ಲೋಕಸಭಾ ಚುನಾವಣೆ 2024: ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು ಎಲ್ಲಾ ಪಕ್ಷಗಳಿಗೆ ಮಮತಾ ಬ್ಯಾನರ್ಜಿ ಕರೆ
ಕೋಲ್ಕತ್ತಾ, ಮಾರ್ಚ್. 30: 2024 ರ ಲೋಕಸಭೆ ಚುನಾವಣೆಗೆ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕರೆ ನೀಡಿದ್ದಾರೆ. ಪ್ರತಿಪಕ್ಷಗಳು ಒಗ್ಗೂಡಿ ಬಿಜೆಪಿ ವಿರುದ್ಧ ಹೋರಾಡಬೇಕು, ಅವರನ್ನು ಯಾರು ಮುನ್ನಡೆಸುತ್ತಾರೆ ಎಂಬುದು ಮುಖ್ಯವಲ್ಲ ಎಂದು ಹೇಳಿದ್ದಾರೆ.
"ಪ್ರತಿಪಕ್ಷಗಳು ಒಟ್ಟಾಗಿ ಬಿಜೆಪಿ ವಿರುದ್ಧ ಹೋರಾಡಬೇಕು ಮತ್ತು ಬಿಜೆಪಿಯನ್ನು ಕುರ್ಚಿಯಿಂದ ಕಿತ್ತು ಹಾಕಬೇಕು. ಇದಕ್ಕೆ ಯಾರು ನಾಯಕರಾಗುತ್ತಾರೆ ಎಂಬುದು ಮುಖ್ಯವಲ್ಲ. ಇದು ದೇಶ ಉಳಿಸುವ ಹೋರಾಟ. ಇದು ದೇಶದ ಜನತೆ ಮತ್ತು ಬಿಜೆಪಿ ನಡುವಿನ ನೇರ ಹೋರಾಟವಾಗಿದೆ" ಎಂದು ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕೋಲ್ಕತ್ತಾದ ರೆಡ್ ರೋಡ್ನಲ್ಲಿ ಎರಡು ದಿನಗಳ ಧರಣಿ ನಡೆಸುತ್ತಿರುವ ಅವರು ತಮ್ಮ ಧರಣಿ ಸ್ಥಳದಿಂದ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರ ಸರ್ಕಾರವು ರಾಜ್ಯವನ್ನು ವಂಚಿಸಿದೆ ಎಂದು ಆರೋಪಿಸಿದ್ದಾರೆ. "ಬಿಜೆಪಿಯನ್ನು ದೇಶದ ಶತ್ರು ಎಂದು ಕರೆಯಲು ಸಾಧ್ಯವಿಲ್ಲ ಎಂದು ಹೇಳಿದರು ಆದರೆ ಹಿಂದಿಯಲ್ಲಿ ಉತ್ತಮ ಪದದ ಕೊರತೆಯಿಂದಾಗಿ "ದೇಶ್ ಕಾ ದುಷ್ಯಾಶನ್ (ಮಹಾಭಾರತದ ಖಳನಾಯಕ) ಎಂದು ಕರೆಯಬಹುದು. ಈ ದುಷ್ಯಾಶನರನ್ನು ತೆಗೆದು ದೇಶವನ್ನು ಉಳಿಸಿ. ಬಿಜೆಪಿಯನ್ನು ತೊಲಗಿಸಿ ಪ್ರಜಾಪ್ರಭುತ್ವ ಉಳಿಸಿ" ಎಂದು ಹೇಳಿದ್ದಾರೆ.
ಮಾರ್ಚ್ 17 ರಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಮಾರ್ಚ್ 23 ರಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತು ಮಾರ್ಚ್ 24 ರಂದು ಜನತಾ ದಳ (ಜಾತ್ಯತೀತ) ನಾಯಕ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ವಿರೋಧ ಪಕ್ಷಗಳ ಮೂವರು ಪ್ರಮುಖ ನಾಯಕರನ್ನು ಭೇಟಿಯಾದ ಕೆಲವು ದಿನಗಳ ನಂತರ ಬ್ಯಾನರ್ಜಿಯವರ ಈ ಹೇಳಿಕೆಗಳು ಬಂದಿವೆ.

ಕಾಂಗ್ರೆಸ್ ಪಕ್ಷವು ಪ್ರಾದೇಶಿಕ ಪಕ್ಷಗಳನ್ನು ಒಂದೇ ವೇದಿಕೆಗೆ ತರಲು ಪ್ರಯತ್ನಿಸುತ್ತಿದೆ ಎಂದು ಹೇಳಿರುವ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವ ವಿರುದ್ಧವೂ ಮಮತಾ ಬ್ಯಾನರ್ಜಿ ಮಾತನಾಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡದಂತೆ ವಿರೋಧ ಪಕ್ಷಗಳ ಎಲ್ಲ ನಾಯಕರನ್ನು ಕೇಂದ್ರ ಏಜೆನ್ಸಿಗಳ ಸಹಾಯದಿಂದ ಕಂಬಿ ಹಿಂದೆ ಹಾಕಬೇಕೆಂದು ಬಿಜೆಪಿ ಬಯಸುತ್ತಿದೆ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. "ಅಖಿಲೇಶ್ ಯಾದವ್, ಲಾಲು ಯಾದವ್ನಿಂದ ಉದ್ಧವ್ ಠಾಕ್ರೆ, ಅರವಿಂದ್ ಕೇಜ್ರಿವಾಲ್, ವೈಎಸ್ ಜಗನ್ಮೋಹನ್ ರೆಡ್ಡಿಯಿಂದ ಎಂಕೆ ಸ್ಟಾಲಿನ್ನಿಂದ ಕೆ. ಚಂದ್ರಶೇಖರ್ ರಾವ್ ಎಲ್ಲರೂ ಕಳ್ಳರು. ಆದರೆ ನೀವು ಬಿಜೆಪಿಯವರು ಮಾತ್ರ ಸಂತರು" ಎಂದು ವ್ಯಂಗ್ಯವಾಡಿದ್ದಾರೆ.
ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದಿಂದ ಗೆಲ್ಲಲು ಸಾಧ್ಯವಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. "ಬಿಜೆಪಿ ಉತ್ತುಂಗದಲ್ಲಿದ್ದಾಗ ಎನ್ಡಿಎಯಲ್ಲಿ 17 ಪಕ್ಷಗಳಿದ್ದವು. ಈಗ 16 ಪಕ್ಷಗಳು ಅವುಗಳನ್ನು ತೊರೆದಿವೆ. ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಕಾರಣಕ್ಕೆ ಈ ಎಲ್ಲ ಪಕ್ಷಗಳು ಕೈಬಿಟ್ಟಿವೆ. ಅವರು ಒಬ್ಬರೇ ಏನು ಮಾಡಬಹುದು..? ಎಂದು ಪ್ರಶ್ನಿಸಿದ್ದಾರೆ.
ಇನ್ನು, ಮಮತಾ ಬ್ಯಾನರ್ಜಿ ಡಿಎ ವೇತನ ಸಮಾನತೆಗೆ ಬೇಡಿಕೆಯಿಟ್ಟು ಕೋಲ್ಕತ್ತಾದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಎರಡು ದಿನಗಳ ಧರಣಿ ಆರಂಭಿಸಿದ್ದಾರೆ. ನಗರದ ರೆಡ್ ರೋಡ್ ಪ್ರದೇಶದಲ್ಲಿನ ಅಂಬೇಡ್ಕರ್ ಪ್ರತಿಮೆ ಎದುರು ಮಮತಾ ಬ್ಯಾನರ್ಜಿಯವರು ರಾಜ್ಯಕ್ಕೆ ಹಣವನ್ನು ತಡೆಹಿಡಿಯುತ್ತಿರುವ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ರಾಜ್ಯದ ಹಲವಾರು ರಾಜಕೀಯ ಪಕ್ಷಗಳು ಕೋಲ್ಕತ್ತಾದಲ್ಲಿ ಪ್ರತಿಭಟನೆಗಳನ್ನು ಆಯೋಜಿಸಿವೆ.












Click it and Unblock the Notifications