ಹುಬ್ಬಳ್ಳಿಗೆ ಸ್ಮಾರ್ಟ್ ಸಿಟಿ ಕೈತಪ್ಪಲು ಸಿದ್ಧರಾಮಯ್ಯ ಕಾರಣ: ಜೋಶಿ
ಹುಬ್ಬಳ್ಳಿ,ಫೆಬ್ರವರಿ,03: ಹುಬ್ಬಳ್ಳಿ-ಧಾರವಾಡ ನಗರವು ಸ್ಮಾರ್ಟ್ ಸಿಟಿಯ ಮೊದಲ 20 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆಯದಿರುವುದಕ್ಕೆ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾರಣ. ಇವರು ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆ.
ಬುಧವಾರ ನಗರದ ಖಾಸಗಿ ಹೊಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ ಅವರು, 'ಈ ಸ್ಮಾರ್ಟ್ ಸಿಟಿ ಯೋಜನೆ ಕೇಂದ್ರ ಸರಕಾರದ ಕೊಡುಗೆ. ಸ್ವತಃ ನರೇಂದ್ರ ಮೋದಿಯವರ ವಾರಾಣಾಸಿ ಹಾಗೂ ಅರುಣ್ ಜೇಟ್ಲಿ ಅವರ ಅಮೃತಸರ ನಗರಗಳೂ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಇದಕ್ಕೆ ಕಾಂಗ್ರೆಸ್ ಪಕ್ಷದವರ ಉತ್ತರವೇನು ಎಂದು ಪ್ರಶ್ನಿಸಿದರು.[20 ಸ್ಮಾರ್ಟ್ ಸಿಟಿಗಳ ಮೊದಲ ಪಟ್ಟಿಯಲ್ಲಿ ದಾವಣಗೆರೆ, ಬೆಳಗಾವಿ]

ಶೇ.40 ರಷ್ಟು ಹುದ್ದೆ ಖಾಲಿ :
ಅವಳಿ ನಗರದ ಕಚೇರಿಗಳಲ್ಲಿ ಶೇ.40 ರಷ್ಟು ಹುದ್ದೆಗಳು ಖಾಲಿ ಇವೆ. ಅವುಗಳನ್ನು ಆದಷ್ಟು ಬೇಗ ತುಂಬಿಕೊಳ್ಳಬೇಕು. ಇನ್ನು ಸ್ಮಾರ್ಟ್ ಸಿಟಿ ಯೋಜನೆಗೆಂದೇ ಒಬ್ಬ ಐಎಎಸ್ ಅಧಿಕಾರಿಯನ್ನು ನೇಮಿಸಬೇಕು ಹಾಗೂ ಒಬ್ಬ ಡೈರೆಕ್ಟರ್ ರನ್ನು ನಿಯೋಜಿಸಬೇಕು ಹಾಗೂ ಈಗಿರುವ ಬಿಆರ್ ಟಿಎಸ್ ಯೋಜನೆಯ ಕಮೀಷನರ್ ನ್ನು ಸ್ಮಾರ್ಟ್ ಸಿಟಿ ಯೋಜನೆಗೆ ನಿಯೋಜಿಸಬೇಕೆಂದು ಕೋರಿದರು.[2016ರಲ್ಲಿ 2.5 ಲಕ್ಷ ಮಂದಿಗೆ ಐಟಿ ಉದ್ಯೋಗಾವಕಾಶ]
ಉತ್ತರ ಕರ್ನಾಟಕಕ್ಕೆ ಮೋದಿ :
ಉತ್ತರ ಕರ್ನಾಟಕ ಭಾಗದ ರೈತರ ಅಭಿವೃದ್ಧಿಗಾಗಿ ಫೆ.27 ರಂದು ಕಿಸಾನ್ ಮೇಳ ಹಮ್ಮಿಕೊಳ್ಳಲಾಗುತ್ತಿದೆ. ಈ ಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವರು ಎಂದು ಜೋಶಿ ಹೇಳಿದರು.
ಕೇಂದ್ರ ಬಿಡುಗಡೆ ಮಾಡಿದ ಹಲವಾರು ಯೋಜನೆಗಳ ಹಣ ಬಳಕೆಯಾಗದೆ ಹಾಗೇಯೇ ಉಳಿದಿದೆ. ಆದರೆ ಇದೀಗ ಮತ್ತೊಂದು ಬಜೆಟ್ ಮಂಡಿಸಲು ಎಲ್ಲಾ ತಯಾರಿ ನಡೆಯುತ್ತಿದೆ. ಕಳಸಾ-ಬಂಡೂರಿ ಯೋಜನೆಯ ಇತ್ಯರ್ಥ ಪಡಿಸಲು ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿಲ್ಲ ಎಂದು ದೂರಿದರು.['ರಾಜ್ಯದ ನೀರಿನ ಸಮಸ್ಯೆಗೆ ರಾಜಕಾರಣಿಗಳೇ ಕಾರಣ']
ಪತ್ರಿಕಾಗೋಷ್ಠಿಯಲ್ಲಿ ವಿಪಕ್ಷ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಶಾಸಕ ವೀರಭದ್ರಪ್ಪ ಹಾಲಹರವಿ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಮಾ.ನಾಗರಾಜ್, ವೀರೇಶ ಸಂಗಳದ ಹಾಜರಿದ್ದರು.












Click it and Unblock the Notifications