Jammu and Kashmir Election: ಮೂರನೇ ಹಂತದ ಚುನಾವಣೆ; ಬಹಿರಂಗ ಪ್ರಚಾರಕ್ಕೆ ಇಂದು ತೆರೆ
ಜಮ್ಮು ಮತ್ತು ಕಾಶ್ಮೀರದಲ್ಲಿ ದಶಕದ ಬಳಿಕ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಅಕ್ಟೋಬರ್ 1 ರಂದು ಮೂರನೇ ಮತ್ತು ಕೊನೆಯ ಹಂತದ ಮತದಾನ ನಡೆಯಲಿದೆ. ಕೊನೆಯ ಹಂತದ ಚುನಾವಣೆಗೆ ಮೊದಲು ಎಲ್ಲಾ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿವೆ, ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ನಾಳೆಯಿಂದ ಮನೆ ಮನೆ ಪ್ರಚಾರ ನಡೆಸಲಿವೆ. ಮೊದಲ ಎರಡು ಹಂತದ ಚುನಾವಣೆಗಳು ಶಾಂತಿಯುತವಾಗಿ ನಡೆದಿದ್ದು, ಕೊನೆಯ ಹಂತದ ಚುನಾವಣೆ ಕೂಡ ಶಾಂತಿಯುತವಾಗಿ ನಡೆಸಲು ಬಿಗಿ ಬಂದೋಬಸ್ತ್ ಮಾಡಿಕೊಳ್ಳಲಾಗುತ್ತಿದೆ.
ಮೊದಲ ಹಂತದ ಚುನಾವಣೆ ಸೆಪ್ಟೆಂಬರ್ 18 ರಂದು ನಡೆದಿದ್ದು, ಮೊದಲ ಹಂತದಲ್ಲಿ 24 ಕ್ಷೇತ್ರಗಳಲ್ಲಿ ಚುನಾವಣೆ ನಡೆದರೆ, ಸಪ್ಟೆಂಬರ್ 25ರಂದು ನಡೆದಿದ್ದ ಎರಡನೇ ಹಂತದ ಚುನಾವಣೆಯಲ್ಲಿ 26 ಕ್ಷೇತ್ರಗಳಲ್ಲಿ ಮತದಾರರು ಹಕ್ಕು ಚಲಾಯಿಸಿದ್ದರು. ಇದೀಗ ಕೊನೆಯ ಹಂತದ ಚುನಾವಣೆಯಲ್ಲಿ 40 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಮೂರನೇ ಹಂತದಲ್ಲಿ 40 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಇದರಲ್ಲಿ 24 ಕ್ಷೇತ್ರಗಳು ಜಮ್ಮು ವಿಭಾಗದಲ್ಲಿ ಬರುವ ಕಾರಣ ಬಿಜೆಪಿ ಹೆಚ್ಚು ಉತ್ಸುಕವಾಗಿದೆ. ಜಮ್ಮು ವಿಭಾಗದಲ್ಲಿ ಬಿಜೆಪಿ ಹೆಚ್ಚಿನ ಸಂಖ್ಯೆಯ ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇರುವುದರಿಂದ, ಶನಿವಾರ ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರಚಾರ ನಡೆಸಿದ್ದರು.
ಕಾಂಗ್ರೆಸ್ನಿಂದ ಕೂಡ ಪ್ರಚಾರ
ಬಹಿರಂಗ ಚುನಾವಣೆ ಇಂದಿಗೆ ಅಂತ್ಯವಾಗುವ ಕಾರಣ ಕಾಂಗ್ರೆಸ್ ಕೂಡ ಭಾನುವಾರ ಬರ್ಜರಿ ಪ್ರಚಾರ ನಡೆಸಲಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ಸಚಿನ್ ಪೈಲಟ್ ಭಾನುವಾರ ಹಲವು ಕಡೆಗಳಲ್ಲಿ ನಡೆಯುವ ಇಂಡಿಯ ಒಕ್ಕೂಟದ ರ್ಯಾಲಿಗಳಲ್ಲಿ ಭಾಗವಹಿಸಲಿದ್ದು, ಅಭ್ಯರ್ಥಿಗಳ ಮತಯಾಚನೆ ಮಾಡಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಜಸ್ರೋಟಾ ಮತ್ತು ರಾಮನಗರದಲ್ಲಿ ನಡೆಯುವ ರ್ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ.
ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಉಧಮ್ಪುರ ಪಶ್ಚಿಮ, ಬಾನಿ ಮತ್ತು ನಗ್ರೋಟಾ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಚುನಾವಣಾ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಈ ಕ್ಷೇತ್ರಗಳನ್ನು ಕಾಂಗ್ರೆಸ್ನ ಭದ್ರಕೋಟೆ ಎಂದೇ ಬಿಂಬಿಸಲಾಗಿದ್ದು, ಅಭ್ಯರ್ಥಿಗಳು ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ.
ಕಾಂಗ್ರೆಸ್ನ ನಾಯಕಿ ಪ್ರಿಯಾಂಗಾ ಗಾಂಧಿ ಕೂಡ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಶನಿವಾರ ಬಿಲ್ಲವರ್ ಮತ್ತು ಬಿಷ್ನಾದಲ್ಲಿ ನಡೆದ ಸಭೆಗಳಲ್ಲಿ ಭಾಗವಹಿಸಿ ಮಾತನಾಡಿ, 10 ವರ್ಷಗಳಲ್ಲಿ ಬಿಜೆಪಿ ಆಡಳಿತದ ಅವದೀಯಲ್ಲಿ ಜಮ್ಮು ಮತ್ತು ಕಾಶ್ಮೀರ ಹೊಸ ಬಿಕ್ಕಟ್ಟಿಗೆ ಸಿಲುಕಿದೆ ಎಂದು ಹೇಳಿದರು. ಬಿಜೆಪಿಯ ಹೊಸ ಕಾಶ್ಮೀರ ಘೋಷಣೆಯನ್ನು ಟೀಕಿಸಿದರು.
ರಾಜ್ಯದ ಸ್ಥಾನಮಾನ ನೀಡುವ ಭರವಸೆ
ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿ ಪ್ರಕಾರ ನೀಡಲಾಗಿದ್ದು ವಿಶೇಷ ಸ್ಥಾನಮಾನಗಳನ್ನು ರದ್ದು ಮಾಡಿದ್ದು, ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿದೆ. ಅಧಿಕಾರಕ್ಕೆ ಬಂದರೆ ಮತ್ತೆ ರಾಜ್ಯದ ಸ್ಥಾನಮಾನ ಸಿಗುವಂತೆ ಮಾಡಲಾಗುವುದು ಎಂದು ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ.
ಶನಿವಾರ ಜಮ್ಮುವಿನಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ದೇಶದ ಸೈನಿಕರ ತ್ಯಾಗವನ್ನು ಕಾಂಗ್ರೆಸ್ ಅವಮಾನಿಸಿದೆ ಎಂದು ಟೀಕಿಸಿದರೆ. ಗಡಿಯಾಚೆಯಿಂದ ಭಾರತದ ಮೇಲೆ ದಾಳಿ ಮಾಡಿದಾಗ ಕಾಂಗ್ರೆಸ್ ಶಾಂತಿ ಮಂತ್ರ ಪಠಿಸುತ್ತಿದೆ ಎಂದು ಹೇಳಿದರು.












Click it and Unblock the Notifications