The Kerala Story: ಮಧ್ಯಪ್ರದೇಶ ಆಯ್ತು, ಇದೀಗ ಉತ್ತರಪ್ರದೇಶದಲ್ಲಿ 'ದಿ ಕೇರಳ ಸ್ಟೋರಿ'ಗೆ ತೆರಿಗೆ ಮುಕ್ತ
ಉತ್ತರಪ್ರದೇಶ ರಾಜ್ಯ ಸರ್ಕಾರವು ಇತ್ತೀಚೆಗೆ ಬಿಡುಗಡೆಯಾದ ನೈಜ ಘಟನೆ ಆಧಾರಿತ 'ದಿ ಕೇರಳ ಸ್ಟೋರಿ' ಸಿನಿಮಾಗೆ ರಾಜ್ಯದಲ್ಲಿ ತೆರಿಗೆ ಮುಕ್ತ ಎಂದು ಘೋಷಿಸಿದೆ. ಇದನ್ನು ಖುದ್ದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳವಾರ ಖಚಿತಪಡಿಸಿದ್ದಾರೆ.
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಲೋಕಭವನದಲ್ಲಿ ಆಯೋಜಿಸಲಾಗಿರುವ ವಿಶೇಷ ಪ್ರದರ್ಶನದಲ್ಲಿ ದಿ ಕೇರಳ ಸ್ಟೋರಿ ಸಿನಿಮಾವನ್ನು ವೀಕ್ಷಿಸಲಿದ್ದಾರೆ ಎಂದು ಮುಖ್ಯಮಂತ್ರಿಗಳ ಸಚಿವಾಲಯ ತಿಳಿಸಿದೆ.

ಕಳೆದ ವರ್ಷ ಉತ್ತರಪ್ರದೇಶದಲ್ಲಿ ಅಕ್ಷಯ್ ಕುಮಾರ್ ಅಭಿನಯದ 'ಸಾಮ್ರಾಟ್ ಪೃಥ್ವಿರಾಜ್' ಚಲನಚಿತ್ರವನ್ನು ತೆರಿಗೆ ಮುಕ್ತ ಎಂದು ಘೋಷಿಸಿದ ನಂತರ ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಿಶೇಷ ಪ್ರದರ್ಶನದಲ್ಲಿ ಚಿತ್ರವನ್ನು ವೀಕ್ಷಿಸಿದ್ದರು.
ಉತ್ತರಪ್ರದೇಶ ಬಿಜೆಪಿ ಕಾರ್ಯದರ್ಶಿ ರಾಘವೇಂದ್ರ ಮಿಶ್ರಾ ಅವರು ಇತ್ತೀಚೆಗೆ ಲಕ್ನೋದಲ್ಲಿ 100 ವಿದ್ಯಾರ್ಥಿನಿಯರಿಗೆ ದಿ ಕೇರಳ ಸ್ಟೋರಿ ಚಿತ್ರವನ್ನು ತೋರಿಸಿದ್ದರು. ವಿವಾದಾತ್ಮಕ ಚಲನಚಿತ್ರವನ್ನು 'ತೆರಿಗೆ ಮುಕ್ತ' ಮಾಡಿದ ಎರಡನೇ ರಾಜ್ಯ ಉತ್ತರಪ್ರದೇಶವಾಗಿದೆ. ಇದಕ್ಕೂ ಮುನ್ನ ಮಧ್ಯಪ್ರದೇಶದಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ತೆರಿಗೆ ಮುಕ್ತ ಎಂದು ತಿಳಿಸಿದ್ದಾರೆ.
"ಲವ್ ಜಿಹಾದ್ನ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುವ ಹೆಣ್ಣುಮಕ್ಕ ಜೀವನ ಹೇಗೆ ನಾಶವಾಗುತ್ತದೆ ಎಂಬುದನ್ನು ಚಿತ್ರ ತೋರಿಸುತ್ತದೆ. ಇದು ಭಯೋತ್ಪಾದನೆಯ ವ್ಯಾಪ್ತಿಯನ್ನು ಸಹ ಬಹಿರಂಗಪಡಿಸುತ್ತದೆ," ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
"ನಾವು ಈಗಾಗಲೇ ಬಲವಂತದ ಮತಾಂತರದ ವಿರುದ್ಧ ಕಾನೂನನ್ನು ತಂದಿದ್ದೇವೆ. ದಿ ಕೇರಳ ಸ್ಟೋರಿ ಚಲನಚಿತ್ರವು ಮತಾಂತರ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುತ್ತದೆ. ಈ ಚಿತ್ರವನ್ನು ಎಲ್ಲರೂ ವೀಕ್ಷಿಸಬೇಕು ಮತ್ತು ಅದಕ್ಕಾಗಿಯೇ ಮಧ್ಯಪ್ರದೇಶ ಸರ್ಕಾರವು ಚಲನಚಿತ್ರವನ್ನು ತೆರಿಗೆ ಮುಕ್ತ ಎಂದು ಘೋಷಿಸುತ್ತಿದೆ," ಎಂದು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.
ಈ ಚಿತ್ರಕ್ಕೆ ಭಾರತೀಯ ಜನತಾ ಪಕ್ಷದಿಂದ ಬೆಂಬಲ ಸಿಕ್ಕಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಚುನಾವಣಾ ಸಮಾವೇಶದಲ್ಲಿ ಇದನ್ನು ಹೊಗಳಿದ್ದರು.
"ದಿ ಕೇರಳ ಸ್ಟೋರಿ ಸಿನಿಮಾ ಸಮಾಜದಲ್ಲಿನ ಭಯೋತ್ಪಾದನೆಯ ಪರಿಣಾಮಗಳನ್ನು ಬಹಿರಂಗಪಡಿಸಲು ಪ್ರಯತ್ನಿಸುತ್ತಿದೆ. ವಿಶೇಷವಾಗಿ ಕೇರಳದಂತಹ ಕಠಿಣ ಪರಿಶ್ರಮಿ, ಪ್ರತಿಭಾವಂತ ಮತ್ತು ಬುದ್ಧಿಜೀವಿಗಳ ಸುಂದರ ನಾಡಿನಲ್ಲಿ. ಕಾಂಗ್ರೆಸ್ ಪಕ್ಷವು ಈಗ ಚಲನಚಿತ್ರವನ್ನು ನಿಷೇಧಿಸಲು ಮತ್ತು ಭಯೋತ್ಪಾದಕ ಅಂಶಗಳನ್ನು ಬೆಂಬಲಿಸಲು ಪ್ರಯತ್ನಿಸುತ್ತಿದೆ," ಎಂದು ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದರು.
ಭಯೋತ್ಪಾದಕ ಗುಂಪು ಇಸ್ಲಾಮಿಕ್ ಸ್ಟೇಟ್ನಿಂದ ನೇಮಕಗೊಳ್ಳುವ ಮೊದಲು ಯುವತಿಯರ ಬಲವಂತದ ಮತಾಂತರವನ್ನು ತಿಳಿಸುವ ಈ ಸಿನಿಮಾ ಈಗಾಗಲೇ ದೇಶಾದ್ಯಂತ ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿದೆ. ಪಶ್ಚಿಮ ಬಂಗಾಳ ಸರ್ಕಾರ ಸೋಮವಾರ ಸುದೀಪ್ತೋ ಸೇನ್ ನಿರ್ದೇಶನದ ದಿ ಕೇರಳ ಸ್ಟೋರಿ ಸಿನಿಮಾವನ್ನು ನಿಷೇಧಿಸಿದೆ.
"ಯಾವುದೇ ದ್ವೇಷ ಮತ್ತು ಹಿಂಸಾಚಾರದ ಘಟನೆಗಳನ್ನು ತಪ್ಪಿಸಲು ಮತ್ತು ರಾಜ್ಯದಲ್ಲಿ ಶಾಂತಿಯನ್ನು ಕಾಪಾಡಲು ಪಶ್ಚಿಮ ಬಂಗಾಳ ಸರ್ಕಾರ ದಿ ಕೇರಳ ಸ್ಟೋರಿ ಸಿನಿಮಾವನ್ನು ನಿಷೇಧಿಸಲು ನಿರ್ಧರಿಸಿದೆ," ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.












Click it and Unblock the Notifications