ಹುಬ್ಬಳ್ಳಿ: ಪಹಣಿ ಪತ್ರ ವಿಳಂಬ, ತಹಸೀಲ್ದಾರ್ ಕಚೇರಿಗೆ ಕಲ್ಲು
ಹುಬ್ಬಳ್ಳಿ, ಡಿಸೆಂಬರ್, 29: ಪಹಣಿ ಪತ್ರ ವಿತರಣೆಗೆ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ನೂರಾರು ರೈತರು ನಗರದ ತಹಸೀಲ್ದಾರ್ ಕಚೇರಿಗೆ ಸೋಮವಾರ ಕಲ್ಲು ತೂರಿ ಪ್ರತಿಭಟನೆ ನಡೆಸಿದ್ದಾರೆ.
ಅಧಿಕಾರಿಗಳು ಪಹಣಿ ಪತ್ರ ನೀಡುವುದಕ್ಕೆ ಸುಮಾರು 15ದಿನ ಕಾಯುವಂತೆ ಮಾಡಿರುವುದಲ್ಲದೇ, 10 ರೂ.ಗೆ ಕೊಡಬೇಕಾದ ಪಹಣಿಯನ್ನು 50 ರಿಂದ 100 ರೂ. ಹೆಚ್ಚುವರಿಯಾಗಿ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದ ರೈತರು, ಪಹಣಿ ವಿತರಣಾ ಕೇಂದ್ರದ ಕಿಟಕಿ ಗಾಜುಗಳನ್ನು ಧ್ವಂಸಗೊಳಿಸಿದ್ದಾರೆ.[ಹುಬ್ಬಳ್ಳಿ ವಿಮಾನ ನಿಲ್ದಾಣ ವಿಸ್ತರಣೆ ಮತ್ತಷ್ಟು ವಿಳಂಬ?]
ಹಿಂಗಾರು ಬೆಳೆ ವಿಮೆಗೆ ಡಿಸೆಂಬರ್ 31 ಕೊನೆ ದಿನವಾಗಿದೆ. ಹೀಗಾಗಿ ತರಾತುರಿಯಲ್ಲಿ ವಿಮೆ ಮಾಡಿಸಲು ಒಮ್ಮೆಲೆ ಎಲ್ಲ ರೈತರು ಪಹಣಿ ಪತ್ರ ಪಡೆಯಲು ಮುಗಿಬಿದ್ದಿದ್ದಾರೆ.[ಹುಬ್ಬಳ್ಳಿ ಬೈಕ್ ಸವಾರರಿಗೆ ಪೊಲೀಸರ ಭಯ]
ಅಲ್ಲದೇ ತಾಲೂಕಿನ ಛಬ್ಬಿ ಹಾಗೂ ಶಿರಗುಪ್ಪಿ ನಾಡಕಚೇರಿಗಳಲ್ಲಿ ಸರ್ವರ್ ತೊಂದರೆಯಿಂದ ಪಹಣಿ ಪತ್ರ ನೀಡುವುದನ್ನು ನಿಲ್ಲಿಸಲಾಗಿದೆ. ಹೀಗಾಗಿ ಎಲ್ಲ ರೈತರು ಹುಬ್ಬಳ್ಳಿ ತಹಸೀಲ್ದಾರ್ ಕಚೇರಿಗೆ ಆಗಮಿಸುತ್ತಿದ್ದಾರೆ. ಆದರೆ ತಹಶೀಲ್ದಾರ್ ಕಚೇರಿಯಲ್ಲಿ ಪಹಣಿ ವಿತರಣೆಗೆ ಕೇವಲ ಒಂದೇ ಕಂಪ್ಯೂಟರ್ ಇದ್ದು, ಜನರಿಗೆ ಕೆಲಸ ಮಾಡಿಕೊಡಲು ತಾಲೂಕು ಕಚೇರಿ ಅಧಿಕಾರಿಗಳು ಹೆಣಗಾಡುತ್ತಿದ್ದಾರೆ