ಹಾಸನಾಂಬೆ ದರ್ಶನಕ್ಕೆ ಅ.26 ಕೊನೆಯ ದಿನ: ಹರಿದು ಬಂದ ಭಕ್ತ ಸಾಗರ
ಹಾಸನ, ಅಕ್ಟೋಬರ್ 26: ಹಾಸನದ ಐತಿಹಾಸಿಕ ದೇವಾಲಯ, ವರ್ಷಕ್ಕೊಮ್ಮೆ ದೇವಾಲಯ ಬಾಗಿಲು ತೆರೆಯುವ ಹಾಸನಾಂಬೆ ದೇವಿ ದರ್ಶನಕ್ಕೆ ಇಂದು ಕೊನೆಯ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಹಾಸನಾಂಬೆ ದೇವಿಯ ದರ್ಶನ ಪಡೆಯಲು ಇಂದು ಮುಂಜಾನೆಯಿಂದಲೇ ಭಕ್ತರ ದಂಡು ಹರಿದು ಬರುತ್ತಿದೆ.
ಇತಿಹಾಸ ಪ್ರಸಿದ್ದ ಹಾಸನಾಂಬೆ ದೇವಾಲಯದ ಬಾಗಿಲು ಅಕ್ಟೋಬರ್ 13ರಂದು ತೆರೆದಿದ್ದು, ಸುಮಾರು 12 ದಿನಗಳ ಕಾಲ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಹಾಸನಾಂಬೆಯ ಗರ್ಭಗುಡಿಯ ಬಾಗಿಲನ್ನು ತೆರೆಯಲಾಗಿತ್ತು. ಕೊರೊನಾ ಕಾರಣದಿಂದ ಎರಡು ವರ್ಷಗಳ ಕಾಲ ಸರಳವಾಗಿ ಜಾತ್ರಾ ಮಹೋತ್ಸವವನ್ನು ಆಚರಿಸಲಾಗಿತ್ತು. ಆದರೆ ಈ ಬಾರಿ ಕೊರೊನಾ ತೊಲಗಿದ ಕಾರಣ ಅದ್ಧೂರಿಯಾಗಿ ಜಾತ್ರಾ ಮಹೋತ್ಸವವನ್ನು ಆಚರಿಸಲಾಯಿತು.
ದಿನದಿಂದ ದಿನಕ್ಕೆ ಹಾಸನಾಂಬ ದೇವಾಲಯಕ್ಕೆ ಭಕ್ತರ ಸಂಖ್ಯೆ ಹೆಚ್ಚಾದ ಕಾರಣ ಎಂಟನೇ ದಿನಕ್ಕೆ ಹಾಸನಾಂಬೆ ದರ್ಶನ ಅವಧಿ ವಿಸ್ತರಣೆ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ದೇವರ ದರ್ಶನದ ಸಮಯವನ್ನು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ವಿಸ್ತರಿಸಲಾಗಿತ್ತು.

ಇಂದು 12ನೇ ದಿನವಾಗಿದ್ದು, ಇಂದು ಮುಂಜಾನೆಯಿಂದಲೇ ದೇವಾಲಯಕ್ಕೆ ಆಗಮಿಸುತ್ತಿರುವ ಭಕ್ತರು ಸರತಿ ಸಾಲಿನಲ್ಲಿ ಹಾಸನಾಂಬೆ ದೇವಿಯ ದರ್ಶನ ಪಡೆಯುತ್ತಿದ್ದಾರೆ. ಇಂದು ಸಂಜೆ 4 ಗಂಟೆಯವರೆಗೂ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಸಂಜೆ 4 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಮಹಾನೈವೇದ್ಯ ಹಾಗೂ ಉತ್ಸವವಿರುವುದರಿಂದ ಈ ವೇಳೆ ದೇವಿ ದರ್ಶನಕ್ಕೆ ಅವಕಾಶವಿರುವುದಿಲ್ಲ. ಮತ್ತೆ ರಾತ್ರಿ 11 ಗಂಟೆಯಿಂದ ನಾಳೆ ಬೆಳಗ್ಗೆ 7 ಗಂಟೆಯವರೆಗೂ ಸಾರ್ವಜನಿಕರಿಗೆ ದೇವಿ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗಿದ್ದು, ನಾಳೆ ಮಧ್ಯಾಹ್ನ 12 ಗಂಟೆ ನಂತರ ಶಾಸ್ತ್ರೋಕ್ತವಾಗಿ ಅಧಿಕಾರಿಗಳ ಸಮ್ಮುಖದಲ್ಲಿ ಗರ್ಭಗುಡಿಯ ಬಾಗಿಲು ಮುಚ್ಚಲಾಗುತ್ತದೆ.
ಸಾರ್ವಜನಿಕ ದರ್ಶನಕ್ಕೆ ಕೊನೆಯ ದಿನವಾದ ಇಂದು ಒಂದು ವಿಶೇಷ ಘಟನೆಗೆ ಹಾಸನಾಂಬ ದೇವಾಲಯ ಸಾಕ್ಷಿಯಾಗಿದೆ. ಹಾಸನಾಂಬೆಯ ದರ್ಶನಕ್ಕಾಗಿ ವ್ಯಕ್ತಿಯೊಬ್ಬರು ತಮ್ಮ ಚಿಕ್ಕಪ್ಪನನ್ನು ಬೆನ್ನ ಮೇಲೆ ಹೊತ್ತು ತಂದಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟದ ಶಿವು ಎನ್ನುವವರು ತಮ್ಮ ಚಿಕ್ಕಪ್ಪ ಕೃಷ್ಣ ಅವರನ್ನು ಬೆನ್ನ ಮೇಲೆ ಹೊತ್ತು ತಂದು ದೇವಿಯ ದರ್ಶನ ಮಾಡಿಸಿದ್ದಾರೆ. ಈ ವಿಶೇಷ ಚೇತನ ವ್ಯಕ್ತಿಗೆ ದೇವಿಯ ದರ್ಶನ ಪಡೆಯಲು ಪೊಲೀಸರು ನೆರವಾಗಿದ್ದಾರೆ. ಈ ಹಿಂದೆ ಕೂಡ ವ್ಯಕ್ತಿಯೊಬ್ಬರು ತಮ್ಮ ವಿಶೇಷ ಚೇತನ ಪತ್ನಿಯನ್ನು ಹೊತ್ತು ತಂದು ಹಾಸನಾಂಬೆ ದೇವಿಯ ದರ್ಶನ ಮಾಡಿಸಿದ್ದರು.












Click it and Unblock the Notifications