ನಿಲೇಕಣಿಗೆ ಪ್ರತಿಷ್ಠಿತ ವಿ ಕೃಷ್ಣಮೂರ್ತಿ ಎಕ್ಸೆಲೆನ್ಸ್ ಪ್ರಶಸ್ತಿ
ಹೈದರಾಬಾದ್, ಸೆ. 13 : ಭಾರತದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಮಾಜಿ ಚೇರ್ಮನ್, ದೇಶದ ಜನತೆಗೆ 'ಆಧಾರ್' ನೀಡಿದ ಕನ್ನಡಿಗ ನಂದನ್ ನಿಲೇಕಣಿ ಅವರಿಗೆ ಪ್ರತಿಷ್ಠಿತ ವಿ ಕೃಷ್ಣಮೂರ್ತಿ ಅವಾರ್ಡ್ ಫಾರ್ ಎಕ್ಸೆಲೆನ್ಸ್ ನೀಡಿ ಶುಕ್ರವಾರ ಗೌರವಿಸಲಾಯಿತು.
ಸೆಂಟರ್ ಫಾರ್ ಆರ್ಗನೈಸೇಷನ್ ಡೆವಲಪ್ಮೆಂಟ್ (ಸಿಓಡಿ)ನಲ್ಲಿ ಶುಕ್ರವಾರ ಸಂಜೆ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ನಂದನ್ ನಿಲೇಕಣಿ ಅವರಿಗೆ ಈ ಪ್ರಶಸ್ತಿಯನ್ನು ತಮಿಳುನಾಡು ರಾಜ್ಯಪಾಲ ಕೆ. ರೋಶಯ್ಯ (ಕರ್ನಾಟಕದ ಮಾಜಿ ಹಂಗಾಮಿ ರಾಜ್ಯಪಾಲ) ಅವರು ಪ್ರದಾನ ಮಾಡಿದರು.
ವೃತ್ತಿಯಲ್ಲಿ ಅಸಾಧಾರಣ ಸಾಧನೆ ಮಾಡಿದವರಿಗೆ ಸೆಂಟರ್ ಫಾರ್ ಆರ್ಗನೈಸೇಷನ್ ಡೆವಲಪ್ಮೆಂಟ್ ಸ್ಥಾಪಿಸಿರುವ ವಿ ಕೃಷ್ಣಮೂರ್ತಿ ಅವಾರ್ಡ್ ಫಾರ್ ಎಕ್ಸೆಲೆನ್ಸ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಸರಕಾರಿ ಸಂಸ್ಥೆಗಳಲ್ಲಿ, ಎನ್ಜಿಓಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದವರಿಗೆ, ವಿಜ್ಞಾನಿಗಳಿಗೆ, ಶಿಕ್ಷಣತಜ್ಞರಿಗೆ ಈ ಪ್ರಶಸ್ತಿಯನ್ನು 2000ದಿಂದ ನೀಡುತ್ತ ಬರಲಾಗಿದೆ.

ಅಸಾಧ್ಯ ವೃತ್ತಿಪರತೆಯನ್ನು ಮೆರೆದು, ತಮ್ಮ ಕೌಶಲ್ಯದಿಂದ ಸಂಸ್ಥೆ ಕಟ್ಟಿದವರು, ಸಂಸ್ಥೆಯನ್ನು ಉನ್ನತಮಟ್ಟಕ್ಕೆ ತೆಗೆದುಕೊಂಡು ಹೋದವರು, ಈಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದವರು, ತಮ್ಮ ದೃಷ್ಟಿಕೋನ ಮತ್ತು ಕಾರ್ಯತತ್ಪರತೆಯಿಂದ ನಾಯಕತ್ವ ಗುಣ ಹೊಂದಿದವರು, ಭವಿಷ್ಯದ ನಾಯಕರನ್ನು ಬೆಳೆಸಿದವರು ಈ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ.
ತಮ್ಮ ದೂರದರ್ಶಿತ್ವದ ನಾಯಕತ್ವ ಮತ್ತು ಸಂಸ್ಥೆ ಕಟ್ಟುವ ಸಾಮರ್ಥ್ಯದಿಂದಾಗಿ ಬಿಎಚ್ಇಎಲ್ ಮತ್ತು ಎಸ್ಐಎಲ್ನಂಥ ಸಂಸ್ಥೆಗಳನ್ನು ಬೆಳೆಸಿದ, ಮಾರುತಿ ಆಟೋಮೊಬೈಲ್ ಸಂಸ್ಥೆಯಲ್ಲಿ ಕ್ರಾಂತಿಕಾರಿ ಅಭಿವೃದ್ಧಿಯನ್ನು ತಂದ, ಜನಪರ ಕಾಳಜಿ ಹೊಂದಿದ್ದ ಅತ್ಯದ್ಭುತ ಕೈಗಾರಿಕೋದ್ಯಮಿ 'ಪದ್ಮ ಭೂಷಣ' ಡಾ. ವಿ. ಕೃಷ್ಣಮೂರ್ತಿ ಅವರ ಗೌರವಾರ್ಥ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಇಂತಹ ಪ್ರತಿಷ್ಠಿತ ಪ್ರಶಸ್ತಿಗೆ ಇನ್ಫೋಸಿಸ್ ಮಾಜಿ ಸಿಇಓ ನಂದನ್ ನಿಲೇಕಣಿ ಅವರು ಭಾಜನರಾಗಿದ್ದಾರೆ. ನಿಲೇಕಣಿ ಅವರು ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಿ, ಬಿಜೆಪಿಯ ಅನಂತ್ ಕುಮಾರ್ ಅವರಿಗೆ ಸೋತಿದ್ದರು. [ಬೆಂಗಳೂರು ದಕ್ಷಿಣ : ಇಂಟರೆಸ್ಟಿಂಗ್ ಸಂಗತಿಗಳು]












Click it and Unblock the Notifications