ಮಹದಾಯಿ-ಕಳಸಾ ಬಂಡೂರಿ ಯೋಜನೆ ಜಾರಿ ಜವಾಬ್ದಾರಿ ನನ್ನದು: ಕೇಂದ್ರ ಸಚಿವ
ಹುಬ್ಬಳ್ಳಿ, ಏಪ್ರಿಲ್ 26: ಉತ್ತರ ಕರ್ನಾಟಕದ ಜೀವನಾಡಿ ಮಹದಾಯಿ ನದಿ ನೀರು ಜೋಡಣೆ, ಕಳಸ ಬಂಡೂರಿ ಯೋಜನೆಗಳ ಸಾರ್ಕಾರಕ್ಕೆ ಒತ್ತಾಯ ಕೇಳಿ ಬರುತ್ತಲೇ ಇದೆ. ಇದೀಗ ಈ ಬಗ್ಗೆ ಭರವಸೆ ನೀಡಿರುವ ಬಿಜೆಪಿ ಕೇಂದ್ರ ಸಚಿವರು ಇವೆರಡು ಯೋಜನೆಗಳ ಅನುಷ್ಠಾನಕ್ಕೆ ಬಿಜೆಪಿ ಯಾವಾಗಲೂ ಸಿದ್ಧವಿದೆ. ಯೋಜನೆಗಳ ಜಾರಿ ಜವಾಬ್ದಾರಿ ನನ್ನದು ಎಂದು ತಿಳಿಸಿದ್ದಾರೆ.
ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಲಾದ್ ಜೋಶಿಯವರು ಧಾರವಾಡ ಜಿಲ್ಲೆಯ ನವಲಗುಂದ ವಿಧಾನಸಭೆ ಕ್ಷೇತ್ರದ ಮೊರಬ ಗ್ರಾಮದಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿಉತ್ತರ ಕರ್ನಾಟಕದ ಜನರಿಗೆ ಭರವಸೆ ಕೊಟ್ಟರು.

ಕಾಂಗ್ರೆಸ್ ಕುತಂತ್ರದಿಂದ ನೀರು ಸಿಗಲು ವಿಳಂಬ
ಕರ್ನಾಟಕ ರಾಜ್ಯದ ಜನರಿಗೆ ಮಹದಾಯಿ ನೀರು ಸಿಗುವುದು ವಿಳಂಬವಾಗಿದ್ದಕ್ಕೆ ಕಾಂಗ್ರೆಸ್ ಕುತಂತ್ರವೇ ಕಾರಣ ಎಂದು ಅವರು ಆರೋಪಿಸಿದರು. ಗೋವಾದಲ್ಲಿ ಭಾಷಣ ಮಾಡಿದ್ದ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರು, ಕರ್ನಾಟಕಕ್ಕೆ ಮಹದಾಯಿ ನದಿಯ ಒಂದು ಹನಿ ನೀರನ್ನೂ ಕೊಡುವುದಿಲ್ಲ ಎಂದಿದ್ದನ್ನು ನಮ್ಮ ಜನರು ಮರೆಯುವುದಿಲ್ಲ ಎಂದು ಹೇಳಿದರು.
ಇನ್ನೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರವು ಹಿಂದುಳಿದವರ ಮೀಸಲಾತಿಯನ್ನು ಕಿತ್ತುಕೊಂಡು ಮುಸ್ಲಿಮರಿಗೆ ಕೊಡುವ ಹುನ್ನಾರ ನಡೆಸಿದೆ. ಮುಸ್ಲಿಂ ಸಮುದಾಯ ತುಷ್ಠಿಕರಣಕ್ಕೆ ಅತಿಯಾದ ಮಹತ್ವ ಕೊಡುತ್ತಿರುವ ಕಾಂಗ್ರೆಸ್ ಸರ್ಕಾರದಲ್ಲಿ ಹಿಂದುಗಳಿಗೆ ರಕ್ಷಣೆ ಇಲ್ಲ ಎಂದು ಅವರು ವಿಷಾಧಿಸಿದರು.

ಮತದಾರರನ್ನು ಸ್ಮರಿಸುವೆ: ಜೋಶಿ
ಬಿಜೆಪಿಯಲ್ಲಿ ಸಾಮಾನ್ಯ ವ್ಯಕ್ತಿಯಾಗಿದ್ದ ನನ್ನನ್ನು ಸಂಸದನನ್ನಾಗಿ ಚುನಾಯಿಸಿ, ಕೇಂದ್ರ ಸರ್ಕಾರದಲ್ಲಿ ಮಂತ್ರಿಯನ್ನಾಗಿ ಮಾಡಿದ್ದಾರೆ. ಧಾರವಾಡ ಕ್ಷೇತ್ರದ ಮತದಾರರು. ಇಲ್ಲಿನ ಮತದಾರರ ಋಣವನ್ನು ಎಂದಿಗೂ ಮರೆಯುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಪ್ರತಿ ಬಾರಿ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕೂ ಮೊದಲು ನನ್ನ ಮತದಾರರನ್ನು ಸ್ಮರಿಸಿಕೊಳ್ಳುತ್ತೇನೆ ಎಂದರು.
ನಾಳೆ ಪ್ರಧಾನಿ ಮೋದಿ ಕರ್ನಾಟಕ ಪ್ರವಾಸ
ಸುದ್ದಿಗಾರರ ಕೆಲವು ಪ್ರಶ್ನೆಗಳಿಗೆ ಉತ್ತರಿಸಿರುವ ಪ್ರಹ್ಲಾದ್ ಜೋಶಿ ಅವರು, ನಾಳೆ ಪ್ರಧಾನಿ ಮೋದಿ ಅವರು ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಅವರ ವ್ಯಕ್ತಿತ್ವದಿಂದ ಉತ್ತರ ಕರ್ನಾಟಕದಲ್ಲಿ ಉತ್ಸಾಹ, ಪ್ರೇರಣೆ ಸಿಗಲಿದೆ. ನಿನ್ನೆ ನಡೆದ ಮತದಾನದಲ್ಲಿ 14ಕ್ಕೆ 14 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಇನ್ನುಳಿದ 14ರಲ್ಲಿಯೂ ಗೆಲ್ಲುತ್ತೇವೆ. ಕಾಂಗ್ರೆಸ್ ಪಾರ್ಟಿ ಸುಳ್ಳು ಹೇಳುತ್ತಿದೆ. ನಾಲ್ಕು ಪರ್ಸೆಂಟ್ ಮುಸ್ಲೀಮರನ್ನ ಒಬಿಸಿಗೆ ಸೇರಿಸಲು ಹೊರಟಿದ್ದಾರೆ. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯ ಜಾತಿ ಅಲ್ಲ ಧರ್ಮವೂ ಅಲ್ಲ ಎಂದು ಬರೆದಿದ್ದಾರೆ, ಹಾಗಿದ್ದರೆ ಏನು? ಧರ್ಮಾಧಾರಿತ ಮೀಸಲಾತಿ ಕೊಡಲು ಅವಕಾಶ ಇಲ್ಲ. ರಾಹುಲ್ ಗಾಂಧಿಯವರ ಮಾತಿಗೆ ಅಷ್ಟಾಗಿ ತಲೆಕೆಡಸಿಕೊಳ್ಳಬೇಕಿಲ್ಲ ಎಂದು ಅವರು ಹೇಳಿದರು.
ಸಂವಿಧಾನದಲ್ಲಿ ಧರ್ಮ ಆಧಾರಿತ ಮೀಸಲಾತಿ ಇಲ್ಲ, ಆದರೆ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗದ ಕೋಟಾದಡಿ ಮುಸ್ಲಿಮ್ ರಿಗೆ ಮೀಸಲಾತಿ ನೀಡಿದೆ. ಇದನ್ನು ಕೈ ಬಿಡಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಆಗ್ರಹಿಸಿದರು.
ಓಬಿಸಿಗಳಿಗೆ ನೀಡಲಾದ ಶೇ.32 ಮೀಸಲಾತಿಯಲ್ಲಿ ಶೇ. 23 ರಷ್ಟು ಮೀಸಲಾತಿಯನ್ನು ಮುಸ್ಲಿಂರಿಗೆ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡುತ್ತಿದೆ ಎಂದರು.












Click it and Unblock the Notifications