ಭಾರೀ ಹಿಂಸಾಚಾರಕ್ಕೆ ಬಗ್ಗಿದ ಅರುಣಾಚಲ ಸರಕಾರ; 'ಕಾಯಂ ನಿವಾಸಿ' ಕ್ಯಾನ್ಸಲ್
ಇಟಾನಗರ್ (ಅರುಣಾಚಲಪ್ರದೇಶ), ಫೆಬ್ರವರಿ 24: ಭಾರೀ ಹಿಂಸಾಚಾರ, ಪ್ರತಿಭಟನೆ ನಂತರ ಬಿಜೆಪಿ ನೇತೃತ್ವದ ಅರುಣಾಚಲ ಪ್ರದೇಶದ ಸರಕಾರವು ರಾಜ್ಯದ ಹೊರಗಿನ ಎರಡು ಬುಡಕಟ್ಟು ಸಮುದಾಯಕ್ಕೆ ಕಾಯಂ ನಿವಾಸಿ ಪ್ರಮಾಣಪತ್ರ ನೀಡುವ ನಿರ್ಧಾರವನ್ನು ಹಿಂತೆಗೆದುಕೊಂಡಿದೆ. ಭಾನುವಾರ ಭಾರೀ ಪ್ರತಿಭಟನೆ ನಡೆದಿದ್ದು, ಈ ವೇಳೆ ಉಪ ಮುಖ್ಯಮಂತ್ರಿ ಚೌನಾ ಮೀನ್ ರ ಖಾಸಗಿ ಮನೆಗೆ ಬೆಂಕಿ ಹಚ್ಚಲಾಗಿತ್ತು.
ಇಟಾನಗರ ಹಾಗೂ ನಹರ್ಲಗನ್ ನಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ ಹೇರಿದ ನಂತರವೂ ಈ ಘಟನೆ ನಡೆದಿದೆ. ಈ ಮಧ್ಯೆ ಶನಿವಾರ ನಡೆದ ಕಲ್ಲು ತೂರಾಟದಲ್ಲಿ ಇಪ್ಪತ್ನಾಲ್ಕು ಪೊಲೀಸರು ಸೇರಿದ ಹಾಗೆ ಮೂವತ್ತೈದು ಮಂದಿ ಗಾಯಗೊಂಡಿದ್ದಾರೆ. ಶುಕ್ರವಾರ ಗುಂಡೇಟು ತಿಂದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಭಾನುವಾರ ಮೃತಪಟ್ಟ ನಂತರ ಪರಿಸ್ಥಿತಿ ಬಿಗಡಾಯಿಸಿತು.
ಪ್ರತಿಭಟನಾನಿರತರು ಸಾರ್ವಜನಿಕ ಆಸ್ತಿಗಳಿಗೆ ಹಾಗೂ ವಾಹನಗಳಿಗೆ ಹಾನಿ ಮಾಡಿದರು. ಡೆಪ್ಯೂಟಿ ಕಮಿಷನರ್ ಕಚೇರಿಗೆ ಹಾನಿ ಮಾಡಿದರು. ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹೊತ್ತಿಸಿದ್ದರಿಂದ ಹಲವಾರು ವಾಹನಗಳಿಗೆ ಹಾನಿಯಾದವು. ಇಟಾನಗರ್ ನಲ್ಲಿನ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಲಾಯಿತು. ನಹರ್ಲಗನ್ ರೈಲು ನಿಲ್ದಾಣಕ್ಕೆ ತೆರಳುವ ರಸ್ತೆಗೆ ತಡೆಯೊಡ್ಡಲಾಯಿತು.
ಹೊತ್ತಿ ಉರಿಯುತ್ತಿರುವ ಇಟಾನಗರ್ ನಲ್ಲಿ ವ್ಯಕ್ತಿ ಸಾವು, ಡಿಸಿಎಂ ಮನೆಗೆ ಬೆಂಕಿ
ಇಟಾನಗರ್ ಹಾಗೂ ನಹರ್ಲಗನ್ ನಲ್ಲಿ ಇಂಟರ್ ನೆಟ್ ಸಂಪರ್ಕ ಸ್ಥಗಿತಗೊಳಿಸಲಾಯಿತು. ಮಾರ್ಕೆಟ್ ಗಳು, ಪೆಟ್ರೋಲ್ ಪಂಪ್, ಮಳಿಗೆಗಳನ್ನು ಮುಚ್ಚಲಾಗಿತ್ತು. ಹಲವು ಎಟಿಎಂಗಳಲ್ಲಿ ಹಣವಿರಲಿಲ್ಲ. ಇಟಾನಗರದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.
ಅರುಣಾಚಲಪ್ರದೇಶದ ಮೂಲ ನಿವಾಸಿಗಳು ಅಲ್ಲದ ಆರು ಸಮುದಾಯಗಳಿಗೆ ಕಾಯಂ ನಿವಾಸಿ ಪ್ರಮಾಣ ಪತ್ರ ನೀಡಬೇಕು ಎಂದು ಜಂಟಿ ಉನ್ನತಾಧಿಕಾರ ಸಮಿತಿ ಶಿಫಾರಸು ಮಾಡಿತ್ತು. ಇವರು ನಸಿ ಹಾಗೂ ಚಂಗ್ಲಾಂಗ್ ಜಿಲ್ಲೆಗಳಲ್ಲಿ ದಶಕಗಳಿಗೆ ವಾಸವಿದ್ದಾರೆ. ಯಾವಾಗ ಕಾಯಂ ನಿವಾಸಿ ಪ್ರಮಾಣ ಪತ್ರ ನೀಡುವ ತೀರ್ಮಾನಕ್ಕೆ ಸರಕಾರ ಬಂದಿತೋ ಆಗ ವಿವಿಧ ಸಮುದಾಯ ಗುಂಪುಗಳು ಹಾಗೂ ವಿದ್ಯಾರ್ಥಿಗಳ ಒಕ್ಕೂಟ ಸಿಟ್ಟಿಗೆದ್ದವು.