Video Viral: ಛತ್ತೀಸ್ ಗಢದಲ್ಲಿ ಜಿಲ್ಲಾಧಿಕಾರಿ ಅಧಿಕಾರ ಕಳೆದುಕೊಳ್ಳಲು ಒಂದೇ ಕಾರಣ!?
ರಾಯ್ ಪುರ್, ಮೇ 23: ಛತ್ತೀಸ್ ಗಢದಲ್ಲಿ ಲಾಕ್ ಡೌನ್ ನಡುವೆ ಕೊರೊನಾವೈರಸ್ ಮಾರ್ಗಸೂಚಿ ಉಲ್ಲಂಘಿಸಿದ ವ್ಯಕ್ತಿಯ ಮೊಬೈಲ್ ಕಿತ್ತುಕೊಂಡು ನೆಲಕ್ಕೆ ಎಸೆದ ಸೂರಜಪುರ್ ಜಿಲ್ಲಾಧಿಕಾರಿ ರಣಬೀರ್ ಶರ್ಮಾರನ್ನು ಅಧಿಕಾರದಿಂದ ತೆಗೆದು ಹಾಕುವಂತೆ ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ಆದೇಶಿಸಿದ್ದಾರೆ.
ರಾಯ್ ಪುರ್ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೌರವ್ ಕುಮಾರ್ ಸಿಂಗ್ ರನ್ನು ಸೂರಜ್ಪುರ್ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಆಗಿ ನೇಮಕಗೊಳಿಸಿ ಛತ್ತೀಸ್ ಗಢ ಸರ್ಕಾರ ಆದೇಶ ಹೊರಡಿಸಿದೆ.
ಮೋದಿ ಬದಲು ಸಿಎಂ ಫೋಟೋ ಇರುವ ಲಸಿಕೆ ಪ್ರಮಾಣಪತ್ರ ನೀಡಲು ಆರಂಭಿಸಿದ ಛತ್ತೀಸ್ಗಢ ಸರ್ಕಾರ
ಇದಕ್ಕೂ ಮೊದಲು ತಮ್ಮ ವರ್ತನೆ ಬಗ್ಗೆ ಸೂರಜ್ಪುರ್ ಜಿಲ್ಲಾಧಿಕಾರಿ ರಣಬೀರ್ ಶರ್ಮಾ ಕ್ಷಮೆಯಾಚಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ವ್ಯಕ್ತಿ ಮೇಲಿನ ಯಾವುದೇ ದ್ವೇಷ ಅಥವಾ ಉದ್ದೇಶಪೂರ್ವಕವಾಗಿ ಆ ರೀತಿ ವರ್ತಿಸಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ವೈರಲ್ ವಿಡಿಯೋ ಹಿಂದಿನ ಘಟನೆಯೇನು?
ಕೊರೊನಾವೈರಸ್ ಮಾರ್ಗಸೂಚಿಗಳ ನಿಯಮ ಉಲ್ಲಂಘಿಸಿದ ವ್ಯಕ್ತಿಯ ಕೆನ್ನೆಗೆ ಬಾರಿಸಿದ ಜಿಲ್ಲಾಧಿಕಾರಿ ರಣಬೀರ್ ಶರ್ಮಾ, ಆ ವ್ಯಕ್ತಿಯ ಮೊಬೈಲ್ ಅನ್ನು ಕಿತ್ತುಕೊಂಡು ನೆಲಕ್ಕೆ ಎಸೆದರು. ಅಲ್ಲದೇ ವ್ಯಕ್ತಿಗೆ ಹೊಡೆಯುವಂತೆ ಭದ್ರತಾ ಸಿಬ್ಬಂದಿಗೆ ಸೂಚನೆ ನೀಡಿದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ನಿಯಮ ಉಲ್ಲಂಘಿಸಿದ ವ್ಯಕ್ತಿ ಸುಳ್ಳು ಹೇಳಿಕೆ ನೀಡಿರುವುದೂ ಅಲ್ಲದೇ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದನು. ಹೀಗಾಗಿ ಆತನ ಕೆನ್ನೆಗೆ ಬಾರಿಸಿರುವುದಾಗಿ ಜಿಲ್ಲಾಧಿಕಾರಿ ರಣಬೀರ್ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.
ಡಿಸಿ ರಣಬೀರ್ ಶರ್ಮಾ ವರ್ತನೆಗೆ ಖಂಡನೆ
ಛತ್ತೀಸ್ ಗಢದ ಸೂರಜ್ಪುರ್ ಜಿಲ್ಲಾಧಿಕಾರಿ ರಣಬೀರ್ ಶರ್ಮಾ ವರ್ತನೆಯನ್ನು ಐಎಎಸ್ ಅಧಿಕಾರಿಗಳ ಒಕ್ಕೂಟ ಖಂಡಿಸಿದೆ. ಡಿಸಿ ವರ್ತನೆಯು ನಾಗರೀಕತೆ ಮತ್ತು ಮೂಲ ಸಿದ್ಧಾಂತಕ್ಕೆ ವಿರುದ್ಧವಾಗಿದ್ದು, ಇದನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಸರ್ವಕಾಲದಲ್ಲೂ ಸಮಾಜಕ್ಕೆ ತಲುಪುವಂತೆ ಸರ್ಕಾರಿ ಅಧಿಕಾರಿಗಳು ಸಹಾನುಭೂತಿಯಿಂದ ಕಾರ್ಯ ನಿರ್ವಹಿಸಬೇಕು. ಇಂಥ ಕಷ್ಟದ ಸಂದರ್ಭದಲ್ಲಿ ಅಮಾನವೀಯವಾಗಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಟ್ವೀಟ್ ಮಾಡಿದೆ.
ವೈರಲ್ ವಿಡಿಯೋ ಬಗ್ಗೆ ಜಿಲ್ಲಾಧಿಕಾರಿ ನೀಡಿದ ಸ್ಪಷ್ಟನೆ
ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ವೈರಸ್ ಆಗಿರುವ ವಿಡಿಯೋದ ಬಗ್ಗೆ ಜಿಲ್ಲಾಧಿಕಾರಿ ರಣಬೀರ್ ಶರ್ಮಾ ಸ್ಪಷ್ಟನೆ ನೀಡಿದ್ದಾರೆ. "ಲಾಕ್ಡೌನ್ ಮಾರ್ಗಸೂಚಿ ನಡುವೆ ನಿಯಮ ಉಲ್ಲಂಘಿಸಿ ರಸ್ತೆಗೆ ಇಳಿದ 23 ವರ್ಷದ ವ್ಯಕ್ತಿಗೆ ತಾವು ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಯು ಮೊದಲು ಕೊರೊನಾವೈರಸ್ ಲಸಿಕೆ ಹಾಕಿಸಿಕೊಳ್ಳಲು ಹೊರಗೆ ಬಂದಿರುವುದಾಗಿ ಹೇಳಿದನು. ಆದರೆ ಅದಕ್ಕೆ ಸೂಕ್ತವಾದ ದಾಖಲೆಗಳನ್ನು ತೋರಿಸಲಿಲ್ಲ. ಬಳಿಕ ತಮ್ಮ ಅಜ್ಜಿಯನ್ನು ನೋಡಲು ಹೊರಟಿರುವುದಾಗಿ ಹೇಳಿಕೆ ನೀಡಿದನು. ಆ ಸಮಯದಲ್ಲಿ ಅಧಿಕಾರಿಗಳಿಗೆ ಸುಳ್ಳು ಹೇಳಿ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆ ಆತನ ಕೆನ್ನೆಗೆ ಹೊಡೆದಿದ್ದೇನೆ" ಎಂದು ಜಿಲ್ಲಾಧಿಕಾರಿ ರಣಬೀರ್ ಶರ್ಮಾ ಸ್ಪಷ್ಟಪಡಿಸಿದ್ದಾರೆ.
ಹೊಸ ಜಿಲ್ಲಾಧಿಕಾರಿ ನೇಮಿಸಿ ಸರ್ಕಾರದಿಂದ ಆದೇಶ
ಬೈಕ್ ಸವಾರದ ಜೊತೆ ಅಮಾನುಷವಾಗಿ ನಡೆದುಕೊಂಡ ಆರೋಪದ ಹಿನ್ನೆಲೆ ರಣಬೀರ್ ಶರ್ಮಾರನ್ನು ಅಧಿಕಾರದಿಂದ ತೆಗೆಯಲಾಯಿತು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಭೂಪೇಶ್ ಬಾಘೆಲ್, ಐಎಎಸ್ ಅಧಿಕಾರಿ ಗೌರವ್ ಕುಮಾರ್ ಸಿಂಗ್ ರನ್ನು ಸೂರಜ್ಪುರ್ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ. ಗೌರವ್ ಕುಮಾರ್ ಸಿಂಗ್ ಈ ಹಿಂದೆ ರಾಯ್ ಪುರ್ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.