ಭಾನುವಾರ ಕೇಂದ್ರ ಸಚಿವ ಸಂಪುಟ ವಿಸ್ತರಣೆ; ಎಐಎಡಿಎಂಕೆಗೆ ನಿರಾಸೆ
ಕೇಂದ್ರ ಸಚಿವ ಸಂಪುಟ ಸೆಪ್ಟಂಬರ್ 3ರಂದು ವಿಸ್ತರಣೆ. ಜೆಡಿಯುನ ಸಂಸದರಿಗೆ ಅವಕಾಶ ಸಿಗುವ ಸಾಧ್ಯತೆ.
ನವದೆಹಲಿ, ಆಗಸ್ಟ್ 1: ಬಹು ನಿರೀಕ್ಷಿತ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಭಾನುವಾರ (ಸೆಪ್ಟಂಬರ್ 3ರಂದು) ನಡೆಯಲಿದೆ. ಅಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಪ್ರಮಾಣ ವಚನ ಸಮಾರಂಭದಲ್ಲಿ ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದು ಮೂರನೇ ಬಾರಿ ಸಂಪುಟ ವಿಸ್ತರಣೆ ಮಾಡಲಾಗುತ್ತಿದೆ.
ಸಂಪುಟದಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ ಸೇರಿರುವ ಜೆಡಿ (ಯು) ಪಕ್ಷದ ಕೆಲವು ಸಂಸದರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ದೊರೆಯುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ, ಅವರ ಹೆಸರುಗಳು ಬಹಿರಂಗಗೊಂಡಿಲ್ಲ.

ಸಂಪುಟ ಪುನಾರಾಚನೆ ಹಿನ್ನೆಲೆಯಲ್ಲಿ ಸುಮಾರು 13 ಸಚಿವರು ಗುರುವಾರ ತಮ್ಮ ಸ್ಥಾನಗಳಿಗೆ ರಾಜಿನಾಮೆ ಸಲ್ಲಿಸಿದ್ದಾರೆ.
ಇನ್ನು ತಮಿಳುನಾಡಿನ ಆಡಳಿತಾರೂಢ ಪಕ್ಷವಾದ ಎಐಎಡಿಎಂಕೆಯ ಇಬ್ಬರು ಸಂಸದರಿಗೆ ಸಂಪುಟದಲ್ಲಿ ಸ್ಥಾನ ಸಿಗುವ ನಿರೀಕ್ಷೆ ಹುಸಿಯಾಗಿದೆ ಎಂದು ಕೆಲ ಮೂಲಗಳು ತಿಳಿಸಿವೆ. ಆ ಪಕ್ಷದ ತಂಬಿ ದೊರೈ ಹಾಗೂ ಕೆ. ವೇಣುಗೋಪಾಲ್ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಈ ನಿರ್ಧಾರದಿಂದ ಬಿಜೆಪಿ ಹಿಂದೆ ಸರಿದಿದೆ ಎಂದು ಹೇಳಲಾಗಿದೆ.
ಸದ್ಯಕ್ಕೆ ಮೋದಿ ಸಂಪುಟದಲ್ಲಿ ಅರುಣ್ ಜೇಟ್ಲಿ ಹಾಗೂ ಹರ್ಷವರ್ದನ್ ಅವರು ಹೆಚ್ಚಿನ ಖಾತೆಗಳನ್ನು ನಿಭಾಯಿಸುತ್ತಿದ್ದು ಅವರ ಭಾರವನ್ನು ತಗ್ಗಿಸಲು ಸಂಪುಟ ವಿಸ್ತರಣೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.












Click it and Unblock the Notifications