4 ವರ್ಷದಲ್ಲಿ ನರೇಂದ್ರ ಮೋದಿಯವರ 9 ಪ್ರಮುಖ ನಿರ್ಧಾರ
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರ ನಾಲ್ಕು ವರ್ಷಗಳನ್ನು ಪೂರೈಸಿದೆ. ಈ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶ್ವ ನಾಯಕರ ಸಾಲಿನಲ್ಲಿ ನಿಂತಿದ್ದಾರೆ. ಆದರೆ ದೇಶದೊಳಗೆ ಹಲವು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಉದ್ಯೋಗ ಸೃಷ್ಟಿಯನ್ನು ಮಾಡಲು ವಿಫಲರಾಗಿದ್ದಾರೆ ಎಂಬುದು ಬಹಳ ಮುಖ್ಯವಾದದ್ದು.
ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ತೆಗೆದುಕೊಂಡ ಹಲವು ನಿರ್ಧಾರಗಳ ಬಗ್ಗೆ ಪರ-ವಿರೋಧ ಕೇಳಿಬಂದಿವೆ. ಅಂಥವುಗಳ ಪೈಕಿ ಪ್ರಮುಖವಾದ ಹಾಗೂ ಸಾಂಕೇತಿಕವಾದ ಒಂಬತ್ತು ನಿರ್ಧಾರಗಳನ್ನು ವಿಶ್ಲೇಷಣೆ ಮಾಡುವಂಥ ವರದಿ ಇದು. ಮೋದಿ ಅಧಿಕಾರ ವಹಿಸಿಕೊಂಡ ಮೇಲೆ ಜನರ ಮೇಲೆ ಬೀರಿದ ಪರಿಣಾಮದ ಆಧಾರದಲ್ಲಿ ಇವುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಮೋದಿ ಸರ್ಕಾರಕ್ಕೆ ನಾಲ್ಕು ವರ್ಷ: ಹರ್ಷವೋ, ನಿರಾಶೆಯೋ?!
ಕಳೆದ ಎರಡು ದಶಕದಲ್ಲೇ ಭಾರತದ ಪ್ರಧಾನಿಯೊಬ್ಬರು ಈ ಪರಿಯಾಗಿ ಪರ-ವಿರೋಧ ಚರ್ಚೆಗೆ ಕಾರಣವಾಗುತ್ತಿರುವುದು ಇದೇ ಮೊದಲು ಎಂಬಂತೆ ಇದೆ ಸದ್ಯದ ಸನ್ನಿವೇಶ. ಅಧಿಕಾರಕ್ಕೆ ಬರುವ ಮುಂಚೆ ನೀಡಿದ್ದ ಭರವಸೆಗಳನ್ನು ನರೇಂದ್ರ ಮೋದಿ ನೇತೃತ್ವದ ಸರಕಾರ ಈಡೇರಿಸಲಿಲ್ಲ ಎಂಬ ಆಕ್ಷೇಪ ಕೇಳಿಬರುತ್ತಿರುವ ಇಂಥ ಸನ್ನಿವೇಶದಲ್ಲಿ ಆ ಒಂಬತ್ತು ಪ್ರಮುಖ ನಿರ್ಧಾರಗಳ ಕಡೆಗೆ ಒಮ್ಮೆ ಕಣ್ಣು ಹಾಯಿಸಿಬಿಡೋಣ.
ನೋಟು ನಿಷೇಧ
ಕಪ್ಪು ಹಣ ನಿಯಂತ್ರಣಕ್ಕೆ ಹಾಗೂ ಉಗ್ರಗಾಮಿಗಳಿಗೆ ಹಣಕಾಸಿನ ನೆರವು ದೊರೆಯದಿರಲು ಅಪನಗದೀಕರಣದ ದಿಟ್ಟ ನಿರ್ಧಾರ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ ಭಾರೀ ಟೀಕೆ ಎದುರಿಸಬೇಕಾಯಿತು. ಐವತ್ತು ದಿನದೊಳಗಾಗಿ ಇಡೀ ದೇಶ ಶುದ್ಧವಾಗಿರುತ್ತದೆ ಎಂಬ ಭರವಸೆ ನೀಡಿದ್ದರು ಪ್ರಧಾನಿ. ಆದರೆ ನೀಡಿದ್ದ ಮಾತಿನಂತೆ ನಡೆಯಲಿಲ್ಲ. ಮಹಮ್ಮದ್ ಬಿನ್ ತುಘಲಕ್ ನ ನಿರ್ಧಾರದ ಜತೆಗೆ ನೋಟು ನಿಷೇಧವನ್ನು ಹೋಲಿಸಲಾಯಿತು. ಈ ವರೆಗೆ ನೋಟು ನಿಷೇಧದ ಬಗ್ಗೆ ಪರ-ವಿರೋಧ ಚರ್ಚೆ ನಿಂತಿಲ್ಲ.
ಮೇಕ್ ಇನ್ ಇಂಡಿಯಾ
ನಾಲ್ಕು ವರ್ಷದ ಹಿಂದೆಯೇ ಆರಂಭವಾದ ಅಭಿಯಾನ ಇದು. ವಿದೇಶಿ ಕಂಪೆನಿಗಳಿಗೆ, "ಭಾರತಕ್ಕೆ ಬನ್ನಿ" ಮತ್ತು ದೇಶವನ್ನು ಉತ್ಪಾದನಾ ಹಬ್ ಆಗಿ ಮಾಡಿ ಎಂದು ಜಾಗತಿಕ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಹ್ವಾನ ನೀಡಿದರು. ಇದು ಪ್ರಧಾನಿಯಾದ ನಂತರದ ಮೊದಲ ಸ್ವಾತಂತ್ರ್ಯ ದಿನಾಚರಣೆ ವೇಳೆ ನೀಡಿದ ಕರೆ. ಇದು ಹೊಸ ಉತ್ಸಾಹವನ್ನು ನೀಡಿತು. ಜನಪ್ರಿಯತೆಯನ್ನು ತಂದುಕೊಟ್ಟಿತು.
ಸ್ವಚ್ಛ ಭಾರತ
ಅದೇ ಸಂದರ್ಭದಲ್ಲೇ ಭಾಷಣದ ಎರಡನೇ ಭಾಗದಲ್ಲಿ ದೇಶದ ಬಗ್ಗೆ ತಮ್ಮ ಕನಸುಗಳನ್ನು ಹಂಚಿಕೊಂಡಿದ್ದರು ನರೇಂದ್ರ ಮೋದಿ. ಹೆಣ್ಣು ಭ್ರೂಣ ಹತ್ಯೆ ತಡೆ, ಲೈಂಗಿಕ ಅಪರಾಧಗಳಿಗೆ ತಡೆ ಮತ್ತು ಶೌಚಾಲಯದ ಸ್ವಚ್ಛತೆ ಹೀಗೆ ಸ್ವಚ್ಛ ಭಾರತದ ಕನಸಿನ ಬಗ್ಗೆ ಹೇಳಿಕೊಂಡಿದ್ದರು. ಆ ಆಲೋಚನೆ ತುರ್ತಾಗಿ ಜಾರಿಗೆ ಬಂತು. ಆದರೆ ಅದರ ಕಲ್ಪನೆ ಪೂರ್ಣ ಪ್ರಮಾಣದಲ್ಲಿ ರೂಪುಗೊಂಡಿರಲಿಲ್ಲ ಎಂಬ ಆರೋಪ ಕೇಳಿಬಂತು. ದೆಹಲಿ ಸೇರಿದಂತೆ ದೇಶದ ನಾನಾ ನಗರಗಳಲ್ಲಿ ವಾಯು ಮಾಲಿನ್ಯದ ಸಮಸ್ಯೆ ಕಾಣಿಸಿಕೊಂಡಾಗ ಪದೇಪದೇ ನೆನಪಾಗಿದ್ದು ಇದೇ ಸ್ವಚ್ಛ ಭಾರತ ಅಭಿಯಾನ.
ಜನ್ ಧನ್ ಯೋಜನೆ
ನರೇಂದ್ರ ಮೋದಿ ಸಾಧನೆ ಎಂದು ನಿಸ್ಸಂದೇಹವಾಗಿ ಹೇಳಬಹುದಾದ ಯೋಜನೆ ಯಾವುದಾದರೂ ಇದ್ದರೆ ಅದು ಜನ್ ಧನ್ ಯೋಜನೆ. ಯುಪಿಎ ಸರಕಾರ ಇರುವಾಗಲೇ ಇದು ಆರಂಭವಾಯಿತಾದರೂ ಅದ್ಭುತವಾದ ವೇಗ ಪಡೆದದ್ದು ಮೋದಿ ಸರಕಾರದ ಅವಧಿಯಲ್ಲಿ. ಶೂನ್ಯ ಬಾಕಿ ಉಳಿತಾಯ ಖಾತೆ ಎಂಬ ಕಾರಣಕ್ಕೆ ಕೋಟ್ಯಂತರ ಸಂಖ್ಯೆಯಲ್ಲಿ ಬ್ಯಾಂಕ್ ಗಳಲ್ಲಿ ಹೊಸದಾಗಿ ಖಾತೆಗಳನ್ನು ತೆರೆಯಲಾಯಿತು. ನೇರ ನಗದು ವರ್ಗಾವಣೆ ಸೇರಿದಂತೆ ಸರಕಾರದ ಹಲವು ಯೋಜನೆಗಳನ್ನು ಜನರಿಗೆ ತಲುಪಿಸಲು ಇದರಿಂದ ನೆರವಾಯಿತು.
ಸ್ಮಾರ್ಟ್ ಸಿಟಿ ಮತ್ತು ಡಿಜಿಟಲ್ ಇಂಡಿಯಾ
ಈ ಎರಡು ಯೋಜನೆಗಳು ಮೋದಿ ಅವರ ಪ್ರಣಾಳಿಕೆಯಲ್ಲಿ ಇದ್ದದ್ದು ಹಾಗೂ ನಗರ ಕೇಂದ್ರಿತ ಮತದಾರರನ್ನು ಗಮನದಲ್ಲಿ ಇಟ್ಟುಕೊಂಡು ರೂಪಿಸಿದಂಥದ್ದು. ಈ ವಿಚಾರದಲ್ಲಿ ಸಿಂಗಾಪೂರ್ ಹಾಗೂ ಅದರ ಮೊದಲ ಪ್ರಧಾನಮಂತ್ರಿ ಲೀ ಕ್ವಾನ್ ಯಿವ್ ಅವರು ನರೇಂದ್ರ ಮೋದಿ ಪಾಲಿಗೆ ಆದರ್ಶ.
ಬುಲೆಟ್ ರೈಲು ಮತ್ತು ಸಬ್ಸಿಡಿ ಬಿಟ್ಟು ಕೊಡುವುದು
ಈಚೆಗೆ ಜಪಾನ್ ಗೆ ಭೇಟಿ ನೀಡಿದ್ದ ನರೇಂದ್ರ ಮೋದಿ, ಅಲ್ಲಿನ ಪ್ರಧಾನಿ ಶಿಂಜೋ ಅಬೆ ಅವರ ಜತೆಗೆ ಬುಲೆಟ್ ರೈಲಿನಲ್ಲಿ ಕಾಣಿಸಿಕೊಂಡಿದ್ದರು. ಈ ಯೋಜನೆ ಮೋದಿ ಅವರ ಪಾಲಿಗೆ ಮಹತ್ವಾಕಾಂಕ್ಷೆಯದು. ಅಷ್ಟೇ ಅಲ್ಲ, ಅದರ ಸಾಕಾರಕ್ಕಾಗಿ ಹೆಜ್ಜೆಗಳನ್ನು ಸಹ ಇಡಲು ಆರಂಭಿಸಿದ್ದಾರೆ. ಇನ್ನು ಅಡುಗೆ ಅನಿಲ ಸಬ್ಸಿಡಿ ಬಿಟ್ಟುಕೊಡುವ ವಿಚಾರವಾಗಿ ಪ್ರಧಾನಿ ಮಾಡಿದ ಮನವಿಗೆ ಭರ್ಜರಿ ಪ್ರತಿಕ್ರಿಯೆ ಬಂತು.
ಮನ್ ಕೀ ಬಾತ್
ಜನರನ್ನು ತಲುಪುವ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಪರಿಣಾಮಕಾರಿಯಾಗಿ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಅಕ್ಟೋಬರ್ 2014ರಲ್ಲಿ ರೇಡಿಯೋ ಕಾರ್ಯಕ್ರಮ 'ಮನ್ ಕೀ ಬಾತ್' ಆರಂಭಿಸಿದರು. ಈ ಕಾರ್ಯಕ್ರಮದ ಮೂಲಕ ಏನನ್ನು ಸಾಧಿಸಬೇಕು ಎಂದು ಅಂದುಕೊಂಡಿದ್ದರೋ ಅದನ್ನು ಸಾಧಿಸಲು ಸಾಧ್ಯವಾಯಿತು. ಏನೇ ಟೀಕೆಗಳು ಬಂದರೂ ಮೋದಿ ಅವರ ರೇಡಿಯೋ ಕಾರ್ಯಕ್ರಮವು ಬಹಳ ಜನಪ್ರಿಯ. ಆದರೆ ಇದು ಎಷ್ಟು ಕಾಲ ಇರುತ್ತದೆ? ಕಾದು ನೋಡೋಣ.