ಮನೋಹರ್ ಪರಿಕ್ಕರ್ ಗೌರವಿಸಲು ಕೇಂದ್ರದ ದಿಟ್ಟ ಹೆಜ್ಜೆ
ನವದೆಹಲಿ, ಫೆಬ್ರವರಿ 18 : ಕೇಂದ್ರ ಮಾಜಿ ರಕ್ಷಣಾ ಸಚಿವ, ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಗೌರವಿಸಲು ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. 2019ರ ಮಾರ್ಚ್ 17ರಂದು ಪರಿಕ್ಕರ್ ವಿಧಿವಶರಾಗಿದ್ದರು.
ಮನೋಹರ್ ಪರಿಕ್ಕರ್ ಗೌರವಿಸಲು ರಕ್ಷಣಾ ಅಧ್ಯಯನ ಮತ್ತು ವಿಶ್ಲೇಷಣೆ (ಐಡಿಎಸ್ಎ) ಸಂಸ್ಥೆಗೆ ಅವರ ಹೆಸರು ಇಡಲು ಕೇಂದ್ರ ಸರ್ಕಾರ ತೀರ್ಮಾನವನ್ನು ಕೈಗೊಂಡಿದೆ. ಐಡಿಎಸ್ಎ ಸಂಸ್ಥೆ ನವದೆಹಲಿಯಲ್ಲಿದ್ದು, ಶೀಘ್ರವೇ ಮರು ನಾಮಕರಣವಾಗಲಿದೆ.
ರಕ್ಷಣಾ ಇಲಾಖೆ ಈ ಕುರಿತು ಮಂಗಳವಾರ ಅಧಿಕೃತ ಹೇಳಿಕೆ ನೀಡಿದೆ. ರಕ್ಷಣಾ ಇಲಾಖೆ ಸಚಿವರಾಗಿದ್ದಾಗ ಮನೋಹರ್ ಪರಿಕ್ಕರ್ ತಂದ ಸುಧಾರಣೆಗಳನ್ನು ನೆನಪಿನಲ್ಲಿಡಲು ಹಾಗೂ ಅವರಿಗೆ ಗೌರವ ಸಲ್ಲಿಸಲು ಐಡಿಎಸ್ಎಗೆ ಮರು ನಾಮಕರಣ ಮಾಡಲಾಗುತ್ತಿದೆ.
ಮನೋಹರ್ ಪರಿಕ್ಕರ್ ರಕ್ಷಣಾ ಸಚಿವರಾಗಿದ್ದಾಗ ಸಮಾನ ಶ್ರೇಣಿ, ಸಮಾನ ಪಿಂಚಣಿ ಯೋಜನೆ ಜಾರಿಗೆ ತರಲು ಶ್ರಮಿಸಿದ್ದರು. ಪಠಾಣ್ ಕೋಟ್ ಮತ್ತು ಉರಿ ಸೇನಾ ದಾಳಿಗಳು ನಡೆದಾಗ ಅವರು ಕಾರ್ಯ ನಿರ್ವಹಣೆ ಮಾಡಿದ ರೀತಿ ಮೆಚ್ಚುಗೆಗೆ ಕಾರಣವಾಗಿತ್ತು.

ಏನಾಗಲಿದೆ ಹೆಸರು?
ಕೇಂದ್ರ ಸರ್ಕಾರ ಕೈಗೊಂಡ ತೀರ್ಮಾನದಂತೆ The Institute for Defence Studies and Analyses (IDSA) ಇನ್ನು ಮುಂದೆ Manohar Parrikar Institute for Defence Studies and Analyses ಎಂದು ಬದಲಾಗಲಿದೆ.

1965ರಲ್ಲಿ ಸ್ಥಾಪನೆ
1965ರಲ್ಲಿ ರಕ್ಷಣಾ ಅಧ್ಯಯನ ಮತ್ತು ವಿಶ್ಲೇಷಣೆ (ಐಡಿಎಸ್ಎ) ಸ್ಥಾಪನೆ ಮಾಡಲಾಯಿತು. ರಕ್ಷಣಾ ಇಲಾಖೆಯ ಅಡಿ ಇದು ಕೆಲಸ ಮಾಡುತ್ತದೆ. ಸೊಸೈಟಿಯಾಗಿ ಇದನ್ನು ಮೊದಲು ರಿಜಿಸ್ಟರ್ ಮಾಡಿಸಲಾಯಿತು. ರಕ್ಷಣಾ ಇಲಾಖೆ ಮುಖ್ಯಸ್ಥರೇ ಈ ಸೊಸೈಟಿಯ ಮುಖ್ಯಸ್ಥರಾಗಿರುತ್ತಾರೆ. ರಕ್ಷಣಾ ಕ್ಷೇತ್ರದಲ್ಲಿನ ವಿಚಾರಗಳ ಬಗ್ಗೆ ಇದು ಸಂಶೋಧನೆ ನಡೆಸುತ್ತದೆ.

ನರೇಂದ್ರ ಮೋದಿಗೆ ಆಪ್ತರಾಗಿದ್ದರು
ನರೇಂದ್ರ ಮೋದಿ ಹೆಸರನ್ನು ಪ್ರಧಾನಿ ಹುದ್ದೆಗೆ ಮೊದಲು ಪ್ರಸ್ತಾಪಿಸಿದ್ದು ಮನೋಹರ್ ಪರಿಕ್ಕರ್. ಮೋದಿ ಪ್ರಧಾನಿಯಾಗುತ್ತಿದ್ದಂತೆ ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ಮನವೊಲಿಸಿ ಕೇಂದ್ರ ಸಚಿವರಾಗುವಂತೆ ಮಾಡಿದರು. ಪ್ರಮುಖ ಖಾತೆಯಾದ ರಕ್ಷಣಾ ಇಲಾಖೆಯ ಹೊಣೆಯನ್ನು ಅವರಿಗೆ ನೀಡಿದರು.

ಪುನಃ ಗೋವಾದ ಮುಖ್ಯಮಂತ್ರಿಯಾಗಿದ್ದರು
2017ರಲ್ಲಿ ಗೋವಾ ವಿಧಾನಸಭೆ ಚುನಾವಣೆ ನಡೆಯಿತು. ಗೋವಾದಲ್ಲಿ ಅತಂತ್ರ ಫಲಿತಾಂಶ ಬಂತು. ಮನೋಹರ್ ಪರಿಕ್ಕರ್ ಮುಖ್ಯಮಂತ್ರಿಯಾದರೆ ಸರ್ಕಾರ ರಚನೆಗೆ ಬೆಂಬಲ ನೀಡುವುದಾಗಿ ಗೋವಾ ಫಾರ್ವರ್ಡ್ ಪಕ್ಷ ಹೇಳಿತು. ಗೋವಾದ ಬಿಜೆಪಿ ನಾಯಕರ ಒತ್ತಾಯದಿಂದಲೂ ಮನೋಹರ್ ರಾಜ್ಯ ರಾಜಕೀಯಕ್ಕೆ ವಾಪಸ್ ಆದರು.












Click it and Unblock the Notifications