ಸರ್ಕಾರಿ ನೌಕರರಿಗೆ ಉದ್ದೀಪನ ಮದ್ದು ಪರೀಕ್ಷೆ ಕಡ್ಡಾಯ
ಚಂಡಿಗಡ, ಜುಲೈ 5: ಸರ್ಕಾರಿ ಉದ್ಯೋಗಿಗಳು ಮತ್ತು ಪೊಲೀಸ್ ಸಿಬ್ಬಂದಿಯ ನೇಮಕಾತಿ ವೇಳೆ ಉದ್ದೀಪನ ಮದ್ದು ಪರೀಕ್ಷೆಗೆ ಒಳಪಡುವುದನ್ನು ಕಡ್ಡಾಯಗೊಳಿಸಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಬುಧವಾರ ಆದೇಶ ನೀಡಿದ್ದಾರೆ.
ಈ ನಿಯಮದ ವಿಧಾನಗಳು ಮತ್ತು ಅಗತ್ಯ ಸೂಚನೆಗಳನ್ನು ಹೊರಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಮುಖ್ಯ ಕಾರ್ಯದರ್ಶಿಗೆ ಅಮರಿಂದರ್ ಸಿಂಗ್ ಸೂಚನೆ ನೀಡಿದ್ದಾರೆ.
ಮಾದಕವಸ್ತುಗಳ ವ್ಯಾಪಾರ ಮತ್ತು ಕಳ್ಳಸಾಗಣೆಯಲ್ಲಿ ಭಾಗಿಯಾದವರಿಗೆ ಗಲ್ಲು ಶಿಕ್ಷೆ ವಿಧಿಸುವ ಸಂಬಂಧ ಪಂಜಾಬ್ ಸಚಿವ ಸಂಪುಟ ಶಿಫಾರಸು ಮಾಡಿದ ಮರು ದಿನವೇ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ.

'ಡ್ರಗ್ ಮಾರಾಟಮಾಡುವವರು ಮತ್ತು ಕಳ್ಳಸಾಗಣೆದಾರರಿಗೆ ಗಲ್ಲುಶಿಕ್ಷೆಗೆ ಶಿಫಾರಸು ಮಾಡಲು ನನ್ನ ಸರ್ಕಾರ ನಿರ್ಧರಿಸಿದೆ. ಈ ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಲಾಗಿದೆ.
ಮಾದಕವಸ್ತುಗಳ ವ್ಯಾಪಾರ ಇಡೀ ಪೀಳಿಗೆಯನ್ನು ನಾಶಮಾಡುತ್ತಿದೆ. ಹೀಗಾಗಿ ಅದಕ್ಕೆ ಕಠಿಣ ಶಿಕ್ಷೆಯ ಅಗತ್ಯವಿದೆ. ಡ್ರಗ್ಸ್ ಮುಕ್ತ ಪಂಜಾಬ್ ನಿರ್ಮಾಣದ ನನ್ನ ಗುರಿಗೆ ಬದ್ಧನಾಗಿದ್ದೇನೆ' ಎಂದು ಅಮರಿಂದರ್ ಸಿಂಗ್ ಟ್ವೀಟ್ ಮಾಡಿದ್ದರು.
ಮಾದಕ ವಸ್ತು ವ್ಯಸನ ಪಂಜಾಬ್ನಲ್ಲಿ ಬಹುದೊಡ್ಡ ಸಮಸ್ಯೆಯಾಗಿದೆ. ವರದಿಯೊಂದರ ಪ್ರಕಾರ ಅಲ್ಲಿನ ಶೇ 75ರಷ್ಟು ಯುವಜನರು ಒಂದಲ್ಲ ಒಂದು ರೀತಿಯ ಮಾದಕ ವ್ಯಸನಕ್ಕೆ ಒಳಗಾಗಿದ್ದಾರೆ.
ಮಾದಕ ವಸ್ತು ನಿಯಂತ್ರಣ ವಿಭಾಗದ ವರದಿ ಅನ್ವಯ, ಭಾರತದಲ್ಲಿನ ಮಾದಕ ವಸ್ತು ಸಂಬಂಧಿ ಪ್ರಕರಣಗಳಲ್ಲಿ ಶೇ 50ರಷ್ಟು ಪಂಜಾಬ್ನಲ್ಲಿಯೇ ಇದೆ.
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳ ಮಗ್ಗುಲಿನಲ್ಲಿಯೇ ಇರುವುದರಿಂದ ವಿವಿಧ ಬಗೆಯ ಅಪಾಯಕಾರಿ ಮಾದಕ ವಸ್ತುಗಳ ವ್ಯಾಪಾರ ಪಂಜಾಬ್ ಮೂಲಕವೇ ನಡೆಯುತ್ತದೆ ಎಂದು ಬಿಬಿಸಿ ವರದಿ ಹೇಳಿದೆ.












Click it and Unblock the Notifications