ನಾರಾಯಣ ಸಾಯಿ ಆಸ್ತಿ ಮುಟ್ಟುಗೋಲಿಗೆ ದಿನಗಣನೆ
ಜೋಧಪುರ, ನ. 12: ಅಪ್ರಾಪ್ತ ವಯಸ್ಸಿನ ಆಶ್ರಮವಾಸಿ ಬಾಲಕಿ ಹಾಗೂ ಈ ಮೊದಲು ಆಶ್ರಮದಲ್ಲಿದ್ದ ಸಹೋದರಿಯರಿಬ್ಬರಲ್ಲಿ ಒಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಜೈಲುವಾಸಿಯಾಗಿರುವ ಸ್ವಯಂ ಘೋಷಿತ ದೇವಮಾನವ ಅಸಾರಾಂಬಾಪು ಪುತ್ರ ಸಹ ಆರೋಪಿ ನಾರಾಯಣ್ ಸಾಯಿಯನ್ನು ಇಲ್ಲಿನ ನ್ಯಾಯಾಲಯ ಘೋಷಿತ ಪಲಾಯನಗಾರ ಎಂದು ಘೋಷಿಸಿದೆ.
ಇಬ್ಬರು ಸಹೋದರಿಯಲ್ಲಿ ಒಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಡಿ ಪೊಲೀಸರಿಗೆ ಬೇಕಾಗಿರುವ ನಾರಾಯಣ್ ಸಾಯಿ ವಿರುದ್ಧ ಆರೋಪ ಪ್ರಕರಣ ದಾಖಲಾಗಿ 35 ದಿನ ಕಳೆದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಘೋಷಣೆ ಹೊರಡಿಸಿತು.
ಸಮನ್ಸ್ ನೀಡಿದರೂ ಆರೋಪಿ ಶರಣಾಗಿಲ್ಲ ಮತ್ತು ಪತ್ತೆಯಾಗಿಲ್ಲ ಎಂದು ಪೊಲೀಸರು ಕೈಚೆಲ್ಲಿದ ಹಿನ್ನೆಲೆಯಲ್ಲಿ ಸಿಆರ್ ಪಿಎಸ್ ಕಾಯ್ದೆ 82ರ ಅಡಿ ಮುಖ್ಯ ನ್ಯಾಯಮೂರ್ತಿ ಎ.ಎಸ್.ಗಾಧ್ಯಿ ನಾರಾಯಣ್ ಸಾಯಿನನ್ನು ಘೋಷಿತ ಪಲಾಯನಗಾರ (proclaimed absconder) ಎಂದು ಘೋಷಿಸಿದರು.
ಘೋಷಿತ ಪಲಾಯನಗಾರ ಎಂದು ಪ್ರಕಟಿಸಿದ 30 ದಿನಗಳೊಳಗಾಗಿ ತನಿಖಾಧಿಕಾರಿಗಳು ಅಥವಾ ನ್ಯಾಯಾಲಯದ ಎದುರು ಹಾಜರಾಗಬೇಕು ಎಂದು ನ್ಯಾಯಾಧೀಶರು ಸಾಯಿಗೆ ನಿರ್ದೇಶನ ನೀಡಿದ್ದಾರೆ.

ಒಂದು ವೇಳೆ ನಾರಾಯಣ್ ಸಾಯಿ ಅಥವಾ ಯಾವುದೇ ಘೋಷಿತ ಪಲಾಯನಗಾರರು 30 ದಿನಗಳೊಳಗೆ ನ್ಯಾಯಾಲಯಕ್ಕೆ ಶರಣಾಗತರಾಗದಿದ್ದರೆ ಸಿಆರ್ ಪಿಎಫ್ 83ರ ಅಡಿ ನ್ಯಾಯಾಲಯ ಅಂಥ ಆರೋಪಿಯ ವೈಯಕ್ತಿಕ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶವಿರುತ್ತದೆ.
ಅಕ್ಟೋಬರ್ 6ರಂದು ಸಾಯಿ ವಿರುದ್ಧ ಪ್ರಕರಣ ದಾಖಲಾದ ಬಳಿಕ ಮರುದಿನವೇ ಪೊಲೀಸರು ಆರೋಪಿಗೆ ಲುಕ್ಔಟ್ ನೋಟಿಸ್ ನೀಡಿದ್ದು, ಅವನು ದೇಶ ಬಿಟ್ಟು ಹೋಗುವಂತಿಲ್ಲ. ಅಪ್ಪ ಅಸಾರಾಂ ಹಾಗೂ ಮಗ ಸಾಯಿ ವಿರುದ್ಧ ಪೊಲೀಸರು ಅತ್ಯಾಚಾರ ಆರೋಪದ ಕೇಸು ದಾಖಲಿಸಿದ್ದಾರೆ.
ಆಶ್ರಮದಲ್ಲಿದ್ದ 16 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ದೇವಮಾನನನ್ನು ಕಳೆದ ಆಗಸ್ಟ್ ನಲ್ಲೇ ಜೈಲಿಗೆ ಹಾಕಲಾಗಿದೆ. ನಂತರ ಈ ಹಿಂದೆ 2002-05ರಲ್ಲಿ ಆಶ್ರಮದಲ್ಲಿದ್ದ ತಮ್ಮ ಮೇಲೆ ಅಸಾರಾಂ ಹಾಗೂ ಮಗ ನಾರಾಯಣ್ ಸಾಯಿ ಅತ್ಯಾಚಾರ ಎಸಗಿದ್ದರು ಎಂದು ಅಹ್ಮದಾಬಾದ್ ನಿವಾಸಿಗಳಾಗಿರುವ ಸಹೋದರಿಯರಿಬ್ಬರು ಅ.6ರಂದು ಕೇಸು ದಾಖಲಿಸಿದ್ದರು. ನಾರಾಯಣ್ ಸಾಯಿ ವಿರುದ್ಧ ಸೂರತ್ ನ ಜೆಹಾಂಗೀರ್ ಪುರ್ ನಲ್ಲಿ ಕೇಸು ದಾಖಲಿಸಲಾಗಿದೆ.
ಕಳೆದ ವಾರ ಅಸಾರಾಂ ಹಾಗೂ ನಾರಾಯಣ ಸಾಯಿ ವಿರುದ್ಧ ಸುಮಾರು 1,011 ಪುಟಗಳಷ್ಟು ಆರೋಪಪಟ್ಟಿ[ಇದರ ವಿವರ ಇಲ್ಲಿ ಓದಿ]ಯನ್ನು ಜೋಧಪುರದ ಕೋರ್ಟಿಗೆ ಸಲ್ಲಿಸಲಾಗಿತ್ತು. 121 ದಾಖಲೆ ಪತ್ರ, ಹೇಳಿಕೆಗಳು ಹಾಗೂ 58 ಸಾಕ್ಷಿಗಳ ಹೆಸರನ್ನು ಇದರಲ್ಲಿ ನಮೂದಿಸಲಾಗಿದೆ. ಅಸಾರಾಂ ಹಾಗೂ ಇತರೆ ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 342,376(ಎಫ್), 376 (ಡಿ), 354(ಎ), 506 ಹಾಗೂ 109 ಅನ್ವಯ ಪ್ರಕರಣ ದಾಖಲಿಸಲಾಗಿದೆ. (ಪಿಟಿಐ)












Click it and Unblock the Notifications