'ಬಂಗಾಳದ ಹುಲಿ' ಗಂಗೂಲಿಗೆ ಮತ್ತೆ ಗಾಳ ಹಾಕಿದ ಬಿಜೆಪಿ
ಕೋಲ್ಕತ್ತಾ, ಜ.22: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಬಿಜೆಪಿ ಸೇರಿಸಿಕೊಳ್ಳುವ ಪ್ರಯತ್ನ ವಿಫಲವಾಗಿತ್ತು. ಈಗ ಮತ್ತೊಮ್ಮೆ 'ಬಂಗಾಳ ಹುಲಿ' ಗಂಗೂಲಿಗೆ ಬಿಜೆಪಿ ಗಾಳ ಹಾಕಿದೆ.
ಅಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ನೀಡಿದ ಆಫರ್ ಅನ್ನು 'ದಾದಾ' ಸೌರವ್ ಗಂಗೂಲಿ ನಿರಾಕರಿಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಭಾರತದ ಮಾಜಿ ಕ್ರಿಕೆಟ್ ನಾಯಕ ಸೌರವ್ ಗಂಗೂಲಿಗೆ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಟಿಕೆಟ್ ನೀಡಲು ಮುಂದಾಗಿತ್ತು. ಅದರೆ, ಬಿಜೆಪಿ ಆಫರ್ ಅಷ್ಟೇ ಅಲ್ಲ. ಚುನಾವಣೆ, ರಾಜಕೀಯ ಸಹವಾಸವೇ ಬೇಡ ಎಂದು ಸೌರವ್ ಗಂಗೂಲಿ ಉತ್ತರಿಸಿದ್ದರು. [ಮೋದಿ ಆಫರ್ ರಿಜೆಕ್ಟ್ ಮಾಡಿದ ಗಂಗೂಲಿ]
ಸಚಿನ್ ಅವರನ್ನು ರಾಜ್ಯ ಸಭೆಗೆ ಕಳಿಸಿದ ಕಾಂಗ್ರೆಸ್ ರೀತಿಯಲ್ಲಿ ಗಂಗೂಲಿ ಅವರನ್ನು ಬಿಜೆಪಿ ಕಳಿಸಲು ಯತ್ನಿಸುತ್ತಾರೆ ಎಂಬ ಸಾಧ್ಯತೆಯೂ ಇತ್ತು. ಆದರೆ, ನಾನು ಕ್ರಿಕೆಟ್ ಮೈದಾನವನ್ನಷ್ಟೇ ಬಲ್ಲೆ ರಾಜಕೀಯದ ಆಟ ನನಗೆ ತಿಳಿದಿಲ್ಲ. ನನಗೆ ಬೇಕಾಗೂ ಇಲ್ಲ ಎಂದು ಗಂಗೂಲಿ ಹೇಳಿದ್ದರು.

ಅಮಿತ್ ಶಾ ಯೋಜನೆ : ಆದರೆ, ಈಗ ಗಂಗೂಲಿ ಅವರನ್ನು ಸೆಳೆಯಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸೌರವ್ ಗಂಗೂಲಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಯೋಜನೆ ಹಾಕಿಕೊಂಡಿದ್ದು ಸ್ಥಳೀಯ ನಾಯಕರಿಗೆ ಈ ಬಗ್ಗೆ ಸೂಚನೆ ಕೊಟ್ಟಿದ್ದಾರೆ. ಅದರಂತೆ, ಮಾತುಕತೆ ಮುಂದುವರೆದಿದೆ.
ಎಡಪಕ್ಷಗಳು, ತೃಣ ಮೂಲ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಪ್ರಾಬಲ್ಯ ಮುರಿಯಲು ಬಿಜೆಪಿ ತಂತ್ರ ರೂಪಿಸುತ್ತಿದೆ. ಗಂಗೂಲಿ ಏನಾದರೂ ಬಿಜೆಪಿ ಕಡೆ ವಾಲಿದರೆ ಇನ್ನಷ್ಟು ಜನ ಆಡಳಿತರೂಢ ಟಿಎಂಸಿ ನಾಯಕರು ಬಿಜೆಪಿ ಸೇರುವ ಸಾಧ್ಯತೆಯಿದೆ.
ಇತ್ತೀಚಿಗೆ ಪಶ್ಚಿಮ ಬಂಗಾಳದ ಸಚಿವ ಮಂಜಲ್ ಕೃಷ್ಣ ಠಾಕೂರ್ ಅವರು ಪಕ್ಷ ತೊರೆದು ಬಿಜೆಪಿ ಸೇರಿದ್ದರು. ನಂತರ ಠಾಕೂರ್ ಅವರ ಪುತ್ರ ಸುಬ್ರತಾ ಠಾಕೂರ್ ಕೂಡಾ ಬಿಜೆಪಿ ಸೇರಿದರು. ಬಿಜೆಪಿ ಸೇರ್ಪಡೆ ಬಗ್ಗೆ ಸೌರವ್ ಗಂಗೂಲಿ ಇನ್ನೂ ಸ್ಪಷ್ಟಣೆ ನೀಡಿಲ್ಲ. ಅದರೆ, ಮೂಲಗಳ ಪ್ರಕಾರ ಸೇರ್ಪಡೆ ಬಹುತೇಕ ಖಚಿತ ಎನ್ನಲಾಗಿದೆ.












Click it and Unblock the Notifications