ಗೌರಿ ಲಂಕೇಶ್ ಹತ್ಯೆಗೆ ನಟ ಪವನ್ ಕಲ್ಯಾಣ್ ಟ್ವೀಟ್ ಆಕ್ರೋಶ
"ಸಾಮಾಜಿಕ ಬದ್ಧತೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಹೃದಯದಲ್ಲಿ ಧಗಧಗಿಸುತ್ತಿರುವ ಬೆಂಕಿಯನ್ನು ಇಟ್ಟುಕೊಂಡಿರುವ ವ್ಯಕ್ತಿಯ ಅಭಿವ್ಯಕ್ತಿಯನ್ನು ಹಣೆಯ ಮೇಲೆ ರಕ್ತದ ಕಲೆ ಮಾಡಿರುವ ಗುಂಡಿನಿಂದ ನಿಲ್ಲಿಸಲಾಗದು" ಎಂದು ತೆಲುಗು ಚಿತ್ರ ನಟ ಹಾಗೂ ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಹೇಳಿದ್ದಾರೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಗಳನ್ನು ಮಾಡಿರುವ ಪವನ್ ಕಲ್ಯಾಣ್, ಕೈಯಲ್ಲಿ ಸಣ್ಣದೊಂದು ಪೆನ್ ಹಿಡಿದು, ಸಾಮಾಜಿಕ ಬದ್ಧತೆಯಿಂದ ದುಡಿಯುತ್ತಿದ್ದ ವ್ಯಕ್ತಿಯ ಕೊಲೆ ಮಾಡಿರುವುದು ಹೀನ ಅಪರಾಧ ಕೃತ್ಯ ಎಂದು ಕರೆದಿದ್ದಾರೆ.

ಬಹು ಧರ್ಮ, ಬಹು ಭಾಷೆ, ಬಹು ಸಂಸ್ಕೃತಿ ಮತ್ತು ದೊಡ್ಡ ಪ್ರಮಾಣದ ಭೂ ಪ್ರದೇಶ ಹೊಂದಿದ ಭಾರತದಂಥ ದೇಶದಲ್ಲಿ ಭಿನ್ನವಾದ ರಾಜಕೀಯ ದೃಷ್ಟಿಕೋನಗಳನ್ನು ಹೊಂದಿರುತ್ತೇವೆ ಎಂದು ಕೂಡ ಸೇರಿಸಿದ್ದಾರೆ.
ಗೌರಿ ಲಂಕೇಶ್ ಅವರನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಮನೆಯ ಮುಂದೆಯೇ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಹತ್ಯೆ ನಂತರ ಬೆಂಗಳೂರು, ಚೆನ್ನೈ, ತಿರುವನಂತಪುರಂ, ಹೈದರಾಬಾದ್, ದೆಹಲಿ ಮತ್ತಿತರ ಕಡೆಗಳಲ್ಲಿ ಪ್ರತಿಭಟನೆಗಳು ನಡೆದವು.
"ಈ ಹತ್ಯೆ ಹಿಂದೆ ಇರುವವರು 'ಹಿಂದುತ್ವ'ವಾದಿಗಳು ಎಂದು ಹೇಳುವುದು ತಪ್ಪಾಗುತ್ತದೆ. ಏಕೆಂದರೆ ಈ ಪ್ರಕರಣದ ವಾಸ್ತವತೆ ತಿಳಿಯದೆ ಮಾತನಾಡುವುದು ತಪ್ಪಾಗುತ್ತದೆ" ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
#GauriLankesh #1 pic.twitter.com/uxFKR6op91
— Pawan Kalyan (@PawanKalyan) September 7, 2017
"ಆದರೆ, ಒಂದು ವಿಚಾರವನ್ನು ಮಾತ್ರ ಖಚಿತವಾಗಿ ಹೇಳಬಲ್ಲೆ. ಅವರು ತಮ್ಮ ನೆಲೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಒಬ್ಬ ಗೌರಿ ಲಂಕೇಶ್ ರನ್ನು ಇಷ್ಟು ಕ್ರೂರವಾಗಿ ಹತ್ಯೆ ಮಾಡುವ ಮೂಲಕ ಹತ್ತಾರು ಲಕ್ಷ ಗೌರಿಯರ ಸೃಷ್ಟಿಗೆ ಕಾರಣರಾಗುತ್ತಿದ್ದಾರೆ" ಎಂದಿದ್ದಾರೆ.
"ಯಾವಾಗ ನಿಮ್ಮ ವಿರೋಧಿಗಳು ವಾದಕ್ಕೆ ಬೆನ್ನು ತೋರಿಸುತ್ತಾರೋ ಆಗ ಗನ್ ಪೌಡರ್ ಮೂಲಕ ಹೇಳಿಕೆ ನೀಡುತ್ತಾರೆ. ಇದೇ ಸಾಬೀತು ಪಡಿಸುತ್ತದೆ: ನಾವು ಗೆಲ್ಲುತ್ತಿದ್ದೇವೆ, ವಿರೋಧಿಗಳು ನೆಲೆ ಕಳೆದುಕೊಳ್ಳುತ್ತಿದ್ದಾರೆ"- 'ದ ಅದರ್ ಪಾಥ್' ಎಂಬ ಪುಸ್ತಕದ ಮುನ್ನುಡಿಯಲ್ಲಿರುವ ಈ ವಾಕ್ಯವನ್ನು ಪವನ್ ಕಲ್ಯಾಣ್ ಉದಾಹರಿಸಿದ್ದಾರೆ.












Click it and Unblock the Notifications