ಏಟಿಗೆ ಎದಿರೇಟು: ಮೋದಿ ವಿರುದ್ಧ ಆಯೋಗಕ್ಕೆ ದೂರು
ನವದೆಹಲಿ, ನ.10: ಏಟಿಗೆ ಎದಿರೇಟು ಎನ್ನುವಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಇತ್ತೀಚೆಗೆ ದೂರು ನೀಡಿದ್ದ ಬಿಜೆಪಿಗೆ ಈಗ ಅದುವೇ ಮುಳುವಾಗಿದೆ.
ತಮ್ಮ ನಾಯಕನ ವಿರುದ್ಧ ದೂರು ನೀಡಿದ್ದಕ್ಕೆ ಪ್ರತೀಕಾರ ರೂಪವಾಗಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಕಾಂಗ್ರೆಸ್ ದೂರು ನೀಡಿದೆ. ಈ ಸಂಬಂಧ ಕೇಂದ್ರ ಚುನಾವಣಾ ಮುಖ್ಯ ಆಯುಕ್ತ ವಿ.ಸಂಪತ್ ಅವರಿಗೆ ದೂರು ನೀಡಿರುವ ಕಾಂಗ್ರೆಸ್ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಮಾಡಿದೆ.
ಇತ್ತೀಚೆಗೆ ನರೇಂದ್ರ ಮೋದಿ ಛತ್ತೀಸ್ ಗಢದಲ್ಲಿ ಪಕ್ಷದ ಪ್ರಚಾರ ನಡೆಸುವ ವೇಳೆ ಕಾಂಗ್ರೆಸ್ ಪಕ್ಷದ ಚಿಹ್ನೆಯಾದ ಹಸ್ತ ಮತ್ತು ಅದರ ಗುರುತಿನ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ಹಸ್ತವೆಂದರೆ ಕೂನಿ ಪಂಜಾಬ್ (ರಕ್ತದ ಎಲೆ) ಮತ್ತು ಕೈ ಎಂದರೆ ಜಲೀಂ ಹಾಥ್ (ಅಪಾಯಕಾರಿ ಕೈ) ಎಂದು ಆರೋಪ ಮಾಡಿದ್ದರು.

ಇದನ್ನೇ ಅಸ್ತ್ರ ಮಾಡಿಕೊಂಡ ಕಾಂಗ್ರೆಸ್ ಮೋದಿ ವಿರುದ್ಧ ತಿರುಗಿ ಬಿದ್ದಿದೆ. ಚುನಾವಣಾ ನೀತಿ ಉಲ್ಲಂಘಿಸಿದ ಆರೋಪದ ಮೇಲೆ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಕಾನೂನು ಘಟಕದ ಕಾರ್ಯದರ್ಶಿ ಕೆ.ಸಿ.ಮಿತ್ತಲ್ ಆಯೋಗಕ್ಕೆ ದೂರು ನೀಡಿದ್ದಾರೆ.
ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ ಮುಜಾಫರ್ ನಗರದಲ್ಲಿ ನಡೆದ ಗಲಭೆಗೆ ಐಎಸ್ ಐ ಕುಮ್ಮಕ್ಕಿದೆ ಎಂದು ಆರೋಪ ಮಾಡಿದ್ದರು. ಇದನ್ನು ಖಂಡಿಸಿದ್ದ ಬಿಜೆಪಿ ಆಯೋಗಕ್ಕೆ ದೂರು ನೀಡಿತ್ತು.
ಮೋದಿ ಅವರು ಕಳೆದ ಗುರುವಾರ ಛತ್ತೀಸ್ ಗಢದ ದೊನರ್ ಘರ್ ನಲ್ಲಿ ಮಾಡಿದ ಭಾಷಣದ ಡಿವಿಡಿ ಪ್ರತಿ ಹಾಗೂ ಮಾಧ್ಯಮಗಳಲ್ಲಿ ಬಂದಿರುವ ವರದಿಯನ್ನು ಆಯೋಗಕ್ಕೆ ಕಾಂಗ್ರೆಸ್ ಕಳುಹಿಸಿದೆ. ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಮೋದಿ ಅವರ ಭಾಷಣಗಳನ್ನು ದೇಶದೆಲ್ಲೆಡೆ ಪ್ರಸಾರ ಮಾಡಲಾಗಿದೆ ಎಂದು ಕಾಂಗ್ರೆಸ್ ಕಾನೂನು ಸಮಿತಿಯ ಕೆಸಿ ಮಿತ್ತಲ್ ಹೇಳಿದ್ದಾರೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ಮುಜಾಫರ್ ನಗರದ ಕೋಮುಗಲಭೆಗೂ ಐಎಸ್ಐಗೂ ನಂಟಿದೆ ಎಂಬಂತೆ ಮಾತನಾಡಿದ್ದು ಆಯೋಗದ ವಿಚಾರಣೆಯಲ್ಲಿರುವ ಬೆನ್ನಲ್ಲೇ ಮೋದಿ ಮೇಲಿನ ದೂರು ತಲುಪಿದೆ.(ಪಿಟಿಐ)












Click it and Unblock the Notifications