ಹಾಸನ ಭೀಕರ ಅಪಘಾತ: ಹಾಲಿನ ಲಾರಿ ಚಾಲಕ ಪೊಲೀಸರ ವಶ
ಹಾಸನ, ಅಕ್ಟೋಬರ್ 14: ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನಲ್ಲಿ ನಿನ್ನೆ(ಅಕ್ಟೋಬರ್ 13) ರಾತ್ರಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಒಂಬತ್ತು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 12 ಮಂದಿ ಗಂಭೀರ ಗಾಯಗೊಂಡಿದ್ದು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟೆಂಪೋ ಟ್ರಾವೆಲರ್, ಹಾಲಿನ ಲಾರಿ ಹಾಗೂ ಕೆಎಸ್ಆರ್ಟಿಸಿ ಬಸ್ ನಡುವೆ ಸರಣಿ ಅಪಘಾತ ನಡೆದಿದ್ದು, ಹಾಲಿನ ಲಾರಿ ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಒನ್ ವೇನಲ್ಲಿ ವೇಗವಾಗಿ ಬಂದು ಅಪಘಾತಕ್ಕೆ ಕಾರಣನಾಗಿದ್ದ ಹಾಲಿನ ಲಾರಿ ಚಾಲಕನ ನವೀನ್ನನ್ನು ಸದ್ಯ ಬಾಣಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಾಸನ ಅರಸೀಕೆರೆ ತಾಲ್ಲೂಕಿನ, ಹಳ್ಳಿಕೆರೆ ಗ್ರಾಮದ ಹದಿನಾಲ್ಕು ಜನರು ನಿನ್ನೆ (ಅಕ್ಟೋಬರ್ 13)ರಂದು ಟೆಂಪೋ ಟ್ರಾವೆಲರ್ ವಾಹನದಲ್ಲಿ ಧರ್ಮಸ್ಥಳಕ್ಕೆ ತೆರಳಿದ್ದರು. ಅಲ್ಲಿಂದ ಹಾಸನಕ್ಕೆ ಆಗಮಿಸಿ ಹಾಸನಾಂಬೆ ದೇವಿ ದರ್ಶನ ಪಡೆದು ಗ್ರಾಮಕ್ಕೆ ತೆರಳುತ್ತಿದ್ದರು. ಸ್ವಗ್ರಾಮ ತಲುಪಲು ಎರಡು ಕಿಲೋಮೀಟರ್ನಷ್ಟು ಅಂತರವಿದ್ದು, ಮನೆ ತಲುಪಲು ಐದು ನಿಮಿಷವಿರುವಾಗಲೇ ಈ ಭೀಕರ ಅಪಘಾತ ಸಂಭವಿಸಿದೆ.

ಅರಸೀಕೆರೆ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 206 ರ ಕಾಮಗಾರಿ ನಡೆಯುತ್ತಿದ್ದು, ಟಿಟಿ ವಾಹನದ ಹಿಂದೆ ಸಾರಿಗೆ ಬಸ್ ಬರುತ್ತಿತ್ತು. ಈ ವೇಳೆ ಹಾಲಿನ ಲಾರಿ ಚಾಲಕ ಶಿವಮೊಗ್ಗ ಕಡೆಯಿಂದ ಅರಸೀಕೆರೆ ಕಡೆಗೆ ಒನ್ವೇನಲ್ಲಿ ಬಂದಿದ್ದು, ಚಾಲಕನ ನಿಯಂತ್ರಣ ತಪ್ಪಿ ಮೂರು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಹಾಲಿನ ಲಾರಿ ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಹಿಂಬದಿಯಿದ್ದ ಸಾರಿಗೆ ಬಸ್ ಕೂಡ ಪಲ್ಟಿಯಾಗಿದೆ.
ಈ ಅಪಘಾತಕ್ಕೆ ಹಾಲಿನ ಲಾರಿ ಚಾಲಕನೇ ಕಾರಣ ಎಂದು ಸಾರಿಗೆ ಬಸ್ನಲ್ಲಿದ್ದ ಪ್ರತ್ಯಕ್ಷದರ್ಶಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. "ಹಾಲಿನ ಲಾರಿ ಚಾಲಕನದ್ದೇ ಸಂಪೂರ್ಣ ತಪ್ಪು. ಆತ ರಾಂಗ್ ರೂಟ್ನಲ್ಲಿ ಬಂದಿದ್ದರಿಂದ ಈ ಅಪಘಾತ ಸಂಭವಿಸಿದೆ. ಜಿಗ್-ಜಾಗ್ ರೀತಿಯಲ್ಲಿ ಟೆಂಪೊದ ಹಿಂದೆ ಮತ್ತು ಮುಂದೆ ಹಾನಿಯಾಗಿದೆ. ಹೀಗಾಗಿಯೇ ಸಾವಿನ ಸಂಖ್ಯೆ ಹೆಚ್ಚಾಗಿದೆ," ಎಂದು ತಿಳಿಸಿದ್ದಾರೆ.
ಇನ್ನು ಭೀಕರ ರಸ್ತೆ ಅಪಘಾತಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಎಡವಟ್ಟು ಕೂಡ ಕಾರಣ ಎನ್ನುವ ಆರೋಪ ಕೇಳಿಬಂದಿದೆ. ಸರಿಯಾಗಿ ಮಾರ್ಗಸೂಚಿ ಬೋರ್ಡ್ ಹಾಕದೆ ಇರುವುದರಿಂದ, ಎಡಬದಿಯ ತಿರುವಿಗೆ ಹಾಕಿದ್ದ ಬೋರ್ಡ್ ಚಾಲಕನಿಗೆ ಕಾಣಿಸದೇ ಹಾಲಿನ ಟ್ಯಾಂಕರ್ ಚಾಲಕನಿಂದ ಏಕಮುಖ ಚಾಲನೆ ಮಾಡಿದ್ದಾನೆ ಎನ್ನಲಾಗಿದೆ. ಸದ್ಯ ಆರೋಪಿ ಹಾಲಿನ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅಪಘಾತದ ಕಾರಣದ ಬಗ್ಗೆ ಇನ್ನಷ್ಟು ಮಾಹಿತಿ ಹೊರಬೀಳಬೇಕಿದೆ.
ಇನ್ನು ಘಟನೆಯಲ್ಲಿ ಲೀಲಾವತಿ (50), ಚೈತ್ರಾ (33), ಸಮರ್ಥ (10), ಡಿಂಪಿ (12), ತನ್ಮಯ್ (10), ಧ್ರುವ (2), ವಂದನಾ (20), ದೊಡ್ಡಯ್ಯ (60), ಭಾರತಿ (50) ಮೃತಪಟ್ಟಿದ್ದು, ಮೃತದೇಹಗಳನ್ನು ಅರಸೀಕೆರೆ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.











Click it and Unblock the Notifications