ಮಮತಾ ವಿರುದ್ಧ ಮಾಡಿದ್ದ ಹಳೆಯ ಟ್ವೀಟ್ ಮರೆತರೇ ರಾಹುಲ್?
Recommended Video

ನವದೆಹಲಿ, ಫೆಬ್ರವರಿ 5: ಶಾರದಾ ಚಿಟ್ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರನ್ನು ಬಂಧಿಸಲು ಹೋದ ಸಿಬಿಐ ಅಧಿಕಾರಿಗಳನ್ನೇ ಕೋಲ್ಕತಾ ಪೊಲೀಸರು ಬಂಧಿಸಿದ ಘಟನೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಧರಣಿ ನಡೆಸುತ್ತಿರುವ ಮಮತಾ ಅವರ ಹೋರಾಟಕ್ಕೆ ಹೆಗಲು ನೀಡುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ.
ಆದರೆ, ರಾಹುಲ್ ಅವರದು ಢೋಂಗಿತನದ ಬೆಂಬಲ ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೆ ಅದು ರಾಹುಲ್ ಗಾಂಧಿ ಅವರ 'ಯೂ ಟರ್ನ್' ಹೇಳಿಕೆಯನ್ನು ನೆನಪಿಸಿದೆ. ಅಲ್ಲದೆ, ರಾಹುಲ್ ಗಾಂಧಿ ಮಲ್ಟಿಪಲ್ ಪರ್ಸನಾಲಿಟಿ ಡಿಸಾರ್ಡರ್ ಇಂದ ಬಳಲುತ್ತಿದ್ದಾರೆ ಎಂದೂ ಬಿಜೆಪಿ ಲೇವಡಿ ಮಾಡಿದೆ.
ರಾಹುಲ್ ಗಾಂಧಿ ಇದೇ ಹಗರಣಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ವಿರುದ್ಧ ಅನೇಕ ಬಾರಿ ಆರೋಪ ಮಾಡಿದ್ದರು. ಅವರ ಹೇಳಿಕೆಗಳನ್ನು ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಆದರೆ, ಅದೇ ಟ್ವೀಟ್ಗಳು ಈಗ ಮಮತಾ ಪರ ಬ್ಯಾಟಿಂಗ್ ಮಾಡುತ್ತಿರುವ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧದ ದಾಳವಾಗಿ ಪರಿಣಮಿಸಿದೆ.
2016ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಆಡಿದ್ದ ಮಾತುಗಳನ್ನು ಕಾಂಗ್ರೆಸ್ ಐಟಿ ವಿಭಾಗ ಟ್ವೀಟ್ ಮಾಡಿತ್ತು. ಅವುಗಳನ್ನು ಬಿಜೆಪಿ ಕೆದಕಿ ಹೊರತೆಗೆದಿದೆ.
|
ರಾಹುಲ್, ಬೇಗ ಹುಷಾರಾಗಿ!
'ಮಲ್ಟಿಪಲ್ ಪರ್ಸನಾಲಿಟಿ ಡಿಸಾರ್ಡರ್ ಎನ್ನುವುದು ಒಬ್ಬ ವ್ಯಕ್ತಿಯು ಕನಿಷ್ಠ ಎರಡು ವಿಭಿನ್ನ ಮತ್ತು ನಿರಂತರ ವ್ಯಕ್ತಿತ್ವಗಳ ಸ್ಥಿತಿ. ಇದರಲ್ಲಿ ಸಹಜ ಸಾಮಾನ್ಯವಾದ ಮರೆಗುಳಿತನದಾಚೆ ಕೆಲವು ಘಟನೆಗಳನ್ನು ನೆನಪಿಟ್ಟುಕೊಳ್ಳುವುದಕ್ಕೆ ಸಮಸ್ಯೆಗಳಾಗುತ್ತವೆ. ಈ ಸ್ಥಿತಿ ವ್ಯಕ್ತಿಯ ವಿಭಿನ್ನ ವರ್ತನೆಗಳನ್ನು ತೋರಿಸುತ್ತಿರುತ್ತವೆ. ಬೇಗನೆ ಹುಷಾರಾಗಿ ರಾಹುಲ್ ಜಿ' ಎಂದು ಕಾಂಗ್ರೆಸ್ನ ಹಳೆಯ ಟ್ವೀಟ್ಗಳನ್ನು ಹಂಚಿಕೊಂಡು ಬಿಜೆಪಿ ಟ್ವೀಟ್ ಮಾಡಿದೆ.
2014ರ ಮೇ 8ರಂದು ಮಾತನಾಡಿದ್ದ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳದಲ್ಲಿ ಚಿಟ್ ಫಂಡ್ ಹಗರಣದಲ್ಲಿ 20 ಲಕ್ಷ ಜನರು ತಮ್ಮ ಹಣ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದ್ದರು.

ಒಂದೇ ಒಂದು ಮಾತಾಡಿಲ್ಲ
ಎರಡು ವರ್ಷದ ಬಳಿಕ 2016ರ ಏಪ್ರಿಲ್ 2ರಂದು ಮಮತಾ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್, 'ಶಾರದಾ ಹಗರಣ ಘಟಿಸಿದೆ. ಇದು ದೇಶದ ಅತಿ ದೊಡ್ಡ ಹಗರಣಗಳಲ್ಲಿ ಒಂದು. ಆದರೂ ಮಮತಾ ಈ ಬಗ್ಗೆ ಒಂದೇ ಒಂದು ಮಾತನ್ನಾಡಿಲ್ಲ' ಎಂದು ಆರೋಪಿಸಿದ್ದರು.
|
ಲೂಟಿ ಕೋರರನ್ನು ರಕ್ಷಿಸುತ್ತಿದ್ದಾರೆ
2016ರ ಏಪ್ರಿಲ್ 19ರಂದು ಕಾಂಗ್ರೆಸ್ ಮಾಡಿದ್ದ ಮತ್ತೊಂದು ಟ್ವೀಟ್ ಅನ್ನು ಬಿಜೆಪಿ ಹಂಚಿಕೊಂಡಿದೆ. 'ಮಮತಾಜಿ ಹೇಳಿದ್ದರು ತಾನು ಭ್ರಷ್ಟಾಚಾರವನ್ನು ತಡೆಗಟ್ಟುತ್ತೇನೆ ಎಂದು. ಆದರೆ, ಕ್ರಮ ತೆಗೆದುಕೊಳ್ಳುವುದರ ಬದಲು ಅವರು ಬಂಗಾಳವನ್ನು ಲೂಟಿ ಮಾಡುತ್ತಿರುವವರನ್ನು ರಕ್ಷಿಸುತ್ತಿದ್ದಾರೆ' ಎಂದು ರಾಹುಲ್ ವಾಗ್ದಾಳಿ ನಡೆಸಿದ್ದರು.

ಮಾಫಿಯಾ ರಾಜ್
ಏಪ್ರಿಲ್ 23ರಂದು ಮಾಡಿದ ಮತ್ತೊಂದು ಟ್ವೀಟ್ನಲ್ಲಿ, 'ಪಶ್ಚಿಮ ಬಂಗಾಳದಲ್ಲಿ ಸಿಂಡಿಕೇಟ್ ರಾಜ್ ಇದೆ... ಮಾಫಿಯಾ ರಾಜ್' ಎಂದು ಬರೆಯಲಾಗಿತ್ತು. ಈ ಹೇಳಿಕೆಗಳೆಲ್ಲವೂ ಅವರು 2016ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ವೇಳೆ ಆಡಿದ್ದ ಮಾತುಗಳಾಗಿದ್ದವು.












Click it and Unblock the Notifications