ಕೋವಿಡ್ - 19 ಕರ್ತವ್ಯ; ವಿಶೇಷ ಅನುದಾನಕ್ಕೆ ಸಿಆರ್ಪಿಎಫ್ ಬೇಡಿಕೆ
ನವದೆಹಲಿ, ಮೇ 08 : ಕೋವಿಡ್ - 19 ಕರ್ತವ್ಯದಲ್ಲಿದ್ದಾಗ ಸಿಆರ್ಪಿಎಫ್ ಸಿಬ್ಬಂದಿ ಮೃತಪಟ್ಟರೆ 50 ಲಕ್ಷ ವಿಶೇಷ ಅನುದಾನ ನೀಡಬೇಕು ಎಂದು ಕೇಂದ್ರ ಗೃಹ ಇಲಾಖೆಗೆ ಮನವಿ ಮಾಡಲಾಗಿದೆ. ವಿವಿಧ ರಾಜ್ಯಗಳಲ್ಲಿ ಸಿಆರ್ಪಿಎಫ್ ಸಿಬ್ಬಂದಿ ಕರ್ತವ್ಯದಲ್ಲಿದ್ದಾರೆ.
ಕೇಂದ್ರೀಯ ಮೀಸಲು ಪೊಲೀಸ್ ಪಡೆಯು (ಸಿಆರ್ಪಿಎಫ್) ಗೃಹ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇಶದ ಬಹುದೊಡ್ಡ ಪಡೆಯಾಗಿದೆ. ಸಿಎಆರ್ಪಿಎಫ್ನಲ್ಲಿ ಸುಮಾರು 3.25 ಲಕ್ಷ ಸಿಬ್ಬಂದಿಗಳು ಇದ್ದಾರೆ.
ದೇಶದ ವಿವಿಧ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಿಆರ್ಪಿಎಫ್ ಪಡೆಯನ್ನು ನಿಯೋಜನೆ ಮಾಡಲಾಗುತ್ತದೆ. ಈಗ ಕೊರೊನಾ ವಿರುದ್ಧದ ಹೋರಾಟದ ಸಂದರ್ಭದಲ್ಲಿಯೂ ಪಡೆಗಳನ್ನು ರಾಜ್ಯಗಳಲ್ಲಿ ನಿಯೋಜಿಸಲಾಗಿದೆ.

ಸಿಆರ್ಪಿಎಫ್ ಮುಖ್ಯಸ್ಥ ಎ. ಪಿ. ಮಹೇಶ್ವರಿ ಅವರು ಆರೋಗ್ಯ ಮತ್ತು ಸ್ವಚ್ಛತಾ ಕಾರ್ಮಿಕರಿಗೆ ಘೋಷಣೆ ಮಾಡಿದಂತೆ ಸಿಆರ್ಪಿಎಫ್ ಸಿಬ್ಬಂದಿಯೂ ಕೋವಿಡ್ - 19 ಕರ್ತವ್ಯದಲ್ಲಿರುವಾಗ ಮೃತಪಟ್ಟರೆ 50 ಲಕ್ಷ ಅನುದಾನ ನೀಡಬೇಕು ಎಂದು ಗೃಹ ಇಲಾಖೆಗೆ ಮನವಿ ಮಾಡಿದ್ದಾರೆ.
ವಿವಿಧ ರಾಜ್ಯಗಳಲ್ಲಿ ಸಿಆರ್ಪಿಎಫ್ ಪಡೆಗಳನ್ನು ಕಾನೂನು ಸುವ್ಯವಸ್ಥೆ ಕಾಪಾಡಲು ನಿಯೋಜನೆ ಮಾಡಲಾಗಿದೆ. ಅದರಲ್ಲಿಯೂ ಕೊರೊನಾ ಹಾಟ್ ಸ್ಪಾಟ್ಗಳಲ್ಲಿಯೂ ಸಿಬ್ಬಂದಿ ಕರ್ತವ್ಯದಲ್ಲಿದ್ದಾರೆ. ಆದ್ದರಿಂದ, ಗೃಹ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.
ಗೃಹ ಇಲಾಖೆಯಡಿ ಬರುವ ವಿವಿಧ ಪಡೆಗಳ ಐವರು ಸಿಬ್ಬಂದಿಗಳು ಈಗಾಗಲೇ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಇಬ್ಬರು ಬಿಎಸ್ಎಫ್ ಸಿಬ್ಬಂದಿ, ಒಬ್ಬರು ಸಿಆರ್ಪಿಎಫ್ ಸಿಬ್ಬಂದಿ ಮತ್ತು ಸಿಎಐಎಸ್ಎಫ್ ಮತ್ತು ದೆಹಲಿ ಪೊಲೀಸ್ನ ಇಬ್ಬರು ಸಿಬ್ಬಂದಿಗಳು ಕೋವಿಡ್ - 19 ಕರ್ತವ್ಯದಲ್ಲಿದ್ದಾಗ ಮೃತಪಟ್ಟಿದ್ದಾರೆ.
ಕೋವಿಡ್ - 19 ಕರ್ತವ್ಯ ನಿರ್ವಹಣೆ ಮಾಡುವಾಗ ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ, ಅನಾರೋಗ್ಯ ಉಂಟಾದರೆ ವೈದ್ಯರನ್ನು ಭೇಟಿಯಾಗಿ ಎಂದು ಸಿಆರ್ಪಿಎಫ್ ಮುಖ್ಯಸ್ಥ ಎ. ಪಿ. ಮಹೇಶ್ವರಿ ಸಿಬ್ಬಂದಿಗಳಿಗೆ ಸಂದೇಶ ಕಳಿಸಿದ್ದಾರೆ.












Click it and Unblock the Notifications