆ. ಕಂಟೋನ್ಮೆಂಟ್ ಝೋನ್ ಗಳಲ್ಲಿ ಕೊರೊನಾ ವೈರಸ್ ಸೋಂಕಿತರ ಪತ್ತೆ ಮತ್ತು ಸೋಂಕಿತರ ಜೊತೆಗೆ ಸಂಪರ್ಕ ಹೊಂದಿರುವವರನ್ನು ಪತ್ತೆ ಮಾಡುವುದು, ವೈದ್ಯಕೀಯ ತಪಾಸಣೆಗೆ ಒಳಪಡಿಸಲು ಕೆಲವು ಮಾರ್ಗಸೂಚಿಗಳನ್ನು ಕೂಡಾ ರೂಪಿಸಲಾಗಿದೆ.











Click it and Unblock the Notifications