ಮೋದಿ ಆಫರ್ ರಿಜೆಕ್ಟ್ ಮಾಡಿದ ಗಂಗೂಲಿ
ಕೋಲ್ಕತ್ತಾ, ಡಿ.15: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ನೀಡಿದ ಆಫರ್ ಅನ್ನು 'ದಾದಾ' ಸೌರವ್ ಗಂಗೂಲಿ ನಿರಾಕರಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಭಾರತದ ಮಾಜಿ ಕ್ರಿಕೆಟ್ ನಾಯಕ 'ಬೆಂಗಾಳ ಹುಲಿ' ಸೌರವ್ ಗಂಗೂಲಿಗೆ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಟಿಕೆಟ್ ನೀಡಲು ಮುಂದಾಗಿತ್ತು.
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಗಂಗೂಲಿಗೆ ಟಿಕೆಟ್ ಆಫರ್ ನೀಡಿದ್ದು, ತನ್ನ ಪಕ್ಷ ಅಧಿಕಾರಕ್ಕೆ ಬಂದರೆ ಸಂಪುಟದಲ್ಲಿ ಕ್ರೀಡಾ ಖಾತೆಯನ್ನು ನೀಡುವುದಾಗಿ ಗಂಗುಲಿಗೆ ಮೋದಿ ಭರವಸೆ ನೀಡಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿತ್ತು. 'ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಫರ್ ಬಂದಿದೆ. ಆದರೆ, ಏನು ಮಾಡಬೇಕೆಂದು ಇನ್ನೂ ನಿರ್ಧರಿಸಿಲ್ಲ' ಎಂದು ಬಂಗಾಳದ ದಿನ ಪತ್ರಿಕೆಯೊಂದಕ್ಕೆ ತಕ್ಷಣದ ಪ್ರತಿಕ್ರಿಯೆ ನೀಡಿದ್ದ ಗಂಗೂಲಿ ಈಗ ನಾನು ಈ ಆಫರ್ ಒಪ್ಪಿಕೊಳ್ಳುತ್ತಿಲ್ಲ ಎಂದಿದ್ದಾರೆ.
ಮುಂಬರುವ ಮೇ ತಿಂಗಳಿನಲ್ಲಿ ನಡೆಯಲಿರುವ ಮಹಾಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿಲ್ಲ. ಬಿಜೆಪಿ ನೀಡಿದ ಆಹ್ವಾನವನ್ನು ನಾನು ವಿನಮ್ರವಾಗಿ ತಿರಸ್ಕರಿಸಿದ್ದೇನೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. ಬಿಜೆಪಿಗೆ ಗಂಗೂಲಿ ಅವರ ಸೇರ್ಪಡೆಯಿಂದಾಗಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಾಗೂ ಮೋದಿ ಅಲೆ ಎಬ್ಬಿಸುವ ಉತ್ಸಾಹದಲ್ಲಿದ್ದ ಬಿಜೆಪಿ ಕಾರ್ಯಕರ್ತರಿಗೆ ಭಾರಿ ನಿರಾಶೆಯಾಗಿದೆ.

ಎಡಪಕ್ಷಗಳು, ತೃಣ ಮೂಲ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಬಿಜೆಪಿ ಅಲೆ ಹತ್ತಿಕ್ಕಲು ತಂತ್ರ ಹೆಣೆಯಬಹುದಾಗಿದೆ. ಸೌರವ್ ಗಂಗೂಲಿ ಅವರು ಬಿಜೆಪಿ ಆಫರ್ ಅಷ್ಟೇ ಅಲ್ಲ. ಚುನಾವಣೆ, ರಾಜಕೀಯ ಸಹವಾಸವೇಬೇಡ ಎಂದಿದ್ದಾರೆ.
ಸಚಿನ್ ಅವರನ್ನು ರಾಜ್ಯ ಸಭೆಗೆ ಕಳಿಸಿದ ಕಾಂಗ್ರೆಸ್ ರೀತಿಯಲ್ಲಿ ಗಂಗೂಲಿ ಅವರನ್ನು ಬಿಜೆಪಿ ಕಳಿಸಲು ಯತ್ನಿಸುತ್ತಾರೆ ಎಂಬ ಸಾಧ್ಯತೆಯೂ ಇತ್ತು. ಆದರೆ, ನಾನು ಕ್ರಿಕೆಟ್ ಮೈದಾನವನ್ನಷ್ಟೇ ಬಲ್ಲೆ ರಾಜಕೀಯದ ಆಟ ನನಗೆ ತಿಳಿದಿಲ್ಲ. ನನಗೆ ಬೇಕಾಗೂ ಇಲ್ಲ ಎಂದು ಗಂಗೂಲಿ ಹೇಳಿದ್ದಾರೆ.
ಬೆಂಗಾಳದಲ್ಲಿ ಸದ್ಯಕ್ಕೆ ತೃಣಮೂಲ ಕಾಂಗ್ರೆಸ್ 42 ಸ್ಥಾನ ಪಡೆದು ಭಾರಿ ಪ್ರಭಾವ ಹೊಂದಿದೆ. ದಾರ್ಜಲಿಂಗ್ ನಲ್ಲಿ ಬಿಜೆಪಿ ಏಕೈಕ ಸ್ಥಾನ ಹೊಂದಿದೆ. ಗಂಗೂಲಿ ಏನಾದರೂ ಬಿಜೆಪಿ ಕಡೆ ವಾಲಿದರೆ ಕನಿಷ್ಠ ಪಕ್ಷದ ಪರ ಪ್ರಚಾರಕ್ಕೆ ಬಂದರೂ ಸಾಕು ತೃಣಮೂಲ ಕಾಂಗ್ರೆಸ್ ಗೆ ಸೆಡ್ಡು ಹೊಡೆಯಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.












Click it and Unblock the Notifications