ಸೆ. 2ಕ್ಕೆ ಕೆಸಿಆರ್ ರಿಂದ ತೆಲಂಗಾಣ ವಿಧಾನಸಭೆ ವಿಸರ್ಜನೆ ಘೋಷಣೆ?
ಹೈದರಾಬಾದ್, ಸೆಪ್ಟೆಂಬರ್ 1: ನಿರೀಕ್ಷೆಯಂತೆ ಏನಾದರೂ ಆದರೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಭಾನುವಾರದಂದು ಅಲ್ಲಿನ ವಿಧಾನಸಭೆ ವಿಸರ್ಜನೆ ಘೋಷಣೆ ಮಾಡುವ ಸಾಧ್ಯತೆ ಇದೆ. ಈ ವರ್ಷದ ಡಿಸೆಂಬರ್ ನಲ್ಲಿ ನಾಲ್ಕು ರಾಜ್ಯಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆ ಜತೆಗೆ ತೆಲಂಗಾಣಕ್ಕೂ ನಡೆಯಲಿ ಎಂಬ ಲೆಕ್ಕಾಚಾರ ಹಾಕಿರುವಂತಿದೆ.
ನಾಳೆ ಮಧ್ಯಾಹ್ನ ಒಂದು ಗಂಟೆಗೆ ತೆಲಂಗಾಣ ರಾಜ್ಯದ ಸಂಪುಟ ಸಭೆ ನಡೆಯಲಿದೆ. ಏಕೆಂದರೆ ಆ ನಂತರ ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ಸಮಾವೇಶವೊಂದು ನಡೆಯಲಿದೆ. ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷದ ವತಿಯಿಂದ ರಂಗಾರೆಡ್ಡಿ ಜಿಲ್ಲೆಯಲ್ಲಿಯಲ್ಲಿ ಎರಡು ಸಾವಿರ ಎಕರೆ ಸ್ಥಳವನ್ನು ಗುರುತಿಸಿ, ಅಲ್ಲಿ ಭಾನುವಾರ ಸಮಾವೇಶ ನಡೆಸಲಾಗುತ್ತಿದೆ. ಅದಕ್ಕೆ ಪ್ರಗತಿ ನಿವೇದನಾ ಸಭಾ ಎಂದು ಹೆಸರಿಡಲಾಗಿದೆ.
ಲೋಕಸಭೆ-ವಿಧಾನಸಭೆಗೆ ಒಟ್ಟಿಗೆ ಚುನಾವಣೆ; ಯಾರು-ಏನೆಂದರು?
ಮುಖ್ಯವಾದ ರಾಜಕೀಯ ಘೋಷಣೆಯೊಂದನ್ನು ನಮ್ಮ ನಾಯಕರಿಂದ ನಿರೀಕ್ಷೆ ಮಾಡಬಹುದು. ಈ ಸಭೆಯ ನಂತರ ರಾಜ್ಯದ ರಾಜಕೀಯ ವಾತಾವರಣವೇ ಖಂಡಿತಾ ಬಿಸಿಯೇರುತ್ತದೆ ಎಂದು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮಗ ಹಾಗೂ ಅವರ ಸಂಪುಟದಲ್ಲಿ ಸಚಿವರೂ ಆಗಿರುವ ಕೆ.ಟಿ.ರಾಮರಾವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಟಿಆರ್ ಎಸ್ ಅಧಿಕಾರಾವಧಿ 2019ರ ಮೇ ತನಕ ಇದೆ
ಆದರೆ, ಇದು ವಿಧಾನಸಭೆ ವಿಸರ್ಜನೆಯ ಘೋಷಣೆಯೇ ಹಾಗೂ ಅವಧಿ ಪೂರ್ವವಾಗಿಯೇ ಚುನಾವಣೆಗೆ ಹೋಗಲಾಗುತ್ತದೆಯೇ ಎಂಬುದನ್ನು ಖಾತ್ರಿ ಪಡಿಸಿಲ್ಲ. ತೆಲಂಗಾಣ ರಾಷ್ಟ್ರೀಯ ಸಮಿತಿ ಅಧಿಕಾರಾವಧಿ ಮೇ 2019ರ ತನಕ ಇದೆ. ವೇಳಾಪಟ್ಟಿ ಪ್ರಕಾರ ಲೋಕಸಭೆ ಜತೆಗೆ ವಿಧಾನಸಭೆ ಚುನಾವಣೆ ನಡೆಯಬೇಕಿದೆ. ಸೆಪ್ಟೆಂಬರ್ 2ನೇ ತಾರೀಕು ತೆಲಂಗಾಣ ರಾಜ್ಯ ರಚನೆಯಾಗಿ ನಾಲ್ಕನೇ ವರ್ಷಾಚರಣೆ. ಈ ನಾಲ್ಕು ವರ್ಷದಲ್ಲಿ ಪಕ್ಷದ ಸಾಧನೆ ಏನು ಎಂಬುದನ್ನು ಜನರ ಮುಂದೆ ಇಡಲು ಟಿಆರ್ ಎಸ್ ನಿರ್ಧರಿಸಿದೆ. ಇನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಹ ತಮ್ಮ ಪಕ್ಷದ ನಾಯಕರಿಗೆ ತೆಲಂಗಾಣ ರಾಜ್ಯ ವಿಧಾನಸಭೆ ಚುನಾವಣೆಗೆ ಸಿದ್ಧರಿರುವಂತೆ, ಈ ವರ್ಷದ ಕೊನೆಗೆ ನಡೆಯಬಹುದು ಎಂಬ ಸೂಚನೆ ನೋಡಿದ್ದಾರೆ. ಈ ಸಂಬಂಧ ಪಕ್ಷದ ನಾಯಕರನ್ನು ಸಹ ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ರಾಜ್ಯದಲ್ಲಿ ವಿರೋಧ ಪಕ್ಷವೇ ಇಲ್ಲವೆಂದ ಕೆಸಿಆರ್ ಮಗಳು
ವಿರೋಧ ಪಕ್ಷಗಳು ಒಟ್ಟಾಗುತ್ತಿರುವುದು ಆಡಳಿತಾರೂಢ ಟಿಆರ್ ಎಸ್ ಪಕ್ಷಕ್ಕೆ ಚಿಂತೆಗೆ ಕಾರಣವಾಗಿದೆ. ಆದ್ದರಿಂದ ಅವಧಿಗೆ ಮುಂಚಿತವಾಗಿಯೇ ಚುನಾವಣೆಗೆ ತೆರಳಲು ಬಯಸಿದ್ದಾರೆ ಎಂದು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಉತ್ತಮ್ ಕುಮಾರ್ ರೆಡ್ಡಿ ಹೇಳಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಕೆಸಿಆರ್ ಮಗಳು ಕವಿತಾ, ರಾಜ್ಯದಲ್ಲಿ ವಿರೋಧಪಕ್ಷವೇ ಇಲ್ಲ. ಅವರು ತೀರಾ ಕಡಿಮೆ ಸ್ಥಾನ ಗಳಿಸಿ, ಎರಡನೆಯವರಾಗಿ ನಿಲ್ಲಬಹುದು ಎಂದಿದ್ದಾರೆ. ಕಳೆದ ನಾಲ್ಕು ವರ್ಷದಲ್ಲಿ ನಾವು ಮಾಡಿದ ಕೆಲಸದ ಬಗ್ಗೆ ನಂಬಿಕೆ ಇದೆ. ಆ ಸಾಧನೆಯ ಪಟ್ಟಿಯನ್ನು ಜನರ ಮುಂದಿಡುತ್ತೇವೆ. ನಮ್ಮ ನಾಯಕರಿಗೆ ಜನರ ಜತೆ ನೇರ ಸಂವಹನ ನಡೆಸುವುದರಲ್ಲೇ ನಂಬಿಕೆ ಎಂದು ಹೇಳಿದ್ದಾರೆ.
ಮಹಾಮೈತ್ರಿ ಎಂಬುದು ಕೆಟ್ಟ ಹೊಂದಾಣಿಕೆ ಎಂದ ಕೆಸಿಆರ್
ರಾಷ್ಟ್ರ ಮಟ್ಟದಲ್ಲಿನ ಮಹಾ ಮೈತ್ರಿಯನ್ನು ವ್ಯಂಗ್ಯವಾಡಿರುವ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಇದೊಂದು ಹೋಲಿಕೆ ಮಾಡಲಾಗದ ಕೆಟ್ಟ ಹೊಂದಾಣಿಕೆ ಎಂದಿದ್ದಾರೆ. ಇನ್ನು ಕಳೆದ ವಾರ ದೆಹಲಿಗೆ ತೆರಳಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜ್ ನಾಥ್ ಸಿಂಗ್ ಮತ್ತಿತರರನ್ನು ಕೆಸಿಆರ್ ಭೇಟಿ ಮಾಡಿದ್ದಾರೆ. ಮುಂಚಿತವಾಗಿ ಚುನಾವಣೆ ನಡೆಯುವಂತೆ ನೋಡಿಕೊಳ್ಳಲು ಭೇಟಿ ಆಗಿದ್ದರು ಎಂಬ ಸುದ್ದಿ ಹರಿದಾಡುತ್ತಿದೆ. ವಿಧಾನಸಭೆ ವಿಸರ್ಜನೆ ಮಾಡಿದ ನಂತರ ತಿಂಗಳುಗಟ್ಟಲೆ ಸಮಯ ತೆಗೆದುಕೊಂಡು, ಆ ನಂತರ ಚುನಾವಣೆ ನಡೆಸುವಂತಾಗಬಾರದು ಎಂಬ ಕಾರಣಕ್ಕೆ ದೆಹಲಿಯ ಪ್ರವಾಸ ಮಾಡಿ, ಶೀಘ್ರದಲ್ಲೇ ಚುನಾವಣೆ ನಡೆಯಬೇಕು ಎಂಬ ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
2003ರಲ್ಲಿ ಚಂದ್ರಬಾಬು ನಾಯ್ಡು ಹೀಗೇ ಮಾಡಿದ್ದರು
2003ನೇ ಇಸವಿಯಲ್ಲಿ ಹೀಗೇ ಆಗಿತ್ತು. ಅಲಿಪಿರಿಯಲ್ಲಿ ಆ ವರ್ಷದ ಅಕ್ಟೋಬರ್ ನಲ್ಲಿ ತಮ್ಮ ಹತ್ಯಾ ಪ್ರಯತ್ನ ನಡೆದ ನಂತರ ಚಂದ್ರಬಾಬು ನಾಯ್ಡು ಆಂಧ್ರಪ್ರದೇಶ ವಿಧಾನಸಭೆ ವಿಸರ್ಜನೆ ಮಾಡಿದ್ದರು. ಆದರೆ ಚುನಾವಣೆ ನಡೆದದ್ದು ಮಾತ್ರ 2004ರ ಏಪ್ರಿಲ್-ಮೇನಲ್ಲಿ. ಆದ್ದರಿಂದ ಹೀಗಾಗಬಾರದು ಎಂಬ ಲೆಕ್ಕಾಚಾರದಲ್ಲಿ ಕೆ.ಚಂದ್ರಶೇಖರ್ ರಾವ್ ಅವರು ದೆಹಲಿಗೆ ತೆರಳಿ, ಈ ವರ್ಷದ ಕೊನೆಗೆ ಅಂದರೆ, ಡಿಸೆಂಬರ್ ನಲ್ಲಿ ನಾಲ್ಕು ರಾಜ್ಯಗಳ ಚುನಾವಣೆ ಜತೆಗೆ ತೆಲಂಗಾಣಕ್ಕೂ ಜನರ ಆಯ್ಕೆ ನಡೆದುಹೋಗಲಿ ಎಂದು ಮನವಿ ಮಾಡಿದ್ದಾರೆ ಎಂಬುದು ಸದ್ಯಕ್ಕೆ ಹರಿದಾಡುತ್ತಿರುವ ಸುದ್ದಿ.