ಉದ್ಯಮ ಸ್ನೇಹಿ ವಾತಾವರಣ ಉತ್ತಮವಾಗಿಲ್ಲ, ನಾಶವಾಗಿದೆ: ರಾಹುಲ್ ಆಕ್ರೋಶ
ಅಹಮದಾಬಾದ್, ನವೆಂಬರ್ 1: ಭಾರತದಲ್ಲಿ ಉದ್ಯಮ ಸ್ನೇಹಿ ವಾತಾವರಣ ಉತ್ತಮವಾಗಿಲ್ಲ. ಬದಲಾಗಿ ಸಂಪೂರ್ಣವಾಗಿ ಧ್ವಂಸವಾಗಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ವಿಶ್ವಬ್ಯಾಂಕ್ ಬಿಡುಗಡೆ ಮಾಡಿದ ಉದ್ಯಮ ಸ್ನೇಹಿ ದೇಶಗಳ ರ್ಯಾಂಕಿಂಗ್ ನಲ್ಲಿ ಭಾರತ ಇದೇ ಮೊದಲ ಬಾರಿ 100ನೇ ಸ್ಥಾನಕ್ಕೆ ಜಿಗಿದಿತ್ತು. ಈ ಹಿನ್ನೆಲೆಯಲ್ಲಿ ಗುಜರಾತ್ ಪ್ರವಾಸದಲ್ಲಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ನವಸರ್ಜನ್ ಯಾತ್ರೆಯಲ್ಲಿ ಪ್ರತಿಕ್ರಿಯೆ ನೀಡಿದ್ದು ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿಯನ್ನು ಝಾಡಿಸಿದ್ದಾರೆ.

"ಜೇಟ್ಲಿ ವಿದೇಶಿ ಸಂಸ್ಥೆಗಳ ನೆಲೆಯಲ್ಲಿ ಕೆಲಸ ಮಾಡುತ್ತಾರೆ. ಆದರೆ ನಮಗೆ ವಿದೇಶಿ ಸಂಸ್ಥೆಗಳ ಪ್ರಮಾಣಪತ್ರ ಬೇಕಾಗಿಲ್ಲ. ದೇಶಕ್ಕೆ ಜನರ ಪ್ರಮಾಣ ಪತ್ರ ಬೇಕಾಗಿದೆ. ಜನರೆಲ್ಲಾ ನರೇಂದ್ರ ಮೋದಿ, ಅರುಣ್ ಜೇಟ್ಲಿ ವಿಫಲವಾಗಿದ್ದಾರೆ ಎಂದು ಹೇಳುತ್ತಿದ್ದಾರೆ," ಎಂಬುದಾಗಿ ಅರುಣ್ ಜೇಟ್ಲಿಯವರನ್ನು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಇಡೀ ದೇಶವೇ ಹೇಳುತ್ತಿದೆ. ಭಾರತದಲ್ಲಿ ಉದ್ಯಮ ಸ್ನೇಹಿ ವಾತಾವರಣವೇ ನಾಪತ್ತೆಯಾಗಿದೆ. ನೀವು ಅಪನಗದೀಕರಣ ಜಿಎಸ್ಟಿ ಮೂಲಕ ಉದ್ಯಮ ಸ್ನೇಹಿ ವಾತಾವರಣವನ್ನೇ ನಾಶ ಮಾಡಿದ್ದೀರಿ ಎನ್ನುತ್ತಿದ್ದಾರೆ," ಎಂದು ರಾಹುಲ್ ಹೇಳಿದ್ದಾರೆ.
"ಭಾರತದಲ್ಲಿ ಉದ್ಯಮ ಸ್ನೇಹಿ ಹಿಂದಿಗಿಂತ ಉತ್ತಮವಾಗಿದೆ ಎಂಬುದಾಗಿ ಜೇಟ್ಲಿ ಹೇಳುತ್ತಿದ್ದಾರೆ. ಅವರೇನು ವಾಸ್ತವ ಪ್ರಪಂಚದಲ್ಲಿದ್ದಾರಾ ಕನಸು ಕಾಣುತ್ತಿದ್ದಾರಾ?" ಎಂದು ರಾಹುಲ್ ಪ್ರಶ್ನಿಸಿದ್ದಾರೆ.

ಭರ್ಜರಿ ಚುನಾವಣಾ ಪ್ರಚಾರ
ಡಿಸೆಂಬರ್ 9 ಮತ್ತು 14ರಂದು ಚುನಾವಣೆ ಎದುರಿಸಲಿರುವ ಗುಜರಾತ್ ನಲ್ಲಿ ರಾಹುಲ್ ಗಾಂಧಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಅವರು ಗುಜರಾತ್ ನಲ್ಲಿ ರ್ಯಾಲಿ, ರೋಡ್ ಶೋ ಗಳಲ್ಲಿ ಭಾಗವಹಿಸಲಿದ್ದಾರೆ. 35 ಕ್ಷೇತ್ರಗಳಲ್ಲಿ ಈ ಚುನಾವಣಾ ಪ್ರಚಾರ ನಡೆಯಲಿದೆ.
ಇಂದು ಬೊರುಚ್ ನಲ್ಲಿ ಮೊದಲಿಗೆ ನವಸರ್ಜನ್ ಯಾತ್ರೆಯಲ್ಲಿ ಭಾಗವಹಿಸಿದ ರಾಹುಲ್ ಗಾಂಧಿ ಬಿಜೆಪಿಯ ಗುಜರಾತ್ ಅಭಿವೃದ್ಧಿಯನ್ನು ತರಾಟೆಗೆ ತೆಗೆದುಕೊಂಡರು. ನಂತರ ರೋಡ್ ಶೋ ನಲ್ಲಿ ಭಾಗವಹಿಸಿದರು.
ಈ ರ್ಯಾಲಿ, ರೋಡ್ ಶೋಗಳು ಹೆಚ್ಚಾಗಿ ಬುಡಕಟ್ಟು ಜನಾಂಗಗಳು ವಾಸಿಸುವ ಪ್ರದೇಶಗಳಲ್ಲೇ ನಡೆಯಲಿದೆ. ಇಲ್ಲಿಯವರೆಗೆ ಗುಜರಾತಿನ ಬುಡಕಟ್ಟು ಜನಾಂಗಗಳು ಕಾಂಗ್ರೆಸ್ ಗೆ ತಮ್ಮ ನಿಷ್ಠೆಯನ್ನು ತೋರಿಸುತ್ತಾ ಬಂದಿರುವುದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications