ಗೋವಾ: ಉದ್ಯೋಗ ಸೃಷ್ಠಿಯೇ ಬಿಜೆಪಿ ಪ್ರಣಾಳಿಕೆಯ ಮಂತ್ರ
ಚುನಾವಣೆಗೆ ಇನ್ನೇನು ಐದೇ ದಿನಗಳಿರುವಾಗ ಬಿಜೆಪಿ ಗೋವಾದಲ್ಲಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಉದ್ಯೋಗ ಸೃಷ್ಟಿ ಮತ್ತು ಪ್ರವಾಸೋದ್ಯಮ ಅಭಿವೃದ್ದಿಗೆ ಪ್ರಣಾಳಿಕೆಯಲ್ಲಿ ಒತ್ತು ನೀಡಲಾಗಿದೆ.
ಪಣಜಿ, ಜನವರಿ 30: ಗೋವಾ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಉದ್ಯೋಗ ಸೃಷ್ಟಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಪ್ರಣಾಳಿಕೆಯ ಪ್ರಮುಖ ಅಂಶಗಳಾಗಿವೆ. ಕ್ಯಾಸಿನೋಗಳ ಮುಚ್ಚುವಿಕೆ ಮತ್ತು ಗಣಿ ಉದ್ಯಮದ ಬಗ್ಗೆ ಮಾತ್ರ ಪ್ರಣಾಳಿಕೆಯಲ್ಲಿ ಮೌನ ವಹಿಸಲಾಗಿದೆ.
ಗೋವಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೋಮವಾರ ಬಿಡುಗಡೆ ಮಾಡಿದರು.
ಎಎಪಿ ಮತ್ತು ಕಾಂಗ್ರೆಸ್ ಕ್ಯಾಸಿನೋಗಳನ್ನು ಬ್ಯಾನ್ ಮಾಡುತ್ತೇವೆ ಎಂದಿದ್ದರೆ ಬಿಜೆಪಿ ಮಾತ್ರ ಕ್ಯಾಸಿನೋಗಳನ್ನು ಬ್ಯಾನ್ ಮಾಡುವುದು ಸಾಧ್ಯವಿಲ್ಲ ಎಂದು ಹೇಳಿದೆ. ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಮಾತನಾಡಿದ್ದು, "ವಿರೋಧ ಪಕ್ಷಗಳು ಬೊಬ್ಬೆ ಹೊಡೆದಂತೆ ಕ್ಯಾಸಿನೋಗಳನ್ನು ಬಂದ್ ಮಾಡುವುದು ಅಷ್ಟು ಸುಲಭವಲ್ಲ. ಕ್ಯಾಸಿನೋಗಳನ್ನು ಗೋವಾದಲ್ಲಿ ತಂದವರು ಇದೇ ಕಾಂಗ್ರೆಸಿನವರು. ಬಿಜೆಪಿ ಅಧಿಕಾರದಲ್ಲಿ ಒಂದೇ ಒಂದು ಕ್ಯಾಸಿನೋಗಳು ಮಾಂಡೋವಿ ನದಿ ಸುತ್ತ ಮುತ್ತ ತಲೆ ಎತ್ತಿಲ್ಲ. ಕ್ಯಾಸಿನೋಗಳೆಲ್ಲಾ ನೆಲದ ಕಾನೂನುಗಳಿಗೆ ಬದ್ಧವಾಗಿದ್ದರೆ ಅವರನ್ನು ಓಡಿಸಲು ಸಾಧ್ಯವಿಲ್ಲ. ಅವರು ಅದನ್ನು ಕೋರ್ಟಿನಲ್ಲಿ ಪ್ರಶ್ನಿಸುತ್ತಾರೆ. ಆಗ ಕೋರ್ಟ್ ಸರಕಾರದ ಮುಖಕ್ಕೆ ಮಂಗಳಾರತಿ ಎತ್ತುತ್ತದೆ," ಎಂದಿದ್ದಾರೆ. ಈ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದರೆ ಯಾವುದೇ ಕಾರಣಕ್ಕೂ ಕ್ಯಾಸಿನೋಗಳನ್ನು ಬ್ಯಾನ್ ಮಾಡುವುದಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳಿದೆ.
ನಿರುದ್ಯೋಗವೇ ಇರೋಲ್ಲ
ಗೋವಾ ರಾಜ್ಯದಲ್ಲಿ ನಿರುದ್ಯೋಗ ನಿರ್ಮೂಲನೆ ಮಾಡುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಪ್ರವಾಸೋದ್ಯಮ ಕ್ಷೇತ್ರಕ್ಕೆ ಕೈಗಾರಿಕೆಯ ಮಾನ್ಯತೆ ನೀಡುವುದಾಗಿಯೂ ಬಿಜೆಪಿ ಭರವಸೆ ನೀಡಿದೆ. ಈ ಮೂಲಕ ಕೈಗಾರಿಕೆಗಳಿಗೆ ನೀಡಿದ ಸೌಲಭ್ಯಗಳನ್ನು ಪ್ರವಾಸೋದ್ಯಮಕ್ಕೆ ನೀಡುತ್ತೇವೆ. ಎಲ್ಲಾ ಪ್ರವಾಸಿ ಸ್ಥಳಗಳಲ್ಲೂ ಬಟ್ಟೆ ಬದಲಿಸಲು ಕೋಣೆಗಳನ್ನು ಮತ್ತು ಶೌಚಾಲಯ ವ್ಯವಸ್ಥೆ ನಿರ್ಮಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.
ಇದಲ್ಲದೆ ಕೃಷಿ ಸಂಬಂಧಿತ ಉದ್ದಿಮೆಗಳಿಗೆ ಒಂದು ಶೇಕಡಾ ಬಡ್ಡಿಯಲ್ಲಿ ಸಾಲ ನೀಡಲಾಗುವುದು. ಈಗಿರುವ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಿ ಗ್ರಾಮಗಳನ್ನು ಸಂಪರ್ಕ ಮಾಡಲು ಸೇತುವೆಗಳನ್ನು ಕಟ್ಟಲಾಗುವುದು. ಮುಖ್ಯಮಂತ್ರಿ ರೋಜ್ ಗಾರ್ ಯೋಜನೆಯನ್ನು ಪುನರ್ ರಚಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ.
ಗೋವಾದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡುತ್ತಿರುವ ಕೊನೆಯ ಪಕ್ಷ ಬಿಜೆಪಿಯಾಗಿದೆ. ರಾಜ್ಯದಲ್ಲಿ ಫೆಬ್ರವರಿ 4ರಂದು ಮತದಾನ ನಡೆಯಲಿದೆ. (ಒನ್ ಇಂಡಿಯಾ ಸುದ್ದಿ)
(ಚಿತ್ರ ಕೃಪೆ: ಪಿಟಿಐ)