ಮಹಾರಾಷ್ಟ್ರ, ಬಿಹಾರ, ಉತ್ತರಪ್ರದೇಶದಲ್ಲಿ ಭಾರಿ ಮಳೆ, ಪ್ರವಾಹ
ಮುಂಬೈ, ಜುಲೈ 25: ಮಹಾರಾಷ್ಟ್ರ, ಬಿಹಾರ, ಉತ್ತರ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, ಪ್ರವಾಹ ರೀತಿಯ ವಾತಾವರಣ ಸೃಷ್ಟಿಯಾಗಿದೆ. ಇದುವರೆಗೆ ಒಟ್ಟು 174 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಮಹಾರಾಷ್ಟ್ರ ಸೇರಿದಂತೆ ಹಲವು ನಗರಗಳಲ್ಲಿ ಮಂಗಳವಾರದಿಂದ ಬಿಡದೆ ಮಳೆ ಸುರಿಯುತ್ತಿದೆ. ಸಾಕಷ್ಟು ಪ್ರದೇಶದಗಳು ಜಲಾವೃತವಾಗಿದೆ. ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಬುಧವಾರ ಬೆಳಗ್ಗೆ ಅಂಧೇರಿ ಫ್ಲೈಓವರ್ ಮೇಲೆ ಮೂರು ಕಾರುಗಳ ಮಧ್ಯೆ ಡಿಕ್ಕಿ ಸಂಭವಿಸಿ 8 ಜನರಿಗೆ ಗಂಭೀರ ಗಾಯವಾಗಿತ್ತು.
ಇನ್ನು ಬಿಹಾರದಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದ್ದು ಹಲವು ಮಂದಿ ಮೃತಪಟ್ಟಿದ್ದಾರೆ.ಮುಂಬೈ ಮಳೆಯಿಂದ ದಾದರ್, ಅಂಧೇರಿ, ಹಿಂದಮಾತಾ, ಸಾಯನ್ ನಲ್ಲಿ ಭಾರಿ ಮಳೆಯಾಗಿದೆ. ಇಲ್ಲಿಯವರೆಗೆ ಜುಲೈ 8ರವರೆಗೆ 708.7 ಮಿ.ಮೀನಷ್ಟು ಮಳೆಯಾಗಿದೆ.

ಬಿಹಾರದಲ್ಲಿ ವಿದ್ಯುತ್ ಪ್ರವಹಿಸಿ 28 ಮಂದಿ ಮೃತಪಟ್ಟಿದ್ದಾರೆ.ಪಾಟ್ನಾ, ಔರಂಗಾಬಾದ್, ಜುಮುಯೀ ಹಾಗೂ ಭಾಗಲ್ಪುರದಲ್ಲಿ 28 ಮಂದಿ ಮೃತಪಟ್ಟಿದ್ದಾರೆ.
ಸಿಡಿಲು ಬಡಿದು ಬಿಹಾರದಲ್ಲಿ 39 ಮಂದಿ, ಜಾರ್ಖಂಡ್ ನಲ್ಲಿ 28 ಹಾಗೂ ಉತ್ತರಪ್ರದೇಶದಲ್ಲಿ ಆರು ಮಂದಿ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಜಾರ್ಖಂಡ್ ನ ಜಾಮಾತ್ರಾ ಮತ್ತು ಲಾಟೇಹಾರ್ ನಲ್ಲಿ ತಲಾ ಆರು ಮಂದಿ, ಚಾತ್ರಾದಲ್ಲಿ ನಾಲ್ಕು, ಗ್ರಾವಾದಲ್ಲಿ ಮೂರು, ಡುಮ್ಕಾದಲ್ಲಿ ಮೂರು ಮಂದಿ, ಗಿರಿಧಿಹ್ ನಲ್ಲಿ ಇಬ್ಬರು, ಪಾಕುರ್ ನಲ್ಲಿ ಇಬ್ಬರು, ಧನ್ಬಾದ್ ನಲ್ಲಿ ಒಬ್ಬರು, ದಿಯೋಗಢ್ ನಲ್ಲಿ ಒಬ್ಬರು ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಸಿಡಿಲಾಘಾತಕ್ಕೆ ಬಲಿಯಾದವರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇರುವುದಾಗಿ ತಿಳಿಸಿದ್ದಾರೆ. ಸಿಡಿಲು ಬಡಿದು ಸಾವನ್ನಪ್ಪಿದ ಕುಟುಂಬಸ್ಥರಿಗೆ ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರವನ್ನು ಜಾರ್ಖಂಡ್ ಮತ್ತು ಉತ್ತರಪ್ರದೇಶ ಸರ್ಕಾರ ಘೋಷಿಸಿದೆ.
ಮುಂದಿನ 48 ಗಂಟೆಗಳಲ್ಲಿ ಇನ್ನಷ್ಟು ಜೋರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಬಯಿನಲ್ಲಿ ಮಂಗಳವಾರ ಮಧ್ಯರಾತ್ರಿಯಿಂದ ಬುಧವಾರ ಬೆಳಗ್ಗೆವರೆಗೆ ಸುರಿದ ಮಳೆಗೆ ರಸ್ತೆಗಳು ಹಾಗೂ ಲೋಕಲ್ ರೈಲು ಹಳಿ ಮಾರ್ಗಗಳು ಜಲಾವೃತಗೊಂಡಿದ್ದು, ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿದೆ. ಸಕಾಲಕ್ಕೆ ಮನೆ,ಕಚೇರಿ ತಲುಪದೇ ಜನರು ಪರದಾಡಿದರು.
ದಕ್ಷಿಣ ಮುಂಬಯಿನಲ್ಲಿ 171 ಮಿ.ಮೀ. ಮಳೆ ಬಿದ್ದಿದೆ. ಸಿಯಾನ್, ದಾದರ್, ಮುಂಬಯಿ ಕೇಂದ್ರ, ಕುರ್ಲಾ, ಅಂಧೇರಿ ಸೇರಿದಂತೆ ಅನೇಕ ಪ್ರದೇಶಗಳು ಜಲಾವೃತಗೊಂಡಿದ್ದು, ನಿವಾಸಿಗಳು ದಿನವಿಡೀ ಸಂಕಷ್ಟ ಎದುರಿಸಿದರು. ಇನ್ನೂ ಎರಡು ದಿನ ಮಳೆ ಅಬ್ಬರ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications