ಕರ್ನಾಟಕದಲ್ಲಿದೆ ರಾಷ್ಟ್ರಧ್ವಜ ತಯಾರಿಸುವ ದೇಶದ ಏಕೈಕ ಸಂಸ್ಥೆ: ತಿರಂಗದ ತಯಾರಿಕೆ ಹೇಗೆ&ಎಲ್ಲಿ?
ಹುಬ್ಬಳ್ಳಿ, ಆಗಸ್ಟ್ 09: ರಾಷ್ಟ್ರಧ್ವಜ ನಿರ್ಮಾಣಕ್ಕೆ ಭಾರತೀಯ ಮಾನಕ ಸಂಸ್ಥೆ (ಬಿಐಎಸ್)ಯಿಂದ ಮಾನ್ಯತೆ ಪಡೆದ ದೇಶದ ಏಕೈಕ ಸಂಸ್ಥೆಯಾದ ಹುಬ್ಬಳ್ಳಿಯ ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ರಾಷ್ಟ್ರ ಧ್ವಜ ತಯಾರಿಕೆಯಲ್ಲಿ ತನ್ನದೇ ಆದ ಸಿದ್ಧ ಹಸ್ತ ಮೂಡಿಸಿದೆ.
ದೇಶದ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಅಧಿಕೃತವಾಗಿ ರಾಷ್ಟ್ರಧ್ವಜಗಳನ್ನು ಸರಬರಾಜು ಮಾಡುವ ಹುಬ್ಬಳ್ಳಿಯ ಈ ಸಂಘ, ಪ್ರಸಕ್ತ ವರ್ಷ ಆಗಸ್ಟ್ 14ರೊಳಗಾಗಿ ಕೋಟ್ಯಾಂತರ ಮೌಲ್ಯದ ಸಾವಿರಾರು ಧ್ವಜಗಳನ್ನು ತಯಾರಿಸಿ ಮಾರಾಟ ಮಾಡಲು ಮುಂದಾಗಿದೆ. ಈ ಹಿಂದಿನ ದಿನಗಳಿಗೆ ಹೋಲಿಕೆ ಮಾಡಿದರೆ ಶೇ.34 ರಷ್ಟು ಉತ್ಪಾದನೆ ಹೆಚ್ಚಿದೆ.

1981-82ರಲ್ಲಿ ಭೀಕರ ಬರಗಾಲಕ್ಕೆ ತುತ್ತಾದ ಬಾಗಲಕೋಟೆ ಜಿಲ್ಲೆಯಲ್ಲಿ ಆರಂಭವಾದ ಗ್ರಾಮೋದ್ಯೋಗ ಸಂಘ, 27 ಗ್ರಾಮಗಳ 2,500 ಜನರಿಗೆ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸಿತ್ತು. ಸಂಘದ ಸಂಸ್ಥಾಪಕ ಅಧ್ಯಕ್ಷ ವೆಂಕಟೇಶ ಮಾಗಡಿ ಅವರ ಕನಸಿನ ಕೂಸಾದ ಸಂಘ ಇಂದು ಖಾದಿ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಇದೇ ಸಮಯದಲ್ಲಿ ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ಆರಂಭವಾದ ಖಾದಿ ಸಂಸ್ಥೆ ಅಸ್ತಿತ್ವ ಕಳೆದುಕೊಂಡಿದ್ದು, ಹುಬ್ಬಳ್ಳಿಯ ಸಂಘ ಮಾತ್ರ ಉತ್ತುಂಗಕ್ಕೇರಿದೆ.
ಒಟ್ಟು 27 ಕೇಂದ್ರಗಳಲ್ಲಿ ಸ್ವಂತ ಕಟ್ಟಡ ಹೊಂದಿರುವ ಸಂಘವು ಜಾತಿ- ಜನಾಂಗದ ಎಲ್ಲೆ ಮೀರಿ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದೆ.
ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ, ಗದ್ದನಕೇರಿ, ಸಿಮಿಕೇರಿ, ಜಾಲಿಹಾಳ ಮತ್ತು ಬೇಲೂರು ಗ್ರಾಮಗಳಲ್ಲಿ 50 ಮಗ್ಗ, 90 ಚರಕಗಳು ಇದ್ದು, 165 ಜನರು ನೂಲುವ ಕೆಲಸದಲ್ಲಿ ತೊಡಗಿದ್ದಾರೆ. ಹುಬ್ಬಳ್ಳಿಯ ಕೇಂದ್ರದಲ್ಲಿ 25-30 ಜನರು ಹೊಲಿಗೆ, ಟ್ಯಾಗಲ್ಸ್ ಹಾಕುವ ಕಾಯಕದಲ್ಲಿ ನಿರತರಾಗಿದ್ದಾರೆ. 100 ಜನ ಆಡಳಿತ ಸಿಬ್ಬಂದಿ ಇದ್ದಾರೆ.
ಖಾದಿ ಬಟ್ಟೆ, ಧ್ವಜ ಮಾತ್ರವಲ್ಲದೇ ಖಾದಿ ಪಾಲಿಸ್ಟರ್, ಮಸ್ಲಿಂವ್ಖಾದಿ, ನೂಲು, ಜಮಖಾನ್, ಬೆಡ್ಶೀಟ್ನಂತಹ ಅನೇಕ ವಸ್ತುಗಳ ನೇಯ್ಗೆ ಇಲ್ಲಿಯೇ ಆಗುತ್ತಿದ್ದು, ಒಟ್ಟು 1,200 ಜನರು ಉದ್ಯೋಗ ಕಂಡುಕೊಂಡಿದ್ದಾರೆ. ಖಾದಿ ಗ್ರಾಮೋದ್ಯೋಗ ಕ್ಷೇತ್ರ ಕುಂಟುತ್ತ ಸಾಗುತ್ತಿದ್ದ ವೇಳೆ ಬೆಂಗೇರಿ ಖಾದಿ ಸಂಘದ ಸಾಧನೆ ರಾಜ್ಯದ ನೇಕಾರರಲ್ಲಿ ಆಶಾಕಿರಣ ಮೂಡಿಸಿದೆ.

ಸ್ವಾತಂತ್ರ್ಯ ನಂತರ ದೇಶದ ಎಲ್ಲಾ ರಾಜ್ಯಗಳ ಧ್ವಜಗಳಿಗೆ ಧಾರವಾಡ ತಾಲೂಕಿನ ಗರಗ ಖಾದಿ ಕೇಂದ್ರದಿಂದ ಬಟ್ಟೆ ಪೂರೈಕೆ ಆಗುತ್ತಿತ್ತು. ಮುಂಬಯಿ ಮೂಲದ ಖಾಸಗಿ ಸಂಸ್ಥೆಯೊಂದು ಧ್ವಜಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿತ್ತು. ಆದರೆ, 2004ರಲ್ಲಿ ಬಿ.ಎಸ್. ಪಾಟೀಲ್ ಅವರು ಹುಬ್ಬಳ್ಳಿಯ ಬೆಂಗೇರಿ ಖಾದಿ ಸಂಘದ ಅಧ್ಯಕ್ಷರಾದ ನಂತರ ಇಲ್ಲಿ ರಾಷ್ಟ್ರಧ್ವಜ ನಿರ್ಮಾಣದ ಕಲ್ಪನೆ ಚಿಗುರೊಡೆಯಿತು.
2006ರ ಫೆಬ್ರವರಿ 18ರಂದು ಬಿಐಎಸ್ನಿಂದ ಅನುಮತಿ ಕೂಡ ಸಿಕ್ಕಿತು. ಅಂದಿನಿಂದ ಒಂದೇ ಕೇಂದ್ರದಲ್ಲಿ ಬಟ್ಟೆ, ಬ್ಲೀಚಿಂಗ್ ಆಗಿ ಧ್ವಜ ನಿರ್ಮಾಣವಾಗುವ ಏಕೈಕ ಸಂಸ್ಥೆ ಎಂಬ ಕೀರ್ತಿಯ ಕಿರೀಟ ಧರಿಸಿದೆ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಘ.
ರಾಜ್ಯದ 79 ಹತ್ತಿ, 50 ಉಣ್ಣೆ ಹಾಗೂ 57 ರೇಷ್ಮೆ ಖಾದಿ ಸಂಸ್ಥೆಗಳೂ ಸೇರಿದಂತೆ 186 ಅಧಿಕೃತ ನೂಲುವ ನೇಕಾರರ ಸಂಸ್ಥೆಗಳ ಹಿತ ಬಯಸುತ್ತಿರುವ ಬೆಂಗೇರಿ ಖಾದಿ ಸಂಘ ಹೋರಾಟ ಮುಂದುವರಿಸಿದೆ. ಇದರ ಫಲವಾಗಿ ಪ್ರಸಕ್ತ ವರ್ಷ ರಾಜ್ಯ ಸರಕಾರ 50 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಖಾದಿ ಕ್ಷೇತ್ರಕ್ಕೆ 28 ಕೋಟಿ ರೂ. ಬಿಡುಗಡೆ ಮಾಡಿದೆ. ಅದರಲ್ಲಿ ನೇಕಾರರ ಸಂಸ್ಥೆಗಳ ಪುನಶ್ಚೇತನಕ್ಕೆ ಅನುದಾನ ಸಹ ಇದೆ ಎಂದು ರಾಷ್ಟ್ರಧ್ವಜ ತಯಾರಿಕೆ ಮತ್ತು ಕಳೆದು ಮೂರು ವರ್ಷಗಳ ಲಾಭ ಕುರಿತು ಹುಬ್ಬಳ್ಳಿಯ ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರದ ಕಾರ್ಯದರ್ಶಿ ಶಿವಾನಂದ ಮಠಪತಿ ಹೇಳಿದರು.
ಹುಬ್ಬಳ್ಳಿಯ ರಾಷ್ಟ್ರಧ್ವಜ ನಿರ್ಮಾಣ ಘಟಕದ ಆಧುನೀಕರಣಕ್ಕೆ ಸರಕಾರ 1ಕೋಟಿ ರೂ. ನೀಡಿದ್ದು, ಈ ಅನುದಾನ ಬಳಸಿ ರಾಷ್ಟ್ರೀಯ ಧ್ವಜ ಸಂಗ್ರಹಾಲಯ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಸ್ವತಂತ್ರ ಹೋರಾಟಗಾರರ ಜೀವನ ಚರಿತ್ರೆ, ರಾಷ್ಟ್ರಧ್ವಜಗಳ ಬಗೆ, ನೀತಿ-ನಿಯಮಗಳ ಕುರಿತಂತೆ ಜನರಿಗೆ ಮಾಹಿತಿ ನೀಡಲು ಮ್ಯೂಸಿಯಂ ಸಹಕಾರಿಯಾಗಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
6-4ರಿಂದ 21-14 ಇಂಚಿನ ಧ್ವಜಗಳ ತಯಾರಿಕೆ ವರ್ಷ ಪೂರ್ತಿ ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದು, ವಾಣಿಜ್ಯನಗರ ರಾಷ್ಟ್ರೀಯ ಕೇಂದ್ರವಾಗಿ ಪರಿವರ್ತನೆಗೊಂಡಿದೆ. ಹಿರಿಯ ಪತ್ರಕರ್ತ ದಿ. ಡಾ. ಪಾಟೀಲ ಪುಟ್ಟಪ್ಪ, ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಎಚ್.ಎಸ್. ದೊರೆಸ್ವಾಮಿ, ಎಚ್. ಹನುಮಂತಪ್ಪ, ಡಾ.ಎಚ್. ಶ್ರೀನಿವಾಸಯ್ಯ ಹಾಗೂ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಘದ ಅಧ್ಯಕ್ಷ ಕೆ.ವಿ. ಪತ್ತಾರ ಖಾದಿ ಕ್ಷೇತ್ರದ ಅಭಿವೃದ್ಧಿಗೆ ಹೆಗಲು ನೀಡಿದವರಲ್ಲಿ ಪ್ರಮುಖರಾಗಿದ್ದಾರೆ.












Click it and Unblock the Notifications