ಬಿಟ್ಟಿ ದುಡ್ಡಿಂದ ಜಾಗ್ವಾರ್ ಚಿತ್ರ ಮಾಡಿಲ್ಲ: ಕುಮಾರಸ್ವಾಮಿ
ಹುಬ್ಬಳ್ಳಿ, ನವೆಂಬರ್,18: ನಾನು ಯಾವುದೇ ಬಿಟ್ಟಿ ದುಡ್ಡಿನಿಂದ ಜಾಗ್ವಾರ್ ಚಲನಚಿತ್ರ ಮಾಡಿಲ್ಲ ರಾಮನಗರದ ಕೋ ಆಪರೇಟಿವ್ ಬ್ಯಾಂಕ್ ನಿಂದ ಸಾಲ ತೆಗೆದುಕೊಂಡು ಚಲನಚಿತ್ರ ಮಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಮುದ್ದೇಬಿಹಾಳ ಶಾಸಕ ಡಾ ಸಿ ಎಸ್ ನಾಡಗೌಡ ಅವರಿಗೆ ತಿರುಗೇಟು ನೀಡಿದರು.
ಹುಬ್ಬಳ್ಳಿ ಭೈರಿದೇವರಕೊಪ್ಪದಲ್ಲಿ ಶುಕ್ರವಾರ ತಮ್ಮ ನೂತನ ಮನೆ ಏಕದಂತ ಕೃಪಾದ ಗೃಹಪ್ರವೇಶ ಸಮಾರಂಭದಲ್ಲಿ ಅವರು ಮಾತನಾಡಿ, ಕೋಟಿಗಟ್ಟಲೇ ಹಣ ಸುರಿದು ಮಗ ನಿಖಿಲ ಗೌಡನಿಗೆ ಜಾಗ್ವಾರ್ ಚಿತ್ರ ಮಾಡುವುದರ ಬದಲು ಬಡವರಿಗೆ ಹಂಚಬೇಕಿತ್ತು ಎಂದು ಡಾ. ನಾಡಗೌಡ ಟೀಕಿಸಿದ್ದರು.
ನಾನು ಒಬ್ಬ ಮಗನ ತಂದೆಯಾಗಿದ್ದೇನೆ, ನನಗೂ ನನ್ನ ಮಗನನ್ನು ದಾರಿಗೆ ಹಚ್ಚಬೇಕು. ಹೀಗಾಗಿ ಅವನಿಗೆ ಚಲನಚಿತ್ರ ಮಾಡಿದ್ದೇನೆ. ಅದರ ಸಾಲ ಇನ್ನೂ ಇದೆ ಎಂದು ಕುಮಾರಸ್ವಾಮಿ ಟಾಂಗ್ ನೀಡಿದರು.
ನಮ್ಮ ಪಕ್ಷ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಾಲ ಮನ್ನಾ ಮಾಡಲಾಗುವುದು. 500 ರೂ. ಇರುವ ವೃದ್ಧಾಪ್ಯ ವೇತನ ಸೇರಿದಂತೆ ಇತರ ವೇತನಗಳನ್ನು 2500 ರೂ. ಹೆಚ್ಚಿಸುತ್ತೇನೆ. ಉತ್ತರ ಕರ್ನಾಟಕದಲ್ಲಿ ಪಕ್ಷ ಕನಿಷ್ಠ 40 ಸ್ಥಾನಗಳನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕೆಂದು ಎಂದು ಎಚ್ಡಿಕೆ ವಾಗ್ದಾನ ಮಾಡಿದರು.
ಈಗಾಗಲೇ ಬಿಜೆಪಿಯ ಜಗದೀಶ್ ಶೆಟ್ಟರ್ ಹಾಗೂ ಪ್ರಹ್ಲಾದ ಜೋಶಿಗೆ ನಾನು ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದು ಭಯ ಹುಟ್ಟಿಸಿದೆ. ಜಗದೀಶ ಶೆಟ್ಟರ್ ಹುಬ್ಬಳ್ಳಿಗೆ ಮಾತ್ರ ವಿರೋಧ ಪಕ್ಷದ ನಾಯಕರಾಗಿದ್ದಾರೆ ಇಡೀ ರಾಜ್ಯಕ್ಕಲ್ಲ ಎಂದು ಟೀಕಿಸಿದರು.
ಅನಿತಾ ಕುಮಾರಸ್ವಾಮಿ ಮಾತನಾಡಿ, ನಮ್ಮ ಮಾವ ಎಚ್ ಡಿ ದೇವೇಗೌಡರು ಈ ಭಾಗದ ಜನರಿಗೆ ಬಹಳಷ್ಟು ಸದುಪಯೋಗವಾಗುವಂತಹ ಯೋಜನೆಗಳನ್ನು ನೀಡಿದ್ದಾರೆ, ಈ ಬಾರಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಆಶೀರ್ವಾದ ಮಾಡಿ ಎಂದರು.
ಮಾಜಿ ಸಚಿವರಾದ ಬಸವರಾಜ ಹೊರಟ್ಟಿ, ಹನುಮಂತಪ್ಪ ಅಲ್ಕೋಡ, ಮಾಜಿ ಶಾಸಕರಾದ ಎಂ ಎಸ್ ಅಕ್ಕಿ, ಮುಗಳಖೋಡ ಶ್ರೀ, ಮುಸ್ಲಿಂ ಧರ್ಮಗುರು, ಸಿಖ್ ಧರ್ಮಗುರು, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಅಲ್ತಾಪ ಕಿತ್ತೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಊಟಕ್ಕೆ ನೂಕುನುಗ್ಗಲು: ಸುಮಾರು 10 ಸಾವಿರಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಆಗಮಿಸಿದ್ದರು. ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಊಟಕ್ಕೆ ನೂಕುನುಗ್ಗಲು ಉಂಟಾಗಿ ಕೆಲವರು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದರು.
ಸುಮಾರು 3.40 ರ ಸುಮಾರಿಗೆ ಮುಗಿದ ಕುಮಾರಸ್ವಾಮಿ ಕಾರ್ಯಕ್ರಮವು ಹಸಿದವರ ಹೊಟ್ಟೆ ಚುರುಗುಟ್ಟಿಸುತ್ತಿತ್ತು. ಹತ್ತಿರದಲ್ಲಿ ಎಲ್ಲಿಯೂ ಹೊಟೆಲ್ ಗಳಿಲ್ಲದಿರುವುದರಿಂದ ಕೆಲವರು ಐದು ಕಿ.ಮೀ. ನಡೆದುಕೊಂಡ ಭೈರಿದೇವರಕೊಪ್ಪಕ್ಕೆ ಹೋಗಿ ಹೊಟ್ಟೆ ತಣ್ಣಗಾಗಿಸಿಕೊಂಡರು.
ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರು ಕುಮಾರಸ್ವಾಮಿಯವರನ್ನು ಅಭಿನಂದಿಸಿ ಫೋಟೋ ತೆಗೆಯಿಸಿಕೊಳ್ಳಲು ಮುಗಿಬಿದ್ದಿದ್ದರು. ಒಟ್ಟಿನಲ್ಲಿ ಕುಮಾರಸ್ವಾಮಿ ಗೃಹಪ್ರವೇಶ ಕಾರ್ಯಕ್ರಮವು ಪಕ್ಷದ ಪ್ರಚಾರ ಸಭೆಯಾಗಿ ಮಾರ್ಪಟ್ಟಿತ್ತು.
ಕಾರ್ಯಕ್ರಮದ ಬಳಿಕ ಎಪಿಎಂಸಿ ಈರುಳ್ಳಿಖರೀದಿ ಕೇಂದ್ರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಲು ಸರಕಾರ ಧಾರಾಳತನ ತೋರಬೇಕು. ಈರುಳ್ಳಿ ಖರೀದಿ ವೇಳೆ ವಿಧಿಸಿರುವ ನಿರ್ಬಂಧವನ್ನು ಸಂಫೂರ್ಣ ತೆಗೆದು ಹಾಕಬೇಕೆಂದು ಒತ್ತಾಯಿಸಿದ ಅವರು, ಗ್ರೇಡಿಂಗ್ ಪದ್ಧತಿಯನ್ನು ಕೈಬಿಡಬೇಕೆಂದು ಒತ್ತಾಯಿಸಿದರು.
750 ರೂ. ಬೆಂಬಲ ಬೆಲೆ ನೀಡಿ : ನಾನು ಸಿಎಂ ಆಗಿದ್ದಾಗಲೇ ಈರುಳ್ಳಿ ಖರೀದಿಗೆ 500 ಬೆಂಬಲ ಬೆಲೆ ನೀಡಿದ್ದೇನೆ, 10 ವರ್ಷಗಳ ಬಳಿಕ 620 ರೂ. ಬೆಂಬಲ ನೀಡುತ್ತಿರುವುದು ನಾಚಿಕೆಗೇಡಿತನ ಸಂಗತಿ. ಸರಕಾರವೇನು ರೈತರಿಗೆ ಬಿಟ್ಟಿಯಾಗಿ ಕೊಡುತ್ತಿಲ್ಲ.
ರೈತರಿಂದಲೇ ವಿವಿಧ ಮೂಲಗಳಿಂದ ಸಂಗ್ರಹಿಸಿದ ಮೊತ್ತವನ್ನು ಆವರ್ತ ನಿಧಿಗೆ ಸೇರಿಸಲಾಗುತ್ತದೆ. ಅದೇ ಹಣವನ್ನು ಕೃಷಿ ಉತ್ಪನ್ನ ಖರೀದಿಗೆ ಬಳಸಿಕೊಳ್ಳಲಾಗುತ್ತಿದೆ. ಕನಿಷ್ಠ 750 ರೂ. ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿಸಿದ ಎಚ್ಡಿಕೆ, ಈ ಕುರಿತು ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದರು.