ಜಲ್ಲಿಕಟ್ಟು ಕ್ರೀಡೆ ಬಗ್ಗೆ ಸುಗ್ರೀವಾಜ್ಞೆ ತನ್ನಿ: ಶಶಿಕಲಾ ಆಗ್ರಹ
ಚೆನ್ನೈ, ಜ. 11: ತಮಿಳುನಾಡಿನ ಜನಪ್ರಿಯ ಗೂಳಿಯ ಕಾಳಗವಾದ ಜಲ್ಲಿಕಟ್ಟು ಸಾಹಸ ಕ್ರೀಡೆಗೆ ಇರುವ ಕಾನೂನು ತೊಡಕುಗಳನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಬೇಕೆಂದು ಎಐಡಿಎಂಕೆ ಪಕ್ಷದ ಮಹಾ ಕಾರ್ಯದರ್ಶಿ ವಿಕೆ ಶಶಿಕಲಾ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರದ ಮುಖೇನ ಆಗ್ರಹಿಸಿದ್ದಾರೆ.
ಸದ್ಯಕ್ಕೀಗ ಸಂಕ್ರಾತಿ ಪೊಂಗಲ್ ಹಬ್ಬಕ್ಕಾಗಿ ಇಡೀ ತಮಿಳುನಾಡೇ ಭರದಿಂದ ಸಿಂಗಾರವಾಗುತ್ತಿದೆ. ಈ ಹೊತ್ತಿನಲ್ಲಿ ಅಲ್ಲಿನ ಜಾನಪದ ಸೊಗಡಿನ ಭಾಗವೇ ಆಗಿದ್ದ ಜಲ್ಲಿಕಟ್ಟು ಆಟದ ಬಗೆಗಿನ ಚರ್ಚೆ ಮತ್ತೆ ಚಾಲ್ತಿಗೆ ಬಂದಿದೆ. [ಸಂಕ್ರಾಂತಿ ದಿನ ಎಳ್ಳು-ಬೆಲ್ಲ ಯಾಕೆ ತಿನ್ನಬೇಕು?]
ಈ ಹಿನ್ನೆಲೆಯಲ್ಲಿ ಮೋದಿಯವರಿಗೆ ಪತ್ರ ಬರೆದಿರುವ ಶಶಿಕಲಾ, ಜಲ್ಲಿಕಟ್ಟು ನಿಷೇಧದಿಂದಾಗಿ ಇಡೀ ತಮಿಳುನಾಡಿನ ಜನತೆ ಅಸಮಾಧಾನಗೊಂಡಿದ್ದಾರೆ. ಹಾಗಾಗಿ, ತಮಿಳುನಾಡಿನ ಜನರಿಗೆ ಖುಷಿಕೊಡುವ ನಿಟ್ಟಿನಲ್ಲಿ ಜಲ್ಲಿ ಕಟ್ಟುಗೆ ಇರುವ ಕಾನೂನು ತೊಡಕುಗಳನ್ನು ನಿವಾರಿಸಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಶಶಿಕಲಾ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಏತನ್ಮಧ್ಯೆ, ಜಲ್ಲಿಕಟ್ಟು ಕ್ರೀಡೆಯ ಬಗ್ಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಮುಖ್ಯಮಂತ್ರಿ ಪನೀರ್ ಸೆಲ್ವಂ, "ಜಲ್ಲಿಕಟ್ಟು ಕ್ರೀಡೆಗೆ ಇರುವ ಕಾನೂನು ತೊಡಕುಗಳು ಶೀಘ್ರದಲ್ಲೇ ನಿವಾರಣೆಯಾಗಲಿದ್ದು, ಮುಂದಿನ ವಾರ ಕ್ರೀಡೆಗೆ ಅನುಮತಿ ಸಿಗಲಿದೆ" ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2014ರಲ್ಲಿ ಸುಪ್ರೀಂ ಕೋರ್ಟ್ ಜಲ್ಲಿಕಟ್ಟು ಕ್ರೀಡೆಯನ್ನು ನಿಷೇಧಿಸಿತ್ತು. ಕಳೆದ ವರ್ಷ, ತನ್ನ ತೀರ್ಪನ್ನು ಪುನರ್ ಪರಿಶೀಲಿಸಬೇಕಾಗಿ ಬಂದಿದ್ದ ಅರ್ಜಿಯನ್ನೂ ವಜಾಗೊಳಿಸಿತ್ತು.