ಕಣ್ಮುಚ್ಚಿಕೊಂಡಿತ್ತಾ ಕೇಂದ್ರ: 2ನೇ ಅಲೆಯ ಹಿಂದೆ ಹೀಗೊಂದು ಅನುಮಾನ!?
ನವದೆಹಲಿ, ಮೇ10: ಕೊರೊನಾವೈರಸ್ ನಿಯಂತ್ರಿಸುವುದಕ್ಕೆ ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಅಗತ್ಯವಿರುವ ಔಷಧಿ ದಾಸ್ತಾನು ಸಂಗ್ರಹಿಸಿಡುವ ಅಗತ್ಯವಿದೆ ಎಂದು ಬಯೋಕಾನ್ ಸಂಸ್ಥಾಪಕ ಕಾರ್ಯನಿರ್ವಾಹಕ ಮುಖ್ಯಸ್ಥ ಕಿರಣ್ ಮಜುಂದಾರ್ ಶಾ ತಿಳಿಸಿದ್ದಾರೆ.
ಭಾರತದಲ್ಲಿ ಕೊರೊನಾವೈರಸ್ ಸಂದಿಗ್ಧ ಸ್ಥಿತಿಯ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾದಂತೆ ಗೋಚರಿಸುತ್ತಿದೆ. ಕೊವಿಡ್-19 ಲಸಿಕೆ, ವೆಂಟಿಲೇಟರ್, ಮೆಡಿಕಲ್ ಆಕ್ಸಿಜನ್, ಐಸಿಯು ಬೆಡ್ ಹೀಗೆ ಸಾಲು ಸಾಲು ಸಮಸ್ಯೆಗಳಿಂದ ಪ್ರತಿನಿತ್ಯ ಸಾವಿರಾರು ಮಂದಿ ಪ್ರಾಣ ಬಿಡುತ್ತಿದ್ದಾರೆ.
ರೆಮ್ಡೆಸಿವಿರ್ ಖಾಸಗಿ ವ್ಯಕ್ತಿಗಳಿಗೆ ಸಿಗುವುದು ಹೇಗೆ?; ವಿವರಣೆ ಕೇಳಿದ ಕೋರ್ಟ್
ದೇಶದಲ್ಲಿ ಒಂದೇ ದಿನ 3,66,161 ಮಂದಿಗೆ ಕೊರೊನಾವೈರಸ್ ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. 24 ಗಂಟೆಗಳಲ್ಲಿ 3,53,818 ಸೋಂಕಿತರು ಗುಣಮುಖರಾಗಿದ್ದರೆ, 3,754 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಇಂಥದೊಂದು ಸ್ಥಿತಿ ನಿರ್ಮಾಣದ ಹಿಂದಿನ ಕಾರಣವೇನು. ಸರ್ಕಾರಗಳ ಎಡವಿದ್ದು ಎಲ್ಲಿ ಎನ್ನುವುದರ ಕುರಿತು ಬ್ಯುಸಿನೆಸ್ ಸ್ಟ್ಯಾಂಡೆರ್ಡ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಕಿರಣ್ ಮಜುಂದಾರ್ ಶಾ ಉತ್ತರ ನೀಡಿದ್ದಾರೆ.
ಸರ್ಕಾರವು 2ನೇ ಅಲೆ ಎದುರಿಸಲು ಸಿದ್ಧವಾಗಿರಲಿಲ್ಲವೇ?
ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಎರಡನೇ ಅಲೆಯನ್ನು ಎದುರಿಸುವುದಕ್ಕೆ ಸಂಬಂಧಿಸಿದಂತೆ ಯಾವುದೇ ಸಿದ್ಧತೆ ಇರಲಿಲ್ಲ, ಯಾವುದೇ ಯೋಜನೆ ಇರಲಿಲ್ಲ, ಯಾವುದೇ ಹೊಣೆಗಾರಿಕೆ ಮತ್ತು ಕ್ರಿಯಾ ಯೋಜನೆ ಇರಲಿಲ್ಲ. ಈ ಸರ್ಕಾರವು ಅಗತ್ಯ ವೈದ್ಯಕೀಯ ಸೌಲಭ್ಯ ಮತ್ತು ಔಷಧಿಗಳನ್ನು ಸಂಗ್ರಹಿಸಿಡುವಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ. ಅದು ಏಕೆ ಎಂದು ಸರ್ಕಾರವೇ ಉತ್ತರಿಸಬೇಕು ಎಂದರು. ಒಂದು ಕಡೆಯಲ್ಲಿ ಕೊರೊನಾವೈರಸ್ ಸೋಂಕಿನಿಂದ ಜನರು ಬಳಲುತ್ತಿದ್ದಾರೆ. ಇನ್ನೊಂದು ಕಡೆಯಲ್ಲಿ ಲಸಿಕೆ ವಿತರಣೆ ವೇಗವೂ ತಗ್ಗಿದೆ. ನಾನು 'ಯುವಕರಿಗೆ ಲಸಿಕೆ ಹಾಕಿ' ಎಂದು ಹೇಳುತ್ತಿದ್ದೇನೆ, ಆದರೆ ಯಾರಾದರೂ ನನ್ನ ಮಾತನ್ನು ಕೇಳುತ್ತಾರೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.
ಲಸಿಕೆ ಉತ್ಪಾದನೆ ಮುಂದುವರಿಸುವಂತೆ ಸಲಹೆ
ಒಂದು ವೇಳೆ ನಾವು ಉತ್ತಮವಾದ ಪೂರ್ವ ಯೋಜನೆ ಹಾಕಿಕೊಂಡಿದ್ದರೆ ಇಂದಿನ ಪರಿಸ್ಥಿತಿ ಹೀಗೆ ಇರುತ್ತಿರಲಿಲ್ಲ. ಕಳೆದ ಆಗಸ್ಟ್ ತಿಂಗಳಿನಲ್ಲೇ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಸಂಸ್ಥೆಗಳಿಗೆ ಲಸಿಕೆ ಉತ್ಪಾದನೆ ಮುಂದುವರಿಸರಿಸಬೇಕಿತ್ತು. ಇಂಥ ಪ್ರಯೋಗಗಳು ವಿಫಲವಾಗುವ ಸಾಧ್ಯತೆ ತೀರಾ ವಿರಳವಾಗಿರುತ್ತವೆ. ಅಂದು ಲಸಿಕೆ ಅನುಮದೋನೆ ಸಿಗದ ಹಿನ್ನೆಲೆ ನಿರ್ಲಕ್ಷ್ಯ ತೋರಲಾಗಿತ್ತು. ಇಂದು ಎರಡೂ ಲಸಿಕೆಗಳಿಗೆ ಅನುಮೋದನೆ ಸಿಕ್ಕಿದೆಯಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಕೊರೊನಾ ಸೋಂಕು ತಡೆಗೆ ಡಬಲ್ ಮಾಸ್ಕ್: ಎಂಥಾ ಮಾಸ್ಕ್ ಧರಿಸಬೇಕು, ಎಂಥದ್ದು ಧರಿಸಕೂಡದು?
ಸರ್ಕಾರದ ಬೆಂಬಲ ಸಿಕ್ಕಿದ್ದರೆ 30 ಕೋಟಿ ಲಸಿಕೆ ಉತ್ಪಾದನೆ
ಕೊರೊನಾವೈರಸ್ ಲಸಿಕೆ ಉತ್ಪಾದಿಸುತ್ತಿರುವ ಕಂಪನಿಗಳಿಗೆ ಕೇಂದ್ರ ಸರ್ಕಾರ ಬೆಂಬಲವಾಗಿ ನಿಲ್ಲಬೇಕಿತ್ತು. ಅಂದು ಸರ್ಕಾರವು ಕೇವಲ 100 ರೂಪಾಯಿ ಬೆಂಬಲ ಬೆಲೆಯನ್ನು ನೀಡಿದ್ದರೆ ಸಾಕಿತ್ತು. ಇಂದು ದೇಶದಲ್ಲಿ 30 ಕೋಟಿಗೂ ಅಧಿಕ ಡೋಸ್ ಕೊವಿಡ್-19 ಲಸಿಕೆಯನ್ನು ಉತ್ಪಾದಿಸಬಹುದಿತ್ತು. ಆದರೆ ಸರ್ಕಾರವು ಯಾವ ರೀತಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವ ಬಗ್ಗೆ ಯೋಜನೆಗಳನ್ನು ಹಾಕಿಕೊಂಡಿರಲಿಲ್ಲ. ಸರ್ಕಾರವು ಎಲ್ಲ ಸವಾಲುಗಳನ್ನು ಖಾಸಗಿ ಕಂಪನಿಗಳ ಪಾಲಿಗೆ ಬಿಡುತ್ತದೆ. ಅದರ ಬದಲಿಗೆ ಸರ್ಕಾರ ಕೂಡ ಖಾಸಗಿ ಕಂಪನಿಗಳ ಜೊತೆಗೆ ಸಹಭಾಗಿತ್ವವನ್ನು ಹೊಂದಿರಬೇಕು. ಆರೋಗ್ಯ ವಲಯದಲ್ಲಿ ಅಗತ್ಯವಾದ ನೆರವನ್ನು ಸರ್ಕಾರ ಸಹ ನೀಡಬೇಕಾಗುತ್ತದೆ. ಹೆಚ್ಚು ಹೆಚ್ಚು ಐಸಿಯು, ಹೆಚ್ಚು ಹೆಚ್ಚು ವೈದ್ಯರು ಮತ್ತು ಹೆಚ್ಚು ಹೆಚ್ಚು ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕಿದ್ದು, ಇದು ನಮಗೆ ಭವಿಷ್ಯದಲ್ಲಿ ಸಹಾಯಕವಾಗಿರಲಿದೆ ಎಂದು ಹೇಳಿದ್ದಾರೆ.
ರೆಮ್ಡೆಸಿವಿರ್ ಔಷಧಿ ಉತ್ಪಾದನೆಯಲ್ಲೂ ವಿಳಂಬ ಧೋರಣೆ
ನಮ್ಮಲ್ಲಿ ಮೇ ತಿಂಗಳಾಂತ್ಯದವರೆಗೆ ಸಾಕಷ್ಟು ಪ್ರಮಾಣದ ರೆಮ್ಡೆಸಿವಿರ್ ಔಷಧಿ ಸರಬರಾಜು ಇರುತ್ತದೆ. ಒಂದು ವೇಳೆ ಔಷಧಿಗೆ ಬೇಡಿಕೆ ಹೆಚ್ಚಾದ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ತಕ್ಷಣ ಅದನ್ನು ಪೂರೈಸಲು ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಏಕೆಂದರೆ ಕಂಪನಿಗಳಿಗೂ ಇಂಥ ಔಷಧಿಯ ಉತ್ಪಾದನೆಗೆ ಸ್ವಲ್ಪ ಸಮಯಾವಕಾಶ ಬೇಕಾಗುತ್ತದೆ. ರೋಗ ನಿರೋಧಕ ಔಷಧಿಗಳನ್ನು 24 ಗಂಟೆಗಳಲ್ಲಿ ಉತ್ಪಾದಿಸಲು ಸಾಧ್ಯವಿಲ್ಲ, ಅದಕ್ಕೆ ಸ್ವಲ್ಪ ಹೆಚ್ಚಿನ ಸಮಯದ ಅಗತ್ಯವಿರುತ್ತದೆ. ಜೂನ್ ಮೂರವೇ ವಾರದ ನಂತರದಲ್ಲಿ ರೆಮ್ಡೆಸಿವಿರ್ ಔಷಧಿ ಪೂರೈಕೆಯು ಒಂದು ಹಂತಕ್ಕೆ ಬರಲಿದೆ ಎಂದು ಕಿರಣ್ ಮಜುಂದಾರ್ ಶಾತಿಳಿಸಿದ್ದಾರೆ.
ರೆಮ್ಡೆಸಿವಿರ್ ಔಷಧಿಯು ಎಂಥ ರೋಗಿಗಳಿಗೆ ಸೂಕ್ತ?
ಕೇಂದ್ರ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವಾಲಯವು ರೆಮ್ಡೆಸಿವಿರ್ ಲಸಿಕೆಯನ್ನು ತುರ್ತು ನಿಗಾ ಘಟಕದಲ್ಲಿ ವೆಂಟಿಲೇಟರ್ ಅಡಿ ಚಿಕಿತ್ಸೆ ಪಡೆಯುತ್ತಿರುವ ಕೊವಿಡ್ ಸೋಂಕಿತರಿಗೆ ನೀಡುವುದಾಗಿ ಹೇಳಿದೆ. ಆದರೆ ಇದೊಂದು ಬೇಜವಾಬ್ದಾರಿತನದ ಹೇಳಿಕೆ ಆಗಿದೆ. ಆಸ್ಪತ್ರೆಗಳಿಗೆ ಬರುವ ಕೊರೊನಾವೈರಸ್ ಸೋಂಕಿತರಿಗೆ ರೆಮ್ಡೆಸಿವಿರ್ ಔಷಧಿಗಳನ್ನು ನೀಡಲಾಗುತ್ತದೆ. ಆರಂಭಿಕ ಹಂತದಲ್ಲಿ ಈ ಔಷಧಿ ನೀಡಿದರೆ ಅದು ಕೆಲಸ ಮಾಡುತ್ತದೆ. ಅದನ್ನು ಬಿಟ್ಟು ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊವಿಡ್-19 ಸೋಂಕಿತನ ಮೇಲೆ ಈ ಔಷಧಿಯು ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.
ನೀವು mRNA ನೋಡಿದ್ದೀರಾ ಎಂದು ಪ್ರಶ್ನೆ?
ಭಾರತದಲ್ಲಿ ಮೊದಲು mRNA ಲಸಿಕೆಯನ್ನು ಉತ್ಪಾದಿಸಬೇಕಿದೆ. ಇದರ ಜೊತೆಗೆ ನಾವು ಸಾಕಷ್ಟು ಔಷಧೀಯ ಉತ್ಪನ್ನಗಳನ್ನು ಉತ್ಪಾದಿಸುವ ಅಗತ್ಯವಿದೆ. ನೊವೆಲ್ ಬಯೋಲಾಜಿಕ್ಸ್, ಬಯೋ-ಸಿಮಿಲರ್ಸ್, ನೊವೆಲ್ ಕೆಮಿಕಲ್ ಎಂಟಿಟೀಸ್ ಸೇರಿದಂತೆ ಹಲವು ರೋಗಿ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಗಳನ್ನು ಹೊಂದಬೇಕಿದೆ. ಕ್ಯಾನ್ಸರ್ ಥೆರಿಪಿ ಮತ್ತು ಸಿಂಜೀನ್ ಅಭಿವೃದ್ಧಿಗಾಗಿ mRNA ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕಾಗಿದೆ. ಅದು ಕೇವಲ ಕ್ಯಾನ್ಸರ್ ಅಷ್ಟೇ ಅಲ್ಲ, ಕೊವಿಡ್-19 ಸೇರಿದಂತೆ ಎಲ್ಲ ರೋಗಗಳಿಗೂ ಮದ್ದು ಆಗಲಿದೆ.
ಇಟೋಲಿಜಮಬ್ ಉತ್ಪಾದನೆಗೆ ಸರ್ಕಾರದ ನೆರವು ಬೇಕಾ?
ನಮ್ಮ ಸ್ವಂತ ಉತ್ಪನ್ನ ಇಟೋಲಿಜಮಬ್ ಔಷಧಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದು ಜೀವ ರಕ್ಷಣ ಹಾಗೂ ವಿಶಿಷ್ಟವಾದ ಔಷಧಿಯಾಗಿದೆ. ಟೋಸಿಲಿಜಮಬ್ ಕೊರತೆಯಿಂದ ಇಟೋಲಿಜಮಬ್ ಬಳಸಿದ ಪ್ರತಿಯೊಬ್ಬ ವೈದ್ಯರು ಇಂದು ನಮ್ಮ ಔಷಧಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸೊರಿಯಾಸಿಸ್ ನಿವಾರಣೆಗಾಗಿ ಈ ಔಷಧಿಯನ್ನು ಅಭಿವೃದ್ಧಿಪಡಿಸಿದ್ದು, ಅದರ ಜೊತೆಗೆ ಇನ್ನೂ ಅನೇಕ ರೋಗಗಳಿಗೆ ಪರಿಹಾರವಾಗಲಿದೆ. ಸರ್ಕಾರದಿಂದ ನಮಗೆ ಯಾವುದೇ ಬೆಂಬಲ ಸಿಕ್ಕಿಲ್ಲ. ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಪ್ರಾಧಿಕಾರದಿಂದ ನಮ್ಮ ಔಷಧಿಯ ತುರ್ತುಬಳಕೆಗೆ ಅನುಮೋದನೆ ನೀಡಿದೆ ಆದರೆ ರಾಷ್ಟ್ರೀಯ ವೈದ್ಯಕೀಯ ಶಿಷ್ಟಾಚಾರದ ಭಾಗವಾಗಿಲ್ಲ ಎಂದು ಬಯೋಕಾನ್ ಸಂಸ್ಥಾಪಕ ಕಾರ್ಯನಿರ್ವಾಹಕ ಮುಖ್ಯಸ್ಥ ಕಿರಣ್ ಮಜುಂದಾರ್ ಶಾ ಹೇಳಿದ್ದಾರೆ.