ಪೌರತ್ವ ತಿದ್ದುಪಡಿ ಹೋರಾಟ; ಅಸ್ಸಾಂ ಪ್ರವಾಸೋದ್ಯಮಕ್ಕೆ ನಷ್ಟ
ನವದೆಹಲಿ, ಜನವರಿ 01 : ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಸ್ಸಾಂನಲ್ಲಿ ಬೃಹತ್ ಹೋರಾಟ ನಡೆದಿತ್ತು. ಈ ಹಿಂಸಾತ್ಮಕ ಪ್ರತಿಭಟನೆ ರಾಜ್ಯದ ಪ್ರವಾಸೋದ್ಯಮಕ್ಕೆ ಪೆಟ್ಟು ನೀಡಿದೆ. ಇದರಿಂದಾಗಿ ಸುಮಾರು 1000 ಕೋಟಿ ರೂ. ನಷ್ಟ ಉಂಟಾಗಿದೆ.
ಅಸ್ಸಾಂ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಈ ಕುರಿತು ಮಾಹಿತಿ ನೀಡಿದೆ. 2019ರ ಡಿಸೆಂಬರ್ 11ರಿಂದ ಅಸ್ಸಾಂ ರಾಜ್ಯದ ವಿವಿಧ ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ಇದರಿಂದಾಗಿ ಪ್ರವಾಸಿಗರು ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಾರೆ.
ರಾಜ್ಯಕ್ಕೆ ಅಮೆರಿಕ, ಯುಎಇ, ಕೆನಡಾ, ಆಸ್ಟ್ರೇಲಿಯಾ, ಫ್ರಾನ್ಸ್, ಇಸ್ರೇಲ್, ರಷ್ಯಾ, ಸಿಂಗಾಪುರ ಸೇರಿದಂತೆ ವಿವಿಧ ದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ಈಗ ಪ್ರತಿಭಟನೆ ಕಾರಣದಿಂದಾಗಿ ಡಿಸೆಂಬರ್ನಿಂದ ಮಾರ್ಚ್ ತನಕ ಬುಕ್ಕಿಂಗ್ ಕ್ಯಾನ್ಸಲ್ ಆಗಿದೆ.

ಅಸ್ಸಾಂ ರಾಜ್ಯಕ್ಕೆ ಶೇ 50ರಷ್ಟು ಪ್ರವಾಸಿಗರು ಡಿಸೆಂಬರ್ನಿಂದ ಮಾರ್ಚ್ ತನಕ ಆಗಮಿಸುತ್ತಾರೆ. ಡಿಸೆಂಬರ್, ಜನವರಿ ತಿಂಗಳಿನಲ್ಲಿ ರಾಜ್ಯದ ಪ್ರವಾಸೋದ್ಯಮಕ್ಕೆ ನೂರು ಕೋಟಿ ರೂ. ನಷ್ಟ ಉಂಟಾಗಿದೆ. ಪೌರತ್ವ ತಿದ್ದುಪಡಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಅಪಾರವಾದ ನಷ್ಟ ಉಂಟಾಗಿದೆ.
ಸಿಎಎ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಇದುವರೆಗೂ 5 ಜನರು ಮೃತಪಟ್ಟಿದ್ದಾರೆ. ಸರ್ಕಾರ ಇಂಟರ್ ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿ ರಾಜ್ಯದಲ್ಲಿ ಪ್ರತಿಭಟನೆಯನ್ನು ತಡೆಯಲು ಪ್ರಯತ್ನ ನಡೆಸಿತ್ತು. ಪ್ರತಿಭಟನೆ ಹಿಂಸಾರೂಪ ಪಡೆದಿದ್ದರಿಂದ ಪ್ರವಾಸಿಗರು ರಾಜ್ಯಕ್ಕೆ ಆಗಮಿಸಿಲ್ಲ.
2018-19ನೇ ಸಾಲಿನಲ್ಲಿ 60 ಲಕ್ಷ ದೇಶಿಯ, 41, 000 ವಿದೇಶಿ ಪ್ರವಾಸಿಗರು ಅಸ್ಸಾಂಗೆ ಭೇಟಿ ನೀಡಿದ್ದಾರೆ. ಈ ವರ್ಷ 65 ಲಕ್ಷ ದೇಶಿಯ 50,000 ವಿದೇಶಿ ಪ್ರವಾಸಿಗರು ಭೇಟಿ ನೀಡುವ ನಿರೀಕ್ಷೆ ಇದೆ. ಪ್ರವಾಸೋದ್ಯಮವನ್ನು ಅವಲಂಬಿಸಿ ನೂರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ.












Click it and Unblock the Notifications