ಹುಬ್ಬಳ್ಳಿ ನನಗೆ ಎರಡನೇ ತವರು ಮನೆ ಇದ್ದಂತೆ ಎಂದಿದ್ದ ಪರಿಕ್ಕರ್
ಹುಬ್ಬಳ್ಳಿ, ಮಾರ್ಚ್ 18: ಇದೀಗ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನೆನಪು ಮಾಡಿಕೊಂಡು ಹುಬ್ಬಳ್ಳಿಗರು ದುಃಖ ಪಡುತ್ತಿದ್ದಾರೆ.
ಹೌದು, ಪರಿಕ್ಕರ್ ಜನಿಸಿದ್ದು ಗೋವಾದ ಮಪೂಸಾದಲ್ಲಿ. ಆದರೆ ಹುಬ್ಬಳ್ಳಿ-ಧಾರವಾಡಕ್ಕೂ, ಅವರಿಗೂ ಮೊದಲಿನಿಂದಲೂ ನಂಟಿದೆ. "ಹುಬ್ಬಳ್ಳಿ - ಧಾರವಾಡ ನನಗೆ ಎರಡನೇ ತವರು ಮನೆ ಇದ್ದಂತೆ" ಎಂದು ನಿಧನರಾಗಿರುವ ಮನೋಹರ್ ಪರಿಕ್ಕರ್ ಹೇಳಿದ್ದರು.
ಹುಬ್ಬಳ್ಳಿಯ ಹೊಸೂರದಲ್ಲಿ ನಮ್ಮ ಚಿಕ್ಕಮ್ಮ ಇದ್ದರು, ಅವರ ಮನೆಗೆ ಆಗಾಗ್ಗೆ ಬರುತ್ತಿದ್ದೆ. ಶಾಲಾ ಕಾಲೇಜು ದಿನಗಳಲ್ಲಿ ರಜೆ ಅವಧಿಯನ್ನು ಇಲ್ಲಿಯೇ ಕಳೆಯುತ್ತಿದ್ದೆ. ಹಾಗಾಗಿ ಇಲ್ಲಿಯ ಪ್ರತಿ ರಸ್ತೆಗಳು ಗೊತ್ತು. ಇದು ನನಗೆ ಎರಡನೇ ತವರು ಮನೆ ಇದ್ದಂತೆ ಎಂದು ಆಗಾಗ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಪರಿಕ್ಕರ್ ಹೇಳುತ್ತಿದ್ದರು. ಇದನ್ನು ಸದ್ಯ ಹುಬ್ಬಳ್ಳಿಗರು ನೆನೆಪಿಸಿಕೊಂಡು ದುಃಖಪಡುತ್ತಿದ್ದಾರೆ.

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮನೋಹರ್ ಪರಿಕ್ಕರ್ ಭಾನುವಾರ (ಮಾರ್ಚ್ 17) ನಿಧನರಾದರು. ದಕ್ಷತೆಗೆ ಹೆಸರಾಗಿದ್ದ ಪರಿಕ್ಕರ್, ಬಾಲ್ಯದಿಂದಲೇ ಆರೆಸ್ಸೆಸ್ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು.ಮೂರು ಬಾರಿ ಗೋವಾ ಸಿಎಂ ಆಗಿದ್ದ ಪರಿಕ್ಕರ್, ಈ ಬಾರಿ ಸಿಎಂ ಆಗುವ ಮುನ್ನ ಕೇಂದ್ರದ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಮನೋಹರ್ ಪರಿಕ್ಕರ್ ನಿಧನಕ್ಕೆ ಎಲ್ಲೆಡೆ ಸಂತಾಪ ವ್ಯಕ್ತವಾಗುತ್ತಿದ್ದು, ಅಂತಹ ಸ್ವಾಭಿಮಾನಿ ನಾಯಕ ನಮ್ಮ ರಾಜ್ಯದಲ್ಲಿಯೂ ಹುಟ್ಟಬೇಕು ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications