ಪಕ್ಷೇತರ ಅಭ್ಯರ್ಥಿಗೆ ಉಪ-ಮೇಯರ್ ಸ್ಥಾನ ಕೊಟ್ಟ ಬಿಜೆಪಿ!
ಹುಬ್ಬಳ್ಳಿ, ಸೆಪ್ಟೆಂಬರ್ 13; ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 39 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಅಧಿಕಾರವನ್ನು ಹಿಡಿಯಲಿದೆ. ಆದರೆ ಉಪ ಮೇಯರ್ ಸ್ಥಾನವನ್ನು ಬಿಜೆಪಿ ಪಕ್ಷೇತರ ಅಭ್ಯರ್ಥಿಗೆ ಬಿಟ್ಟುಕೊಟ್ಟಿದೆ.
ಕಳೆದ ಸೋಮವಾರ ಮಹಾನಗರ ಪಾಲಿಕೆ ಚುನಾವಣೆ ಫಲಿತಾಶಂ ಪ್ರಕಟಗೊಂಡಿತ್ತು. 82 ವಾರ್ಡ್ಗಳ ಪೈಕಿ 39 ಬಿಜೆಪಿ, 33 ಕಾಂಗ್ರೆಸ್, 3 ಎಐಎಂಐಎಂ, 1 ಜೆಡಿಎಸ್ ಮತ್ತು 6 ಪಕ್ಷೇತರರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಪಾಲಿಕೆ ಅಧಿಕಾರ ಹಿಡಿಯಲಿದೆ.
ಕರ್ನಾಟಕ ಸರ್ಕಾರ ಈಗಾಗಲೇ ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನಗಳ ಮೀಸಲಾತಿ ಘೋಷಣೆ ಮಾಡಿದೆ. ಮೇಯರ್ ಸ್ಥಾನವನ್ನು ಹಿಂದುಳಿದ ವರ್ಗ 'ಎ' ಮತ್ತು ಉಪಮೇಯರ್ ಸ್ಥಾನವನ್ನು ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿರಿಸಲಾಗಿದೆ.
39 ಸ್ಥಾನಗಳಲ್ಲಿ ಜಯಗಳಿಸಿರುವ ಬಿಜೆಪಿಯಲ್ಲಿ ಉಪ ಮೇಯರ್ ಸ್ಥಾನಕ್ಕೆ ಮೀಸಲಾತಿ ಅರ್ಹರಿರುವ ಯಾವುದೇ ಅಭ್ಯರ್ಥಿ ಇಲ್ಲ. ಆದ್ದರಿಂದ ಬಿಜೆಪಿ ಟಿಕೆಟ್ ಸಿಗದೇ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಚುನಾವಣೆ ಗೆದ್ದಿರುವ 69ನೇ ವಾರ್ಡ್ನ ದುರ್ಗಮ್ಮ ಬಿಜವಾಡ್ಗೆ ಉಪ ಮೇಯರ್ ಪಟ್ಟವನ್ನು ಬಿಟ್ಟುಕೊಡಲಿದೆ.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪಷ್ಟನೆ
ಪಕ್ಷೇತರ ಅಭ್ಯರ್ಥಿಗೆ ಉಪ ಮೇಯರ್ ಸ್ಥಾನ ನೀಡುವ ಕುರಿತು ಮಾಜಿ ಮುಖ್ಯಮಂತ್ರ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ, "ಬಿಜೆಪಿಯಿಂದ ಗೆಲುವು ಸಾಧಿಸಿದ ಸದಸ್ಯರ ಪೈಕಿ ಯಾರೂ ಪರಿಶಿಷ್ಟ ಜಾತಿಯ ಮಹಿಳಾ ಸದಸ್ಯರು ಇಲ್ಲದ ಪರಿಣಾಮ ಪಕ್ಷೇತರ ಅಭ್ಯರ್ಥಿಯನ್ನು ಉಪ ಮೇಯರ್ ಮಾಡುವುದಾಗಿ" ಸ್ಪಷ್ಟಪಡಿಸಿದರು.

ಪಕ್ಷಕ್ಕೆ ಸೇರಿದ ಶಶಿಕಾಂತ ಬಿಜವಾಡ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದ ಕಾರಣ 69ನೇ ವಾರ್ಡ್ನಿಂದ ದುರ್ಗಮ್ಮ ಬಿಜವಾಡ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದ ಕಾರಣ ದುರ್ಗಮ್ಮ ಬಿಜವಾಡ ಪತಿ ಶಶಿಕಾಂತ ಬಿಜವಾಡರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿತ್ತು. ಈಗ ಆ ಆದೇಶವನ್ನು ವಾಪಸ್ ಪಡೆಯಲಾಗಿದ್ದು, ಶಶಿಕಾಂತ ಬಿಜವಾಡ ಜಗದೀಶ್ ಶೆಟ್ಟರ್ ಮತ್ತು ಇತರ ನಾಯಕರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ.

ದುರ್ಗಮ್ಮ ಬಿಜವಾಡ ಬಿಜೆಪಿ ಸೇರ್ಪಡೆ
69ನೇ ವಾರ್ಡ್ನ ದುರ್ಗಮ್ಮ ಬಿಜವಾಡ್ಗೆ ಉಪ ಮೇಯರ್ ಪಟ್ಟವನ್ನು ನೀಡುವ ಕುರಿತು ಈಗಾಗಲೇ ಬಿಜೆಪಿ ಅವರ ಜೊತೆ ಮಾತುಕತೆ ನಡೆಸಿದೆ. ಈ ಕುರಿತು ಜಗದೀಶ್ ಶೆಟ್ಟರ್ ಖಚಿತಪಡಿಸಿದ್ದಾರೆ. "ಇನ್ನು ಎರಡು ದಿನದಲ್ಲಿ ದುರ್ಗಮ್ಮ ಬಿಜವಾಡ ಸಹ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ" ಎಂದು ಹೇಳಿದ್ದಾರೆ.
"ಟಿಕೆಟ್ ಹಂಚಿಕೆಯಲ್ಲಿ ಸ್ವಲ್ಪ ಗೊಂದಲವಾಗಿತ್ತು. ಈಗ ಪಕ್ಷೇತರರು ಸಹ ನಮ್ಮ ಬೆಂಬಲಕ್ಕೆ ಇದ್ದಾರೆ. ಶಶಿ ಬಿಜವಾಡ ಅವರ ಪತ್ನಿಯನ್ನು ನಾವು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ" ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
Recommended Video

ನಾವೇ ಅಧಿಕಾರ ಪಡೆಯುತ್ತೇವೆ
ಸೆಪ್ಟೆಂಬರ್ 6ರಂದು ಹುಬ್ಬಳ್ಳಿ-ಧಾರವಾಡದ ಜೊತೆ ಕಲಬುರಗಿ, ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶವೂ ಪ್ರಕಟವಾಗಿದೆ. "ಕಲಬುರಗಿ ಮತ್ತು ಬೆಳಗಾವಿಯಲ್ಲಿ ಬಿಜೆಪಿಯೇ ಅಧಿಕಾರ ಹಿಡಿಯಲಿದೆ" ಎಂದು ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಬಿಜೆಪಿ ಐತಿಹಾಸಿಕ ಸಾಧನೆ ಮಾಡಿದೆ. ಆದರೆ ಕಲಬುರಗಿ ಮಹಾನಗರ ಪಾಲಿಕೆಯ ಚುನಾವಣೆ ಫಲಿತಾಂಶ ಅತಂತ್ರವಾಗಿದೆ. ಮೇಯರ್ ಗದ್ದುಗೆ ಏರಲು ಯಾವ ಪಕ್ಷಕ್ಕೂ ಬಹುಮತವಿಲ್ಲ.
ಪಾಲಿಕೆಯ 55 ವಾರ್ಡ್ಗಳ ಪೈಕಿ ಕಾಂಗ್ರೆಸ್ 27, ಬಿಜೆಪಿ 23, ಜೆಡಿಎಸ್ 4, ಒಬ್ಬರು ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಮೇಯರ್ ಪಟ್ಟಕ್ಕೇರಲು ಜೆಡಿಎಸ್ ಬೆಂಬಲ ಅನಿವಾರ್ಯ. ಮೇಯರ್ ಸ್ಥಾನ ನೀಡುವವರಿಗೆ ಬೆಂಬಲ ನೀಡುವುದಾಗಿ ಜೆಡಿಎಸ್ ಘೋಷಣೆ ಮಾಡಿದೆ. ಆದರೆ ಇನ್ನೂ ಎರಡು ಪಕ್ಷಗಳು ತಮ್ಮ ತೀರ್ಮಾನ ಪ್ರಕಟಿಸಿಲ್ಲ.












Click it and Unblock the Notifications